ಕಾಲ್ತುಳಿತದಿಂದ 12 ಭಕ್ತರು ಸಾವು: ವೈಷ್ಣೋದೇವಿ ದೇಗುಲದಲ್ಲಿ ಆನ್ಲೈನ್ ಬುಕ್ಕಿಂಗ್ ಆರಂಭ
ಶ್ರೀನಗರ, ಜನವರಿ 03: ಜಮ್ಮು ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇಗುಲದಲ್ಲಿ ಶನಿವಾರ ಬೆಳಗ್ಗೆ ಕಾಲ್ತುಳಿತ ಉಂಟಾಗಿ ಸುಮಾರು 12 ಭಕ್ತರು ಸಾವನ್ನಪ್ಪಿದ್ದಾರೆ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯು ಆನ್ಲೈನ್ ಬುಕ್ಕಿಂಗ್ ಅನ್ನು ಆರಂಭ ಮಾಡಿದೆ.
ಶನಿವಾರ ಬೆಳಗ್ಗೆ ದೇಗುಲದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ವೇಳ ದೇಗುಲ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಗಿ ಸುಮಾರು 12 ಭಕ್ತರು ಮೃತಪಟ್ಟಿದ್ದಾರೆ. ಈ ಕಾಲ್ತುಳಿತಕ್ಕೆ ಯುವಕರ ನಡುವಿನ ಸಣ್ಣ ಜಗಳವೇ ಕಾರಣ ಎಂದು ಕೂಡಾ ಹೇಳಲಾಗಿದೆ.
ಜಮ್ಮು- ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ; 12 ಸಾವು, 14 ಜನಕ್ಕೆ ಗಾಯ
Recommended Video
ಈ ಬಗ್ಗೆ ಮಾಹಿತಿ ನೀಡಿದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್, "ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಉಂಟಾದ ಕಾಲ್ತುಳಿತಕ್ಕೆ ಕೆಲವು ಯುವಕರ ನಡುವಿನ ಸಣ್ಣ ಜಗಳವೇ ಕಾರಣವಾಗಿದೆ. ಈ ಸಣ್ಣ ಜಗಳದಿಂದಾಗಿ ದುರದೃಷ್ಟವಶಾತ್ ಹನ್ನೆರಡು ಮಂದಿ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ, 13-ಕಿಮೀ ಚಾರಣವನ್ನು ಕೈಗೊಳ್ಳುವ ಯಾತ್ರಾರ್ಥಿಗಳು ತಮ್ಮ ಯಾತ್ರಾ ಸ್ಲಿಪ್ಗಳನ್ನು ಆನ್ಲೈನ್ನಲ್ಲಿ ನೀಡಬಹುದು ಅಥವಾ ಕತ್ರಾ ಪಟ್ಟಣಕ್ಕೆ ಆಗಮಿಸಿದಾಗ ಪಡೆಯಬಹುದು. ಸರಾಸರಿ 2,000 ದೈನಂದಿನ ಯಾತ್ರಾ ಸ್ಲಿಪ್ಗಳನ್ನು ಆನ್ಲೈನ್ನಲ್ಲಿ ನೀಡಲಾಗುತ್ತಿದ್ದರೆ, ಸುಮಾರು 28,000 ಯಾತ್ರಾರ್ಥಿಗಳಿಗೆ ಕತ್ರಾಗೆ ಆಗಮಿಸಿದಾಗ ಯತ್ರಾ ಸ್ಲಿಪ್ ಅನ್ನು ನೀಡಲಾಗುತ್ತದೆ ಎಂದು ಯಾತ್ರಾ ಸ್ಥಳದ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ
ಸಂಪೂರ್ಣವಾಗಿ ಆನ್ಲೈನ್ ಬುಕ್ಕಿಂಗ್ ಅನ್ನು ಮಾಡುವ ವ್ಯವಸ್ಥೆಯನ್ನು ಆರಂಭ ಮಾಡುವ ಬಗ್ಗೆ ದೇವಾಲಯದ ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಹಿಸಿದ್ದು, ಕಾಲ್ತುಳಿತದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಜ. 1ರಂದು 27 ಸಾವಿರ ಭಕ್ತರಿಂದ ಮಾತೆ ವೈಷ್ಣೋ ದೇವಿ ದರ್ಶನ
ಆನ್ಲೈನ್ ಬುಕ್ಕಿಂಗ್
ಶ್ರೀ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡಲು ಬಯಸುವವರಿಗೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಬೇಕು ಎಂಬ ನಿರ್ಧಾರವನ್ನು ದೇಗುಲದ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸರಿಯಾದ ರೀತಿಯಲ್ಲಿ ಜನಸಂದಣಿ ನಿರ್ವಹಣೆ ಮಾಡುವಂತೆ, ಮೂಲಸೌಕರ್ಯಗಳನ್ನು ಹೆಚ್ಚಳ ಮಾಡುವಂತೆ ಹಾಗೂ 100 ಪ್ರತಿಶತದಷ್ಟು ಯಾತ್ರಿಕರು ಆನ್ಲೈನ್ ಮೂಲಕವೇ ಬುಕ್ಕಿಂಗ್ ಮಾಡಿಕೊಳ್ಳುವುದನ್ನು ನೋಡಿಕೊಳ್ಳಲು, ವಿವಿಧ ರಂಗಗಳಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಮಂಡಳಿಯು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ಗೆ ನಿರ್ದೇಶನ ನೀಡಿದೆ ಎಂದು ಭಾನುವಾರ ಅಧಿಕೃತ ಹೇಳಿಕೆ ತಿಳಿಸಿದೆ. ಇನ್ನು ಕಾಲ್ತುಳಿತ ಉಂಟಾಗಿರುವ ಕಾರಣದಿಂದಾಗಿ ದೇಗುಲ ಮಂಡಳಿಯು ಸುಮಾರು 25,000 ಕ್ಕಿಂತ ಅಧಿಕ ಮಂದಿ ಯಾತ್ರಿಕರಿಗೆ ಅವಕಾಶ ನೀಡದು ಎಂದು ಹೇಳಲಾಗಿದೆ.
ವೈಷ್ಣೋದೇವಿ ದೇಗುಲದಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಹಾಗೆಯೇ ಈ ಪ್ರಕರಣದ ತನಿಖಯೆನ್ನು ನಡೆಸಲು ಜಮ್ಮುವಿನ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ವಿಚಾರಣಾ ಸಮಿತಿಯನ್ನು ರಚನೆ ಮಾಡಿದೆ. ವಿಚಾರಣೆಯಲ್ಲಿ ಎಡಿಜಿಪಿ, ಜಮ್ಮು ಮತ್ತು ವಿಭಾಗೀಯ ಆಯುಕ್ತರು ಇರಲಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್, ಗೃಹ ಸಚಿವ ಅಮಿತ್ ಶಾ ಸೇರಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವು ಗಣ್ಯರು ಈ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಪ್ರಸ್ತುತ ಗಾಯಾಳುಗಳು ಕತ್ರಾದಲ್ಲಿರುವ ನರೈನಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಆಸ್ಪತ್ರಗೆ ಭೇಟಿ ನೀಡಿದ್ದಾರೆ. (ಒನ್ಇಂಡಿಯಾ ಸುದ್ದಿ)