ಹಣ ವರ್ಗಾವಣೆ ಆರೋಪ; ಮೆಹಬೂಬ ಮುಫ್ತಿ ತಾಯಿಗೆ ಸಮನ್ಸ್
ಶ್ರೀನಗರ, ಏಪ್ರಿಲ್ 9: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಪಲ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬ ಮುಫ್ತಿ ಅವರ ತಾಯಿ ಗುಲ್ಮನ್ ನಜೀರ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿ ಏಪ್ರಿಲ್ 15ರಂದು ಕೇಂದ್ರ ತನಿಖಾ ಸಂಸ್ಥೆ ಎದುರು ಹಾಜರಾಗುವಂತೆ ಸೂಚಿಸಿದೆ.
ಈ ನಡೆಯನ್ನು ವಿರೋಧಿಸಿರುವ ಪಿಡಿಪಿ, ಇದು "ಮೆಹಬೂಬ ಮುಫ್ತಿ ಹಾಗೂ ಪಿಡಿಪಿ ವಿರುದ್ಧ ರಾಜಕೀಯ ನಡೆಸುತ್ತಿರುವ ಒಂದು ಭಾಗ" ಎಂದಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಅಪಾಯ: ಮೆಹಬೂಬಾ ಮುಫ್ತಿಗೆ ಪಾಸ್ಪೋರ್ಟ್ ನಿರಾಕರಣೆ
"ಮುಫ್ತಿ ಅವರು ಜನರ ಭಾವನೆಗಳಿಗೆ ದನಿಯಾಗುವುದನ್ನು ತಡೆಯುವ ಪ್ರಯತ್ನ ಇದಾಗಿದೆ" ಎಂದು ಪಿಡಿಪಿ ವಕ್ತಾರ ಹೇಳಿದ್ದಾರೆ. ಈ ಮುನ್ನವೂ, ವಿರೋಧ ಪಕ್ಷಗಳ ದನಿ ಅಡಗಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ, ಸಿಬಿಐ ಹಾಗೂ ಇಡಿಯಂಥ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮುಫ್ತಿ ದೂರಿದ್ದರು.
ಮುಫ್ತಿ ಅವರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಎರಡು ಡೈರಿಗಳನ್ನು ವಶಕ್ಕೆ ಪಡೆದಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈಗಾಗಲೇ ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ. ಸಿಎಂ ನಿಧಿಯಿಂದ ಹಣವನ್ನು ವರ್ಗಾವಣೆ ಮಾಡಿರುವುದಾಗಿ ಏಜೆನ್ಸಿ ವರದಿ ತಿಳಿಸಿದೆ. ಮುಫ್ತಿ ಅವರ ಅಧಿಕಾರಾವಧಿಯಲ್ಲಿ ಹಣ ವರ್ಗಾವಣೆಯಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಕೆಲವು ಲಕ್ಷ ರೂಪಾಯಿಗಳನ್ನು ನಜೀರ್ ಖಾತೆಗೆ ವರ್ಗಾಯಿಸಿರುವುದಾಗಿ ತಿಳಿಸಿದೆ.
ಈಚೆಗೆ ನಜೀರ್ ಹಾಗೂ ಮುಫ್ತಿ ಅವರ ಪಾಸ್ಪೋರ್ಟ್ ಅರ್ಜಿಗಳನ್ನು ಜಮ್ಮು ಹಾಗೂ ಕಾಶ್ಮೀರ ಸಿಐಡಿ ತಿರಸ್ಕರಿಸಿತ್ತು.