ಉಗ್ರರಿಗೆ ಕಾಸು ಕೊಡುತ್ತಿದ್ದವರಿಗೆ 'ಇಡಿ' ಹೆಡೆಮುರಿ!
ಶ್ರೀನಗರ, ನವೆಂಬರ್.21: ಕಣಿವೆ ರಾಜ್ಯದಲ್ಲಿ ಉಗ್ರರ ವಿರುದ್ಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಮರ ಸಾರಿದ್ದಾರೆ. ಉಗ್ರ ಸಂಘಟನೆಗೆ ಆರ್ಥಿಕ ನೆರವು ನೀಡುತ್ತಿದ್ದರು ಎನ್ನಲಾದ ಆರೋಪಿಗಳ ಆಸ್ತಿ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಹೌದು, ಜಮ್ಮು-ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಹಿಜ್ಬುಲ್ ಮುಜಾಹುದ್ದೀನ್ ಸಂಘಟನೆಗೆ ಸೇರಿದ್ದು ಎನ್ನಲಾದ 1 ಕೋಟಿ 22 ಲಕ್ಷ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾಶ್ಮೀರದ ಕುರಿತು ವಿಶ್ವಸಂಸ್ಥೆಗೆ ಪಾಕಿಸ್ತಾನದ 6ನೇ ಪತ್ರ
ಅನಂತ್ ನಾಗ್, ಬಾರಾಮುಲ್ಲಾ, ಬಂಡಿಪೊರಾ ಜಿಲ್ಲೆಗಳಲ್ಲಿ ಹಿಜ್ಬುಲ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರು ಎನ್ನಲಾದ ಶಂಕಿತರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಮೊಹಮ್ಮದ್ ಶಫಿ ಶಹಾ, ತಾಲೀಬ್ ಲಾಲಿ, ಗುಲಾಮ್ ನಬಿ ಖಾನ್, ಜಾಫರ್ ಹುಸೇನ್ ಖಾನ್, ಅಬ್ದುಲ್ ಮಜೀದ್ ಸೋಫಿ, ನಜೀಮ್ ಅಹ್ಮದ್ ದಾರ್, ಮನ್ಜೂರ್ ಅಹ್ಮದ್ ದಾರ್ ಎಂಬುವವರಿಗೆ ಸೇರಿದ 1 ಕೋಟಿ 22 ಲಕ್ಷ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳು ಹಿಜ್ಬುಲ್ ಮುಜಾಹುದ್ದೀನ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಅಲ್ಲದೇ, ಉಗ್ರ ಚಟುವಟಿಕೆಗಳಿಗೆ ಹಣ ನೀಡುತ್ತಿರುವ ಬಗ್ಗೆಯೂ ಶಂಕಿಸಲಾಗಿದೆ.
ಉಗ್ರರಿಗೆ ಹಣ ಸಂದಾಯ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಕೇಂದ್ರ ತನಿಖಾಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಪಿಎಂಎಲ್ಎ ಅಡಿ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.