ಲೇಹ್ ನಲ್ಲಿ ಪತ್ರಕರ್ತರಿಗೆ ಬಿಜೆಪಿ ನಾಯಕರು ಲಂಚ ಕೊಟ್ಟರೆ?
ಶ್ರೀನಗರ, ಮೇ 08 : ತಮ್ಮ ಪಕ್ಷದ ಪರ ವರದಿ ಮಾಡಬೇಕೆಂದು ಆಗ್ರಹಿಸಿ ಲೇಹ್ ನಲ್ಲಿ ಪತ್ರಕರ್ತರಿಗೆ ಕವರ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕರು ಲಂಚ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಲೋಕಸಭೆ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಕೇಸರಿ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈ ಕುರಿತು ಲೇಹ್ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯಾಗಿರುವ ಅವ್ನಿ ಲಾವಾಸಾ ಅವರು, ಪೊಲೀಸರ ಮೂಲಕ ಜಿಲ್ಲಾ ನ್ಯಾಯಾಲಯದ ಕದ ತಟ್ಟಿದ್ದು, ಲಂಚ ನೀಡುತ್ತಿದ್ದವರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ, ನ್ಯಾಯಾಲಯ ಯಾವುದೇ ಇಲ್ಲಿಯವರೆಗೆ ನೀಡಿಲ್ಲ.
ಉಗ್ರ ಬುರ್ಹಾನ್ ವನಿ ಊರಲ್ಲಿ ಶೂನ್ಯ ಮತದಾನ
ತಪ್ಪಿಸತ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿರುವ ಅವ್ನಿ ಲಾವಾಸಾ ಅವರು, 2013ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಕೇಂದ್ರ ಚುನಾವಣಾ ಆಯುಕ್ತರಾಗಿರುವ ಮಾಜಿ ಐಎಎಸ್ ಅಧಿಕಾರಿ ಅಶೋಕ್ ಲಾವಾಸಾ ಅವರ ಮಗಳು.
ಲಡಾಖ್ ನಲ್ಲಿ 5ನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು. ಅಲ್ಲಿಯ ಪತ್ರಿಕಾಗೋಷ್ಠಿಯೊಂದರಲ್ಲಿ ಮಾಧ್ಯಮ ಮಿತ್ರರಿಗೆ ಕವರ್ ನಲ್ಲಿ ನೋಟುಗಳನ್ನು ತುಂಬಿ ನೀಡುತ್ತಿದ್ದುದನ್ನು ಚಿತ್ರೀಕರಿಸಲಾಗಿತ್ತು. ಇದು ಎಲ್ಲೆಡೆ ವೈರಲ್ ಆಗಿತ್ತು ಮತ್ತು ಮೇಲ್ನೋಟಕ್ಕೆ ಲಂಚ ನೀಡುತ್ತಿದ್ದುದು ಸಾಬೀತಾಗಿತ್ತು. ಕೂಡಲೆ ಅವರ ವಿರುದ್ಧ ದೂರು ದಾಖಲಿಸಲು ಜಿಲ್ಲಾಧಿಕಾರಿ ಪೊಲೀಸರಿಗೆ ಸೂಚಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕರಾದ ರವೀಂದರ್ ರೈನಾ ಮತ್ತು ಎಂಎಲ್ಸಿ ವಿಕ್ರಂ ರಾಂಧ್ವಾ ಅವರು ಈ ಆರೋಪಗಳನ್ನು ಸಾರಾಸಗಟಾಗಿ ಅಲ್ಲಗಳೆದಿದ್ದು, ಎರಡು ದಿನಗಳ ನಂತರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಲಿದ್ದ ಸಾರ್ವಜನಿಕ ಸಭೆಯೊಂದರ ಆಹ್ವಾನ ಪತ್ರಿಕೆಯನ್ನು ಕವರ್ ನಲ್ಲಿ ನೀಡಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಹಂತದಿಂದ ಹಂತಕ್ಕೆ ಕುಸಿಯುತ್ತಿರುವ ಮತದಾನ
ಆದರೆ, ದೂರು ನೀಡಿರುವ ಮಾಧ್ಯಮದವರು ಮತ್ತು ತಮ್ಮ ಹೆಸರನ್ನು ಪ್ರಸ್ತಾಪಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರವೀಂದರ್ ರೈನಾ ಅವರು ಹೇಳಿಕೆ ನೀಡಿದ್ದಾರೆ. ಮೇ 2ರಂದು ನಡೆದಿದ್ದ ಈ ಘಟನೆಯಲ್ಲಿ ಇಬ್ಬರು ಮಹಿಳಾ ಪತ್ರಕರ್ತೆಯರು ಸೇರಿದಂತೆ ಐವರು ಪತ್ರಕರ್ತರಿಗೆ ಬಿಜೆಪಿ ನಾಯಕರು ಕವರ್ ಗಳನ್ನು ನೀಡುತ್ತಿದ್ದುದು ವಿಡಿಯೋದಲ್ಲಿ ಕಂಡುಬಂದಿತ್ತು. ಆದರೆ, ಆ ಕವರ್ ನಲ್ಲಿದ್ದುದು ಹಣವೋ, ಆಹ್ವಾನ ಪತ್ರಿಕೆಯೋ ಎಂಬುದು ಖಚಿತವಾಗಿರಲಿಲ್ಲ.
ಆದರೆ, ಆ ಕವರ್ ಅನ್ನು ತೆಗೆದು ನೋಡಿದ ಓರ್ವ ಮಹಿಳಾ ಪತ್ರಕರ್ತೆ, ಅಚ್ಚರಿಗೊಳಗಾಗಿ ಆ ಕವರ್ ಅನ್ನು ಬಿಜೆಪಿ ನಾಯಕರಿಗೆ ವಾಪಸ್ ನೀಡುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಬಿಜೆಪಿ ನಾಯಕರು ಕವರ್ ವಾಪಸ್ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಅದನ್ನು ಅಲ್ಲೇ ಇಟ್ಟು ಅವರು ಹೊರನಡೆದಿದ್ದಾರೆ. ಇದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.