ಪುಲ್ವಾಮದ ಆ ಭೀಕರ ಸ್ಫೋಟದ ಸದ್ದು 10 ಕಿ.ಮೀ.ವರೆಗೂ ಕೇಳಿತ್ತು!
ಶ್ರೀನಗರ, ಫೆಬ್ರವರಿ 15: 44 ಯೋಧರನ್ನು ಬಲಿತೆಗೆದುಕೊಂಡ ಕ್ರೂರಾತಿಕ್ರೂರ ದಾಳಿಗೆ ದೇಶ ನಡುಗಿದೆ. ಈ ದಾಳಿ ಅದೆಷ್ಟು ಭಯಂಕರವಾಗಿತ್ತು ಎಂದರೆ ಸುಮಾರು 10 ಕಿ.ಮೀ.ದೂರದವರೆಗೂ ಅದರ ಶಬ್ದ ಕೇಳಿಸಿತ್ತು!
ಪುಲ್ವಾಮಾ ಜಿಲ್ಲೆಗೆ ಹೊಂದಿಕೊಂಡಿರುವ ಶ್ರೀನಗರದವರೆಗು ಈ ಸದ್ದು ಕೇಳಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ಮತ್ತು ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಮೃತದೇಹಗಳು ರಸ್ತೆಯಲ್ಲಿ ಛಿದ್ರ ಛಿದ್ರವಾಗಿ ಬಿದ್ದಿದ್ದವು. ಗುರುತು ಪತ್ತೆಹಚ್ಚಲು ಸಾಕಷ್ಟು ಸಮಯ ಹಿಡಿಯಬಹುದು ಎನ್ನಲಾಗಿದ್ದು, ಹುತಾತ್ಮ ಯೋಧರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್ಪಿಎಫ್ ಜವಾನ ಹುತಾತ್ಮ
2001 ರ ನಂತರ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿ ಇದಾಗಿದ್ದು, 2001 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಕಾರ್ ಬಾಂಬ್ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 41 ಜನರು ಬಲಿಯಾಗಿದ್ದರು.
19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ
ಅದಾದ ನಂತರ ನಡೆದ ಭೀಕರ ಕಾರ್ ಬಾಂಬ್ ದಾಳಿ ಇದಾಗಿದ್ದು, ಒಟ್ಟು 44 ಸೈನಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ಸೇರಿದಂತೆ ನಾಯಕರು ಈ ದಾಳಿಯನ್ನು ಕಟು ಶಬ್ದಗಳಿಂದ ಟೀಕಿಸಿ, ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ, ಯೋಧರ ರಕ್ತದ ಕಣಕಣಕ್ಕೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದಿದ್ದಾರೆ.