8 ತಿಂಗಳ ಬಂಧನದ ಅನುಭವದಲ್ಲಿ ಒಮರ್ ಅಬ್ದುಲ್ಲಾ ಹೇಳಿದ್ದೇನು?
ಶ್ರೀನಗರ್, ಮಾರ್ಚ್ 27: ಎಂಟು ತಿಂಗಳು ಬಂಧನದಲ್ಲಿ ಇದ್ದ ಅನುಭವದ ಮೇಲೆ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಬುಧವಾರ ಟ್ವಿಟರ್ ನಲ್ಲಿ ನೀಡಿದ ಲಾಕ್ ಡೌನ್ ಸಮಯದ ಸಲಹೆ ಇಂಟರೆಸ್ಟಿಂಗ್ ಆಗಿದೆ. ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ನಿತ್ಯವೂ ಹೇಗಿರಬೇಕು ಎಂಬುದನ್ನು ಅಭ್ಯಾಸ ಮಾಡಿಕೊಂಡು, ಅದನ್ನೇ ಅನಸರಿಸಬೇಕು ಎಂಬ ಸಲಹೆ ಮಾಡಿದ್ದಾರೆ.
ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಅವರು, ದೈನಂದಿನ ಚಟುವಟಿಕೆ ಒಂದೇ ರೀತಿಯಲ್ಲಿ ಇರುವಂತೆ ಅಭ್ಯಾಸ ಮಾಡಿ, ಆ ನಂತರ ಅದನ್ನೇ ಮಾಡುತ್ತಾ ಇರಲು ಪ್ರಯತ್ನಿಸಿ ಎಂದಿದ್ದಾರೆ. ಹಲವು ತಿಂಗಳಿಂದ ನಾನು ಹರಿ ನಿವಾಸ್ ಸಬ್ ಜೈಲ್ ನಲ್ಲಿ ಇದ್ದೆ. ಒಂದೇ ರೀತಿಯ ಅಭ್ಯಾಸಕ್ಕೆ ಬದ್ಧನಾಗಿದ್ದೆ. ಈ ಅಭ್ಯಾಸದಿಂದ ನನಗೆ ಗುರಿ ಸಿಕ್ಕಂತೆ ಆಯಿತು ಎಂದು ಟ್ವೀಟ್ ಮಾಡಿದ್ದಾರೆ.
ಐವತ್ತು ವರ್ಷದ ಅಬ್ದುಲ್ಲಾ ಕೆಲವು ವ್ಯಾಯಾಮಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. "ವ್ಯಾಯಾಮ, ವ್ಯಾಯಾಮ, ವ್ಯಾಯಾಮ. ಈ ಅಂಶವನ್ನು ಇದಕ್ಕಿಂತ ಹೆಚ್ಚು ಹೇಳಲಾರೆ. ಹರಿನಿವಾಸ್ ಸಬ್ ಜೈಲ್ ನಲ್ಲಿ ಮೈದಾನಕ್ಕೆ ಹೋಗುವುದಕ್ಕೆ ಅವಕಾಶ ಇತ್ತು. ಅಲ್ಲಿ ಜಾಗವೂ ಇತ್ತು. ಆ ವಿಷಯದಲ್ಲಿ ನಾನು ಅದೃಷ್ಟವಂತ. ವಾತಾವರಣ ಸರಿಯಿಲ್ಲ ಅಂದಾಗ ಒಳಗಡೆಯೇ ವ್ಯಾಯಾಮ ಮಾಡುತ್ತಿದ್ದೆ. ಕಾರಿಡಾರ್ ನಲ್ಲಿ ಓಡಾಡುತ್ತಿದ್ದೆ. ಮೆಟ್ಟಿಲು ಹತ್ತಿಳಿಯುತ್ತಿದ್ದೆ" ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಮೇಲೆ, ಒಮರ್ ಅಬ್ದುಲ್ಲಾ ಅವರನ್ನು ಬಂಧನದಲ್ಲಿ ಇಡಲಾಗಿತ್ತು. ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ಎಂಟು ತಿಂಗಳು ಇದ್ದ ಅವರು, ಈಚೆಗೆ ಬಿಡುಗಡೆ ಆಗಿದ್ದಾರೆ.