ಜಮ್ಮುವಿನಲ್ಲಿ ಕರ್ಫ್ಯೂ ಎಲ್ಲೆಮೀರಿದ ಉದ್ರಿಕ್ತರು; ಸಿಆರ್ಪಿಎಫ್ ಯೋಧನಿಗೆ ಗಾಯ
ಶ್ರೀನಗರ, ಜೂ. 10: ಜಮ್ಮು ಕಾಶ್ಮೀರದ ಡೋಡಾ ಜಿಲ್ಲೆಯ ಭದರ್ವಾಹ್ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 150 ಜನರ ಗುಂಪೊಂದು ಬೀದಿಗಿಳಿದು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ಎಸೆದಿದ್ದು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಗೆ ಗಾಯಗಳಾಗಿವೆ.
ಪ್ರವಾದಿ ಮೊಹಮ್ಮದ್ ಕುರಿತು ನುಪೂರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಹೇಳಿಕೆಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆಗಳ ನಂತರ ಕೋಮು ಉದ್ವಿಗ್ನತೆ ಭುಗಿಲೆದಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಭದೇರ್ವಾದಲ್ಲಿ ಕರ್ಫ್ಯೂ ವಿಧಿಸಲಾಯಿತು. ಅಧಿಕಾರಿಗಳು ಪಕ್ಕದ ಜಿಲ್ಲೆಯ ಕಿಶ್ತಾವಾರ್ನಲ್ಲಿ ಕರ್ಫ್ಯೂ ವಿಧಿಸಿದ್ದು, ರಾಂಬನ್ನಲ್ಲಿ ಸೆಕ್ಷನ್ 144 ರ ಜಾರಿ ಆದೇಶ ಹೊರಡಿಸಿದ್ದಾರೆ. ಭಾದರ್ವಾಹ್ ಪಟ್ಟಣ ಮತ್ತು ಕಿಶ್ತಾವಾರ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಜಮ್ಮುವಿನ ಡೋಡಾ ಉದ್ವಿಗ್ನ; ಭದ್ರವಾಹ್ನಲ್ಲಿ ಕರ್ಫ್ಯೂ ಹೇರಿಕೆ
ಭದೇರ್ವಾಹ್ ಪಟ್ಟಣದ ಜಾಮಿಯಾ ಮಸೀದಿಯ ಹೊರಗೆ ಶುಕ್ರವಾರ ಬೆಳಿಗ್ಗೆ ಸುಮಾರು 100 ರಿಂದ 150 ಜನರು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಇದರಲ್ಲಿ ಒಬ್ಬ ಸಿಆರ್ಪಿಎಫ್ ಯೋಧ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನಸಮೂಹವನ್ನು ಚದುರಿಸಲು ಭದ್ರತಾ ಪಡೆಗಳು ಕೆಲವು ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು. ಆಗ ಪರಿಸ್ಥಿತಿ ಸ್ವಲ್ಪ ತಿಳಿಯಾಯಿತು. ಈ ಹಿನ್ನೆಲೆಯಲ್ಲಿ ಜಾಮೀಯ ಮಸೀದಿ ಬಳಿ ಪ್ರಾರ್ಥನೆ ನಿರ್ಬಂಧಿಸಲಾಗಿದೆ.
ಪ್ರತಿಭಟನೆಯ ಉದ್ವಿಗ್ನತೆ ಕಡಿಮೆಯಾಗಲು ಪ್ರಾರಂಭಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ದೋಡಾ ಜಿಲ್ಲೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಗಳನ್ನು ಮುಂದುವರಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶುಕ್ರವಾರವೂ ಕರ್ಫ್ಯೂ ನಿರ್ಬಂಧಗಳನ್ನು ಮುಂದುವರಿಸಲು ಆಡಳಿತ ನಿರ್ಧರಿಸಿದೆ. ನಾವು ಎರಡೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಅವರು ಸಾಮರಸ್ಯವನ್ನು ಕಾಪಾಡಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಕಿಶ್ತಾವಾರ್ ಉಪ ಆಯುಕ್ತ ಎ.ಕೆ. ಶರ್ಮಾ ಹೇಳಿದ್ದಾರೆ.
ರಾಜ್ಯಸಭೆ: ಪವಾಡ ಸಂಭವಿಸಿದರೆ ಮಾತ್ರ ಬಿಜೆಪಿಗೆ ಗೆಲುವು!
ಬಟೋಟೆ ಪಟ್ಟಣದಲ್ಲಿ ನಿಷೇಧಾಜ್ಞೆ
ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ ಮತ್ತು ನಿಯಂತ್ರಣದಲ್ಲಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ನಾವು ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದ್ದೇವೆ. ಗುರುವಾರ, ಬಟೋಟೆ ಪಟ್ಟಣದಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಯಿತು. ಶುಕ್ರವಾರ ನಾವು ಈ ಆದೇಶಗಳನ್ನು ರಾಮ್ಸು ಮತ್ತು ಬನಿಹಾಲ್, ರಾಂಬನ್, ಗೂಲ್ನ ಎಲ್ಲಾ ನಾಲ್ಕು ಉಪವಿಭಾಗಗಳಿಗೆ ವಿಸ್ತರಿಸಿದ್ದೇವೆ ಎಂದು ರಾಂಬನ್ ಜಿಲ್ಲಾಧಿಕಾರಿ ಮಸ್ರತ್-ಉಲ್-ಇಸ್ಲಾಂ ಹೇಳಿದ್ದಾರೆ.
ವಿಮಾನ ಸೌಲಭ್ಯದ ಏರ್ಪಾಡು
ಜೂನ್ 13ರಂದು ರಾಂಬನ್ ಜಿಲ್ಲಾಡಳಿತವು 89 ಹಜ್ ಯಾತ್ರಿಗಳ ಪ್ರಯಾಣಕ್ಕೆ ಅನುಮತಿ ನೀಡಿದ್ದು, ಅವರಿಗಾಗಿ ವಿಮಾನ ಸೌಲಭ್ಯವನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ನಾವು ಬಿಜೆಪಿಯಿಂದ ಅಮಾನತಾಗಿರುವ ನುಪೂರ್ ಶರ್ಮಾ ಹಾಗೂ ಪ್ರವಾದಿ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಲಾಗಿರುವ ಯುವಕನ ವಿರುದ್ಧ ಪ್ರಕರಣ ಈಗಾಗಲೇ ದಾಖಲಿಸಿದ್ದೇವೆ. ಈ ಎರಡು ಪ್ರಕರಣಗಳಲ್ಲಿಎಫ್ಐಆರ್ ದಾಖಲಿಸಲಾಗಿದೆ. ನಾವು ಕಾನೂನು ಸುವ್ಯವಸ್ಥೆಯನ್ನು ಉಲ್ಲಂಘಿಸುವವರನ್ನು ಬಿಡುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವಾಸುಕಿ ನಾಗ್ ದೇವಸ್ಥಾನಕ್ಕೆ ಹಾನಿ
ಮುಸ್ಲಿಮರು ಮುಕ್ಕಾಲು ಪಾಲು ಇರುವ ಈ ಪಟ್ಟಣ ಕೆಲ ದಿನಗಳಿಂದ ಉದ್ವಿಗ್ನ ಸ್ಥಿತಿಯಲ್ಲಿದೆ. ಡೋಡಾ ಜಿಲ್ಲೆಯ ವಾಸುಕಿ ನಾಗ್ ದೇವಸ್ಥಾನಕ್ಕೆ ಇತ್ತೀಚೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದರು. ಇದರ ಚಿತ್ರಗಳು ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹರಿದಸಾಡಿದ್ದವು. ಅದರ ವಿರುದ್ಧ ಹಲವು ಕಡೆ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಮಸೀದಿಯಿಂದ ಕೆಲ ಪ್ರಕಟಣೆಗಳು ನೀಡಲಾಗಿವೆ ಎಂದು ತಿಳಿಸಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದೆ. ಇದು ಸಾಕಷ್ಟು ಕೋಮುಸಾಮರಸ್ಯ ಕದಡುತ್ತಿದೆ ಎನ್ನಲಾಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದವರ ವಿರುದ್ಧ ಭದರವಾಹ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದಷ್ಟೂ ಶೀಘ್ರ ತನಿಖೆ
ಇನ್ನು, ವಾಸುಕಿ ನಾಗ ದೇವಸ್ಥಾನ ಹಾನಿ ಮಾಡಿದ ಘಟನೆಯ ತನಿಖೆ ನಡೆಸಲು ಸೋಮವಾರ ಆರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಆದಷ್ಟೂ ಶೀಘ್ರ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅದೇ ವೇಳೆ, ದೇವಸ್ಥಾನಕ್ಕೆ ಹಾನಿ ಮಾಡಿದ್ದನ್ನು ಖಂಡಿಸಿ ಸೋಮವಾರ ಭದ್ರವಾಹದ ಶ್ರೀ ಸನಾತನ್ ಧರಂ ಸಭಾ ಸಂಘಟನೆ ನೀಡಿದ ಮುಷ್ಕರ ಕರೆಗೆ ಪಟ್ಟಣದ ಅನೇಕ ವ್ಯಾಪಾರಿಗಳು ತಮ್ಮಾ ಅಂಗಡಿ ಬಂದ್ ಮಾಡಿ ಬೆಂಬಲ ಸೂಚಿಸಿದ್ದರು.