ಕಾಶ್ಮೀರಕ್ಕೆ ಬರಬೇಡಿ: ರಾಹುಲ್ ಗಾಂಧಿಗೆ ಮನವಿ
Recommended Video
ಶ್ರೀನಗರ, ಆಗಸ್ಟ್ 24: ಜಮ್ಮು ಕಾಶ್ಮೀರಕ್ಕೆ ರಾಹುಲ್ ಗಾಂಧಿ ಸೇರಿ ವಿಪಕ್ಷ ಮುಖಂಡರ ನಿಯೋಗ ಭೇಟಿ ನೀಡುವ ನಿರ್ಣಯ ಮಾಡಿರುವ ಬೆನ್ನಲ್ಲೆ ಜಮ್ಮು ಕಾಶ್ಮೀರಕ್ಕೆ ಬರಬೇಡಿ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಇಲ್ಲಿಗೆ ಬಂದು ಜಮ್ಮು ಕಾಶ್ಮೀರದಲ್ಲಿ ನೆಲೆಸಿರುವ ಶಾಂತಿಯನ್ನು ಕದಡುವ ಕೆಲಸ ಮಾಡಬೇಡಿ ಎಂದು ಜಮ್ಮು ಕಾಶ್ಮೀರದ ಪ್ರಸ್ತುತ ಸರ್ಕಾರ ಹೇಳಿದೆ.
ಆದರೆ ಕೆಲವು ದಿನಗಳ ಹಿಂದೆಯಷ್ಟೆ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರೇ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದರು. ವಿಶೇಷ ವಿಮಾನ ಕಳಿಸುತ್ತೇನೆ, ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟು ಇಲ್ಲಿನ ಸ್ಥಿತಿ ತಿಳಿಯಿರಿ ಎಂದು ಹೇಳಿದ್ದರು. ಈ ಸವಾಲನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದರು. ಆದರೆ ಈಗ ಅವರೇ ರಾಹುಲ್ ಗಾಂಧಿ ಬರುವುದು ಬೇಡ ಎನ್ನುತ್ತಿದ್ದಾರೆ.
ಈಗಾಗಲೇ ಪ್ರತಿಪಕ್ಷ ನಿಯೋಗವು ವಿಮಾನದ ಮೂಲಕ ಜಮ್ಮುವಿನತ್ತ ಪ್ರಯಾಣ ಬೆಳೆಸಿದ್ದು, ಕೆಲವೇ ಕ್ಷಣಗಳಲ್ಲಿ ಅಲ್ಲಿ ಸೇರಲಿದ್ದಾರೆ. ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಡಿ ರಾಜಾ, ಸೀತಾರಾಮ್ ಯೆಚೂರಿ, ಮನೋಜ್ ಜಾ ಇನ್ನಿತರೆ ಪ್ರತಿಪಕ್ಷ ನಾಯಕರು ಭೇಟಿ ನೀಡಲಿದ್ದಾರೆ. ಸಿಬಿಐ(ಎಂ), ಸಿಪಿಐ, ಆರ್ಜೆಡಿ, ಎನ್ಸಿಪಿ, ಟಿಎಂಸಿ, ಹಾಗೂ ಡಿಎಂಕೆ ನಾಯಕರು ದೆಹಲಿ ಏರ್ಪೋರ್ಟ್ನಿಂದ ಜಮ್ಮುವಿನ ಕಡೆ ಹೊರಟಿದ್ದಾರೆ.