ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಪಾಕಿಸ್ತಾನದ ಜತೆ ಮಾತುಕತೆ ನಡೆಸಬೇಕು: ಫಾರೂಖ್
ಶ್ರೀನಗರ, ಅಕ್ಟೋಬರ್ 26: ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತಾಗಲು ಪಾಕಿಸ್ತಾನದ ಜತೆ ಮಾತುಕತೆ ನಡೆಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲದೇ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ. ಸೆಕ್ಷನ್ 370 ಮತ್ತು 35 ಎ ರದ್ದಾದ ನಂತರ, ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳು ಹೆಚ್ಚಾಗಿದ್ದು, ಈಗ ಅದನ್ನು ನಿರ್ಮೂಲನೆ ಮಾಡುವುದು ಕಷ್ಟಕರವಾಗಿದೆ ಎಂದಿದ್ದಾರೆ.
ನೀವು ಈಗಾಗಲೇ ಮಾಡಬೇಕಾದಷ್ಟು ಯುದ್ಧಗಳನ್ನು ಮಾಡಿದ್ದೀರಿ. ಈಗ ಮತ್ತೊಂದು ಯುದ್ಧ ನಡೆದರೆ ಅದು ತುಂಬಾ ಅಪಾಯಕಾರಿ. ಎರಡೂ ರಾಷ್ಟ್ರಗಳು ಪರಮಾಣು ಬಾಂಬುಗಳನ್ನು ಹೊಂದಿವೆ. ಆದರೆ ನಾವು ಸಾಯುತ್ತೇವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಸಂಸದ ಡಾ.ಫಾರೂಕ್ ಅಬ್ದುಲ್ಲಾ ಹರಿಹಾಯ್ದಿದ್ದಾರೆ.
ನನ್ನನ್ನೂ ಕೊಂದರೂ ಕಾಶ್ಮೀರ ಭಾರತದಲ್ಲಿರುತ್ತದೆಯೇ ಹೊರತು ಎಂದಿಗೂ ಪಾಕಿಸ್ತಾನ ಸೇರುವುದಿಲ್ಲ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದರು.
ಅಕ್ಟೋಬರ್ 7 ರಂದು ಗುರುದ್ವಾರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಈದ್ಗಾದಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲ ಸುಪಿಂದರ್ ಕೌರ್ ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಅಬ್ದುಲ್ಲಾ, ಕಾಶ್ಮೀರದ ಜನರು ಧೈರ್ಯದಿಂದ ಇರಬೇಕು ಮತ್ತು ಒಗ್ಗಟ್ಟಾಗಿ ಕೊಲೆಗಾರರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ನಾವು ಈ ಮೃಗಗಳ ವಿರುದ್ಧ ಹೋರಾಡಬೇಕು, ಏನೇ ಬಂದರೂ ನಾವು ಭಾರತದ ಭಾಗವಾಗಿರಬೇಕು, ಅವರು ನನ್ನನ್ನು ಶೂಟ್ ಮಾಡಿ ಕೊಂದರೂ ಈ ನಿರ್ಧಾರ ಬದಲಾಗಬಾರದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅವರು 1990ರಲ್ಲಿ ಭಯದಿಂದ ಎಲ್ಲರಬ ಕಣಿವೆ ರಾಜ್ಯವನ್ನು ತೊರೆದರು ಆದರೆ ಸಿಖ್ ಸಮುದಾಯ ಮಾತ್ರ ಕಾಶ್ಮೀರ ತೊರೆಯಲಿಲ್ಲ, ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ, ಏನೇ ಬಂದರು ನಾವು ನಿಮ್ಮ ಜೊತೆಗಿರುತ್ತೇವೆ ಎಂದು ವಿಶ್ವಾಸ ಮಾತುಗಳನ್ನಾಡಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ಸೋಲು ಕಾಣುತ್ತಿದ್ದಂತೆ ಕೋಟ್ಯಂತರ ಅಭಿಮಾನಿಗಳು ನಿರಾಸೆಗೊಳಗಾಗಿದ್ದಾರೆ. ಅದಾಗ್ಯೂ ಜಮ್ಮು-ಕಾಶ್ಮೀರದ ಕೆಲವೊಂದು ಪ್ರದೇಶಗಳಲ್ಲಿ ಪಾಕ್ ಗೆಲುವಿನ ಸಂಭ್ರಮ ಮಾಡಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಪಾಕಿಸ್ತಾನದ ಗೆಲುವು ಸಂಭ್ರಮಿಸಿದ್ದಕ್ಕೆ ಜನರು ಏಕೆ ಉದ್ರೇಕಗೊಂಡಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಮುಫ್ತಿ, ಭಾರತದ ವಿರುದ್ಧ ಗೆದ್ದ ಪಾಕ್ ಗೆಲುವನ್ನ ಸಂಭ್ರಮಿಸುತ್ತಿರುವ ಕಾಶ್ಮೀರಿಗಳ ಮೇಲೆ ಇಷ್ಟೊಂದು ಕೋಪ ಏಕೆ? ಕೆಲವರು ಕೊಲೆಗಡುಕ ಘೋಷಣೆ ಕೂಗುತ್ತಿದ್ದಾರೆ.
ದೇಶ ದ್ರೋಹಿಗಳಿಗೆ ಗುಂಡಿಕ್ಕಿ ಕೊಲೆ ಮಾಡಿ ಎಂಬ ಕರೆ ನೀಡುತ್ತಿದ್ದಾರೆ. ಆದರೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದುಕೊಳ್ಳುತ್ತಿದ್ದಂತೆ ಅನೇಕರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು ಎಂಬುದನ್ನ ಯಾರೂ ಮರೆತಿಲ್ಲ ಎಂದಿದ್ದಾರೆ.
ಭಾರತ ಸೋಲು ಕಾಣುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನ ಮೊದಲು ಅಭಿನಂದಿಸಿದ ವಿರಾಟ್ ಕೊಹ್ಲಿಯಂತೆ ಒಪ್ಪಿಕೊಳ್ಳಲು ಕಲಿಯಿರಿ. ಸರಿಯಾದ ಮನೋಭಾವದಿಂದ ವರ್ತಿಸಿ ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಉಗ್ರ ಸಂಘಟನೆಗಳ ಎಚ್ಚರಿಕೆ: ಜಮ್ಮು-ಕಾಶ್ಮೀರದಲ್ಲಿ ಆಟ ಈಗಷ್ಟೇ ಪ್ರಾರಂಭವಾಗಿದೆ ಎಂದು ಹೊಸ ಉಗ್ರ ಸಂಘಟನೆ ಎಚ್ಚರಿಕೆ ರವಾನಿಸಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಬೆನ್ನಲ್ಲೇ ಈ ಎಚ್ಚರಿಕೆ ಸಂದೇಶವನ್ನು ರೆಸಿಸ್ಟೆನ್ಸ್ ಫ್ರಂಟ್ ನೀಡಿದೆ.
ಟಿಆರ್ ಎಫ್ ನ ಉಗ್ರರನ್ನು ಬಂಧಿಸಲು ಎನ್ ಐಎ ಕೇಂದ್ರಾಡಳಿತ ಪ್ರದೇಶದ ಹಲವು ಭಾಗಗಳಲ್ಲಿ ದಾಳಿ ನಡೆಸಿದ ಬೆನ್ನಲ್ಲೇ " ಇನ್ನೂ ತೀವ್ರವಾಗಿ, ಆಕ್ರಮಣಕಾರಿಯಾಗಿ ದಾಳಿ ನಡೆಸುತ್ತೇವೆ" ಎಂದು ರೆಸಿಸ್ಟೆನ್ಸ್ ಫ್ರಂಟ್ ಎಚ್ಚರಿಸಿದೆ.
ಭದ್ರತಾ ಸಂಸ್ಥೆಗಳು ಈ ಎಚ್ಚರಿಕೆ ಸಂದೇಶವನ್ನೊಳಗೊಂಡ ಪತ್ರವನ್ನು ಹತಾಶಗೊಂಡಿರುವ ಉಗ್ರರು ಗಮನಸೆಳೆಯಲು ಯತ್ನಿಸುತ್ತಿರುವುದಾಗಿ ಎಂದು ಹೇಳಿವೆ. ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯ್ಬಾ, ಟಿಆರ್ ಫ್ 2019 ರಲ್ಲಿ ಮೊದಲ ಬಾರಿಗೆ ಕಾಶ್ಮೀರದಲ್ಲಿ ಕಾಣಿಸಿಕೊಂಡಿತ್ತು.
ಟಿಆರ್ ಫ್ ನ ಹಿಂಸಾಚಾರಕ್ಕೆ ಸೇನೆ ನೀಡಿದ್ದ ಪ್ರತಿಕ್ರಿಯೆಯಿಂದ ಉಗ್ರ ಸಂಘಟನೆಯನ್ನು ಹತಾಶಗೊಳಿಸಿದೆ. ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ 8 ಮಂದಿ ಉಗ್ರರು ಹತರಾಗಿದ್ದಾರೆ. ಈ ಎಚ್ಚರಿಕೆ ಸಂದೇಶ ಹತಾಶಗೊಂಡಿರುವ ಉಗ್ರರ ಗಮನ ಸೆಳೆಯುವ ಯತ್ನವಾಗಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
Recommended Video