ವಿಡಿಯೋ: J&K ಮಸೀದಿಯ ಹೊರಗೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ
ಅನಂತನಾಗ್ ಮೇ 3: ಇಂದು ಎಲ್ಲೆಡೆ ರಂಜಾನ್ ಆಚರಣೆಯ ಸಡಗರ ಸಂಭ್ರಮ ಮನೆ ಮಾಡಿದೆ. ಆದರೆ ಕೆಲ ದುಷ್ಕರ್ಮಿಗಳಿಂದಾಗಿ ಕೆಲವೆಡೆ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನದ ಜೋಧ್ಪುರ ಹಿಂಸಾಚಾರ ವರದಿ ಬೆನ್ನಲ್ಲೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿಯೂ ಹಿಂಸಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
ಪ್ರಪಂಚದಾದ್ಯಂತ ಇರುವ ಇಸ್ಲಾಂ ಧರ್ಮದ ಅನುಯಾಯಿಗಳು ರಂಜಾನ್ ಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ. ಈ ದಿನ ಭಾರತದ ಕೆಲವು ಸ್ಥಳಗಳಲ್ಲಿ ಆತಂಕಕಾರಿ ಘಟನೆಗಳು ಮುನ್ನೆಲೆಗೆ ಬಂದಿವೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಸೀದಿಯ ಹೊರಾಂಗಣದಲ್ಲಿ ಬೆಳಗ್ಗೆ ಈದ್ ನಮಾಝಿನ ಬಳಿಕ ಕಲ್ಲು ತೂರಾಟ ನಡೆದಿದೆ. ಭದ್ರತಾ ಪಡೆಗಳ ಮೇಲೆ ಜನರು ಕಲ್ಲು ತೂರಿರುವುದು ವರದಿಯಾಗಿದೆ.
ಕಲ್ಲು ತೂರಾಟದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭದ್ರತಾ ಪಡೆಗಳ ಮೇಲೆ ಹಲವಾರು ಜನರು ಕಲ್ಲು ತೂರಾಟ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸುದ್ದಿ ಪೋರ್ಟಲ್ನ ಪ್ರಕಾರ, ಈದ್-ಉಲ್-ಫಿತರ್ ಪ್ರಯುಕ್ತ ಪ್ರಾರ್ಥನೆಯ ಸಮಯದಲ್ಲಿ ಕೆಲವರು 'ಆಜಾದ್ ಕಾಶ್ಮೀರ' ಎಂಬ ಘೋಷಣೆಗಳನ್ನು ಎತ್ತಿದರು. ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿದ ತಕ್ಷಣ ದುಷ್ಕರ್ಮಿಗಳು ಅವರ ಮೇಲೆ ಕಲ್ಲು ತೂರಾಟವನ್ನು ಪ್ರಾರಂಭಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದೀಗ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಅಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ಇದು ಕೆಲವು ತಪ್ಪು ತಿಳುವಳಿಕೆಯಿಂದ ನಡೆದ ಸಣ್ಣ ಘರ್ಷಣೆ ಆಗಿದೆ. ಇಂದು ಮುಂಜಾನೆ ಕಾಶ್ಮೀರದ ಅನಂತನಾಗ್ನಲ್ಲಿ ಭದ್ರತಾ ಪಡೆಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದೆ ಎಂದರು.
ಜೋಧ್ಪುರದಲ್ಲೂ ಹಿಂಸಾಚಾರ
Recommended Video
ರಾಜಸ್ಥಾನದ ಜೋಧ್ಪುರದಲ್ಲೂ ಹಿಂಸಾಚಾರ ನಡೆದಿದ್ದು ಅಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಸಿಲಾಗಿದೆ. ಈದ್-ಉಲ್-ಫಿತರ್ ಮತ್ತು ಅಕ್ಷಯ ತೃತೀಯಾ ಹಬ್ಬಕ್ಕೂ ಮುನ್ನ ಸೋಮವಾರ ರಾತ್ರಿ ಜೋಧ್ಪುರ ನಗರದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದೆ. ಒಂದು ಸಮುದಾಯದ ಕೆಲವು ದುಷ್ಕರ್ಮಿಗಳು ಈದ್ಗೆ ಮುನ್ನ ಬಲ್ಮುಕಂದ್ ಬಿಸ್ಸಾ ವೃತ್ತದಲ್ಲಿ ಕೇಸರಿ ಧ್ವಜವನ್ನು ತೆಗೆದು ಇಸ್ಲಾಮಿಕ್ ಧ್ವಜವನ್ನು ಹಾಕಿದ್ದಾರೆ. ಇದರಿಂದ ಹಿಂದೂ ಸಂಘಟನೆಯ ಯುವಕರೂ ಪ್ರಶ್ನೆಸಲು ಮುಂದಾಗಿದ್ದಾರೆ. ವಾದ ವಿಕೋಪಕ್ಕೆ ತಿರುಗಿ ಜಲೋರಿ ಗೇಟ್ ಛೇದಕದಲ್ಲಿ ಎಡರು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಎರಡು ಸಮುದಾಯಗಳ ನಡುವಿನ ವಾದಗಳು ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟವೂ ವರದಿಯಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.