370 ವಿಧಿ ರದ್ದತಿ ಬಳಿಕ ಜಮ್ಮು & ಕಾಶ್ಮೀರದಲ್ಲಿ ಮೊದಲ ಚುನಾವಣೆ: ಎಷ್ಟು ಕ್ಷೇತ್ರ? ಎಷ್ಟು ಅಭ್ಯರ್ಥಿಗಳು?
ಶ್ರೀನಗರ, ನವೆಂಬರ್ 28: ಜಮ್ಮು ಮತ್ತು ಕಾಶ್ಮೀರವು 370ನೇ ವಿಧಿ ರದ್ದುಗೊಂಡ ಬಳಿಕ ಮೊದಲ ಬಾರಿಗೆ ಚುನಾವಣೆಯನ್ನು ಕಾಣುತ್ತಿದೆ. ನವೆಂಬರ್ 28ರಂದು ಜಿಲ್ಲಾ ಅಭಿವೃದ್ಧಿ ಸಮಿತಿಗಳ (ಡಿಡಿಸಿ) ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಶನಿವಾರ ಮೊದಲ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರದ ಒಟ್ಟು 43 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇದರಲ್ಲಿ 25 ಕ್ಷೇತ್ರಗಳು ಕಾಶ್ಮೀರ ಮತ್ತು 18 ಜಮ್ಮು ಪ್ರದೇಶದಲ್ಲಿವೆ.
ಕಣದಲ್ಲಿರುವ 1427 ಅಭ್ಯರ್ಥಿಗಳ ಭವಿಷ್ಯವನ್ನು ಜಮ್ಮು ಮತ್ತು ಕಾಶ್ಮೀರದಾದ್ಯಂತ ಏಳು ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತದಾನ ನಡೆಯಲಿದೆ. ಶನಿವಾರದ ಮೊದಲ ಹಂತದಲ್ಲಿ ಜಮ್ಮು ವಿಭಾಗದಲ್ಲಿ 124 ಅಭ್ಯರ್ಥಿಗಳು ಮತ್ತು ಕಾಶ್ಮೀರ ವಿಭಾಗದಲ್ಲಿ 172 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಡಿಡಿಸಿ ಚುನಾವಣೆ: ಬಿಜೆಪಿ ಪ್ರಣಾಳಿಕೆಯಲ್ಲಿ 70,000 ಉದ್ಯೋಗ ಭರವಸೆ
ಮೊದಲ ಹಂತದ ಚುನಾವಣೆಯು ಸುಗಮವಾಗಿ ನಡೆಯಲು ಒಟ್ಟು 2,146 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ 296 ಮಂದಿಯಲ್ಲಿ 89 ಮಹಿಳೆಯರಿದ್ದಾರೆ. ಒಟ್ಟು 280 ಕ್ಷೇತ್ರಗಳ ಪೈಕಿ ಈಗ 43 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಕೆ.ಕೆ. ಶರ್ಮಾ ತಿಳಿಸಿದ್ದಾರೆ. ಬಿಜೆಪಿ, ಅಪ್ನಿ ಪಾರ್ಟಿ ಮತ್ತು ಗುಪ್ಕರ್ ಒಕ್ಕೂಟಗಳು ಇಲ್ಲಿ ಸ್ಪರ್ಧಿಸುತ್ತಿವೆ. ಮುಂದೆ ಓದಿ.
ಡಿಡಿಸಿ ಜತೆ ಪಂಚಾಯತ್ ಉಪ ಚುನಾವಣೆ
ಇನ್ನು ಪಂಚಾಯತ್ ಉಪ ಚುನಾವಣೆಗಳಲ್ಲಿ ಸರಪಂಚ್ ಚುನಾವಣೆಯ ಮೊದಲ ಹಂತದಲ್ಲಿ 94 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. 279 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಇದರಲ್ಲಿ 76 ಮಹಿಳಾ ಅಭ್ಯರ್ಥಿಗಳಿದ್ದಾರೆ. ಒಟ್ಟು 368 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, 852 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ 217 ಮಹಿಳಾ ಅಭ್ಯರ್ಥಿಗಳಿದ್ದಾರೆ. ಡಿಡಿಸಿ ಚುನಾವಣೆ ಮತ್ತು ಪಂಚಾಯತ್ ಉಪ ಚುನಾವಣೆಗಳು ಎಂಟು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 19ರಂದು ಮುಕ್ತಾಯಗೊಳ್ಳಲಿವೆ. ಡಿಸೆಂಬರ್ 22ರಂದು ಮತ ಎಣಿಕೆ ನಡೆಯಲಿದೆ.
ಕೋವಿಡ್ ನಿಯಮ ಪಾಲನೆ
ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆ ಚುನಾವಣೆ ನಡೆಯುತ್ತಿರುವುದರಿಂದ ಮತಗಟ್ಟೆಗಳಲ್ಲಿ ಸುರಕ್ಷತೆ ಕಾಪಾಡಲು ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮತದಾರರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿರುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಮಾಸ್ಕ್ ಧರಿಸದೆ ಬಂದರೆ ಮತದಾರರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಅಧಿಕಾರಿಗಳ ಬಳಿ ಹೋಗಲೂ ಹಣವಿಲ್ಲ
ಸ್ಥಳೀಯ ಚುನಾವಣೆಯಲ್ಲಿ ಈ ಬಾರಿ ಮಹಿಳಾ ಅಭ್ಯರ್ಥಿಗಳ ಉತ್ಸಾಹ ಸಾಕಷ್ಟು ನಿರೀಕ್ಷೆ ಮೂಡಿಸಿದೆ. 'ಈ ಪ್ರದೇಶದಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲದ ಜನರು ಡಿಸಿ ಕಚೇರಿಗೆ ತೆರಳಲು ಬೇಕಾದಷ್ಟು ಹಣ ಕೂಡ ಹೊಂದಿಲ್ಲ. ಹೀಗಿರುವಾಗ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲು ಅವರ ಬಳಿ ದುಡ್ಡು ಎಲ್ಲಿಂದ ಬರಬೇಕು' ಎಂದು ಅನಂತ್ ನಾಗ್ ಜಿಲ್ಲೆಯ ಲಾರ್ನೂದಲ್ಲಿ ಚುನಾವಣೆಗೆ ನಿಂತಿರುವ ಪಿಡಿಪಿ ಅಭ್ಯರ್ಥಿ ಖಾಲಿದಾ ಬೀಬಿ ಈ ಭಾಗದಲ್ಲಿ ರಾಜಕೀಯ ಪ್ರತಿನಿಧಿತನದ ಕೊರತೆಯನ್ನು ವಿವರಿಸಿದ್ದಾರೆ.
ರಾಜಕೀಯ ಪ್ರತಿನಿಧಿತ್ವದ ಕೊರತೆ
'2019ರ ಅಗಸ್ಟ್ 5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಕಣಿವೆ ಭಾಗದಲ್ಲಿ ರಾಜಕೀಯ ನಿರ್ವಾತ ಏರ್ಪಟ್ಟಿದೆ. ಪಂಚಾಯತ್ ವ್ಯಾಪ್ತಿಗೆ ಕೆಲವೇ ಅಂಶಗಳು ಬರುತ್ತವೆ. ಆದರೆ ಇದು ದೊಡ್ಡ ವೇದಿಕೆ. ಮುಂಚೆ ಒಬ್ಬ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಈಗ ತಳಮಟ್ಟದಿಂದ 14 ಜನಪ್ರತಿನಿಧಿಗಳು ಇರಲಿದ್ದಾರೆ. ಹೀಗಾಗಿ ಇಲ್ಲಿ ಈಗ ಕೆಲಸ ಮಾಡುವುದು ಬಹುದೊಡ್ಡ ಅವಕಾಶ' ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆ
'ಇಲ್ಲಿನ ದೊಡ್ಡ ಸಮಸ್ಯೆಗಳೆಂದರೆ ರಸ್ತೆಗಳು, ವಿದ್ಯುತ್ ಮತ್ತು ಆಸ್ಪತ್ರೆಗಳು. 370ನೇ ವಿಧಿಯನ್ನು ಮರಳಿ ತರುವುದು ನಮ್ಮ ಹಿರಿಯ ನಾಯಕರು ನೋಡಿಕೊಳ್ಳಲಿರುವ ದೊಡ್ಡ ಹೋರಾಟ. ಈಗ ನಾವು ಸೂಕ್ತ ಸಂಪರ್ಕ ವ್ಯವಸ್ಥೆ, ಶಿಕ್ಷಣ ಸೌಲಭ್ಯಗಳಿಲ್ಲದ ವಿದ್ಯಾರ್ಥಿಗಳ ಬಗ್ಗೆ ಮುಖ್ಯ ಗಮನ ಹರಿಸಬೇಕಿದೆ' ಎಂದು ಕಾಂಗ್ರೆಸ್ನ ಫರ್ಹಾನಾ ಅಖ್ತರ್ ತಿಳಿಸಿದ್ದಾರೆ.