ಕಾಂಗ್ರೆಸ್ ಎಲ್ಲಾ ಕಡೆಯಿದೆ, ಆದರೆ ದುರ್ಬಲಗೊಳ್ಳುತ್ತಿದೆ; ಫಾರೂಕ್
ಶ್ರೀನಗರ, ಮಾರ್ಚ್ 24: ಕಾಂಗ್ರೆಸ್ ಮುಖಂಡರು ಮನೆಯಲ್ಲೇ ಕೂರುವ ಬದಲು ದೇಶಕ್ಕಿರುವ ಸವಾಲುಗಳನ್ನು ಎದುರಿಸಲು ಮುಂದಾಗಬೇಕು ಹಾಗೂ ಜನರ ಸಮಸ್ಯೆಗಳ ಕುರಿತು ಯೋಚಿಸಬೇಕು ಎಂದು ಜಮ್ಮು ಹಾಗೂ ಕಾಶ್ಮೀರ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.
ಮಂಗಳವಾರ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಪ್ಯಾಂತರ್ಸ್ ಪಾರ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ದುರ್ಬಲಗೊಳ್ಳುತ್ತಿದೆ" ಎಂದು ಹೇಳಿದ್ದಾರೆ. ನನ್ನ ಪಕ್ಷ (ನ್ಯಾಷನಲ್ ಕಾನ್ಫರೆನ್ಸ್) ಹಾಗೂ ಭೀಮ್ ಸಿಂಗ್ ಅವರ ಪಕ್ಷ (ಜೆಕೆಎನ್ಪಿಪಿ) ಎಲ್ಲಾ ಕಡೆ ಇಲ್ಲ. ಆದರೆ ಕಾಂಗ್ರೆಸ್ ಎಲ್ಲಾ ಕಡೆಯೂ ಇದೆ. ಹೀಗಾಗಿ ದೇಶಕ್ಕಿರುವ ಸವಾಲುಗಳೊಂದಿಗೆ ಕಾಂಗ್ರೆಸ್ ಸೆಣಸಾಡಬೇಕು. ಜನರ ಸಮಸ್ಯೆಗಳೆಡೆಗೆ ನೋಡಬೇಕು" ಎಂದು ಹೇಳಿದ್ದಾರೆ.
ಸರ್ಕಾರದ ನೀತಿ ವಿರುದ್ಧದ ಭಿನ್ನಾಭಿಪ್ರಾಯ 'ದೇಶದ್ರೋಹ'ವಲ್ಲ: ಸುಪ್ರೀಂಕೋರ್ಟ್
ಭೀಮ್ ಸಿಂಗ್, ಅವರ ಸೋದರಳಿಯ, ಜೆಕೆಎನ್ ಪಿಪಿ ಹರ್ಷ್ ದೇವ್ ಸಿಂಗ್ ಅವರನ್ನು ಶ್ಲಾಘಿಸಿ ಮಾತನಾಡುತ್ತಾ, ಈ ಸಿಂಹಗಳು ಸವಾಲಿಗೆ ಎದುರಾಗಿ ನಿಲ್ಲುವುದು ಖಚಿತ. ಆದರೆ ರಾಷ್ಟ್ರಮಟ್ಟದ ಕಾಂಗ್ರೆಸ್ ಪಕ್ಷ ದುರ್ಬಲಗೊಳ್ಳುತ್ತಿದೆ ಎಂದು ಪುನರುಚ್ಚರಿಸಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಪಡಿಸಿದ ಬಗ್ಗೆ ಉಲ್ಲೇಖಿಸಿದ ಅವರು, "ಇದು ನಮ್ಮ ಗೌರವದ ಮೇಲಿನ ಆಕ್ರಮಣ. ನಾವು ನಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಹೊರಗಿನಿಂದ ಇಲ್ಲಿಗೆ ಜನರು ಬರುತ್ತಿದ್ದು, ನಮ್ಮ ಮಕ್ಕಳಿಗೇ ಉದ್ಯೋಗವಿಲ್ಲದಂತಾಗುತ್ತಿದೆ" ಎಂದು ದೂರಿದರು.