ಭಾರಿ ವಿವಾದ ಸೃಷ್ಟಿಸಿದ ಭೂ ಹಗರಣದಲ್ಲಿ ಫಾರೂಕ್ ಅಬ್ದುಲ್ಲಾ, ಮುಫ್ತಿ ಹೆಸರು
ಶ್ರೀನಗರ, ನವೆಂಬರ್ 25: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರಳಿ ತರುವ ಪ್ರಯತ್ನವಾಗಿ ರಚಿಸಲಾಗಿರುವ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಎಡಪಕ್ಷಗಳು, ಕಾಂಗ್ರೆಸ್ ಮುಂತಾದ ಎನ್ಡಿಎಯೇತರ ಪಕ್ಷಗಳ ಒಕ್ಕೂಟ ಗುಪ್ಕರ್ ಮೈತ್ರಿಕೂಟ ಹಲವು ವಿವಾದಗಳ ನಡುವೆ ಈಗ ಭೂಹಗರಣದ ಆರೋಪಕ್ಕೆ ಸಿಲುಕಿದೆ.
ರೋಶಿನಿ ಭೂ ಹಗರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರ ಹೆಸರು ಕೇಳಿಬಂದ ಬೆನ್ನಲ್ಲೇ, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಮ್ಮು & ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ 43 ಕೋಟಿ ರೂ ಅಕ್ರಮ: ಫಾರೂಕ್ ಅಬ್ದುಲ್ಲಾ ವಿಚಾರಣೆ
ಫಾರೂಕ್ ಅಬ್ದುಲ್ಲಾ ಅವರು 90ರ ದಶಕದಲ್ಲಿ ಏಳು ಕನಾಲ್ ಭೂಮಿಯನ್ನು (605 ಚದರ ಗಜಗಳು) ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದರು. 1998ರಲ್ಲಿ ಜಮ್ಮುವಿನ ಸುಂಜ್ವಾನ್ನಲ್ಲಿ ಫಾರೂಕ್ 3 ಕನಾಲ್ ಭೂಮಿ ಖರೀದಿಸಿದ್ದರು. ಆದರೆ ಸಮೀಪದ ಅರಣ್ಯ ಪ್ರದೇಶದಲ್ಲಿ 7 ಕನಾಲ್ ಭೂಮಿಯನ್ನು ಅವರು ಅತಿಕ್ರಮಿಸಿದ್ದರು.
ಈ ಭೂಮಿಯ ಮಾರುಕಟ್ಟೆ ಬೆಲೆ ಸುಮಾರು 10 ಕೋಟಿ ರೂ ಇರಬಹುದು. ಬಳಿಕ ರೋಶಿನಿ ಕಾಯ್ದೆಯಡಿ ಜಮ್ಮು ಮತ್ತು ಶ್ರೀನಗರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಕಚೇರಿ ಸ್ಥಾಪಿಸಲು ಕೂಡ ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಮುಂದೆ ಓದಿ.
ಕಾಂಗ್ರೆಸ್ ಗುಪ್ಕರ್ ಮೈತ್ರಿಕೂಟದ ಭಾಗ, ಜತೆಯಾಗಿ ಚುನಾವಣೆ ಎದುರಿಸುತ್ತೇವೆ: ಫಾರೂಕ್
ಫಾರೂಕ್ ನಿರಾಕರಣೆ
ಭೂಮಿಯನ್ನು ಅತಿಕ್ರಮಿಸಿರುವುದು ಮಾತ್ರವಲ್ಲದೆ, ವಾಸ್ತವಗಳನ್ನು ತಿರುಚಿ ವಂಚಿಸಿದ್ದಾರೆ ಎಂದೂ ಕಂದಾಯ ಇಲಾಖೆ ದಾಖಲೆಗಳಲ್ಲಿ ಹೇಳಲಾಗಿದೆ. ಆದರೆ ತಮ್ಮ ಮೇಲಿನ ಆರೋಪಗಳನ್ನು ಫಾರೂಕ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ಇದು ತಮ್ಮ ಹೋರಾಟಕ್ಕೆ ಹಿನ್ನಡೆಯುಂಟುಮಾಡುವ ಮತ್ತೊಂದು ಸಂಚು ಎಂದು ದೂರಿದ್ದಾರೆ.
25,000 ಕೋಟಿ ರೂ ಹಗರಣ
ಸುಮಾರು 25,000 ಕೋಟಿ ರೂ ಭೂ ಹಗರಣದಲ್ಲಿ ರಾಜಕಾರಣಿಗಳು, ಕಂದಾಯ ಅಧಿಕಾರಿಗಳು, ಪೊಲೀಸರು ಸೇರಿದಂತೆ ಅನೇಕ ಪ್ರಭಾವಿಗಳು ಸಾವಿರಾರು ಹೆಕ್ಟೇರ್ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಬಯಲಾಗಿದೆ. ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೆಸರು ಕೂಡ ಇದರಲ್ಲಿ ಕೇಳಿಬಂದಿದೆ. ಮಾಜಿ ಹಣಕಾಸು ಸಚಿವ ಹಸೀಬ್ ದ್ರಾಬು ಮತ್ತು ಅವರ ಪತ್ನಿ ಶೆಹಜದಾ ಬಾನೋ, ಮಕ್ಕಳಾದ ಈಜಾಜ್ ಮತ್ತು ಇಫ್ತಿಕಾರ್, ಕಾಂಗ್ರೆಸ್ ನಾಯಕ ಕೆ.ಕೆ. ಆಮ್ಲಾ ಮತ್ತು ಅವರ ಪತ್ನಿ ರಚನಾ ಅವರ ಮೇಲೆ ಸಿಬಿಐ ಕಣ್ಣಿಟ್ಟಿದೆ.
ಮೂರು ಪ್ರಕರಣಗಳ ದಾಖಲು
ರೋಶಿನಿ ಯೋಜನೆಯಡಿ ಸರ್ಕಾರವು ಭಾರಿ ಪ್ರಮಾಣದಲ್ಲಿ ಭೂಮಿಯನ್ನು ಒತ್ತುವರಿ ಮಾಡಿರುವ ಪ್ರಕರಣದ ಸಿಬಿಐ ತನಿಖೆಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಸರ್ಕಾರಿ ಅಧಿಕಾರಿಗಳನ್ನು ಹಾಗೂ ಕೇಂದ್ರದ ಕಾರ್ಯದರ್ಶಿ ದರ್ಜೆಯ ಹಿರಿಯ ಅಧಿಕಾರಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂ ಅತಿಕ್ರಮಣದ ಆರೋಪದ ಸಂಬಂಧ ಸಿಬಿಐ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ.
ರದ್ದುಗೊಳಿಸಿದ್ದ ಗವರ್ನರ್ ಮಲಿಕ್
ಈ ಯೋಜನೆಯಲ್ಲಿ ನಡೆದ ಎಲ್ಲ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಪ್ರತಿ ಎಂಟು ವಾರಕ್ಕೊಮ್ಮೆ ತನಿಖೆ ಪ್ರಗತಿ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರ ಆಡಳಿತವು ಆರು ತಿಂಗಳಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಭೂಪರಿವರ್ತನೆಗಳನ್ನು ರದ್ದುಗೊಳಿಸುವ ಮತ್ತು ಸಂಪೂರ್ಣ ಭೂಮಿಯನ್ನು ಮರಳಿ ಪಡೆದುಕೊಳ್ಳುವುದಾಗಿ ಹೇಳಿಕೆ ನೀಡಿತ್ತು.
ರೋಶಿನಿ ಯೋಜನೆಯಡಿ ಸುಮಾರು 1250 ಹೆಕ್ಟೇರ್ ಭೂಮಿಯಲ್ಲಿ ಶೇ 15.85ರಷ್ಟು ಭೂಮಿಯ ಆಸ್ತಿ ಹಕ್ಕನ್ನು ವಿತರಿಸಲಾಗಿತ್ತು. ವಿದ್ಯುತ್ ಯೋಜನೆಗಳಿಗೆ ಹಣಕಾಸಿನ ಮೂಲಗಳನ್ನು ಸೃಷ್ಟಿಸುವುದು ಮತ್ತು ಸರ್ಕಾರಿ ಭೂಮಿ ಖರೀದಿಸಿದವರಿಗೆ ಆಸ್ತಿ ಹಕ್ಕು ನೀಡುವುದು ಇದರ ಉದ್ದೇಶವಾಗಿತ್ತು. 2018ರ ನವೆಂಬರ್ 28ರಂದು ಆಗಿನ ಲೆಫ್ಟಿನೆಂಟ್ ಗವರ್ನರ್ ಸತ್ಯಪಾಲ್ ಮಲಿಕ್ ಈ ಯೋಜನೆಯನ್ನು ರದ್ದುಗೊಳಿಸಿದ್ದರು.