ಉಗ್ರರಿಗೆ ಚುರುಕು: ಜಮ್ಮು ಕಾಶ್ಮೀರಕ್ಕೆ 25 ತುಕಡಿ ಹೆಚ್ಚುವರಿ ಸೈನ್ಯ ರವಾನೆ
ಶ್ರೀನಗರ, ಅಕ್ಟೋಬರ್ 21: ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲಿನ ಸರಣಿದೆ ದಾಳಿ ಮತ್ತು ಭಾರತೀಯ ಭದ್ರತಾ ಪಡೆಗಳು ನಡೆಸುತ್ತಿರುವ ಎನ್ಕೌಂಟರ್ಗಳಿಂದ ಪರಿಸ್ಥಿತಿ ಮತ್ತಷ್ಟು ಬೂದಿ ಮುಚ್ಚಿದ ಕೆಂಡದಂತೆ ಆಗುತ್ತಿದೆ. ಈ ಹಿನ್ನೆಲೆ ಕಣಿವೆ ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿ ಸಿಬ್ಬಂದಿಯನ್ನು ರವಾನಿಸುವುದಕ್ಕೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಮೂಲಗಳ ಪ್ರಕಾರ, ನಾಗರಿಕರಿಗೆ ಭದ್ರತೆ ನೀಡಲು ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇತರ ಪಡೆಗಳಿಗೆ ಸಹಾಯ ಮಾಡುವುದಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಸುಮಾರು 25 ತುಕಡಿಗಳ ಸೈನ್ಯವನ್ನು ಕಳುಹಿಸುವ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ತಿಳಿದು ಬಂದಿದೆ.
ಸಿಆರ್ಪಿಎಫ್ನ ಹೆಚ್ಚುವರಿ ತುಕಡಿಗಳನ್ನು ಹಂತ ಹಂತವಾಗಿ ಕಳುಹಿಸಲಾಗುವುದು. ಮೊದಲ ಹಂತದಲ್ಲಿ 10 ತುಕಡಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುವುದು,
ದೇಶದ ವಿವಿಧ ವಿಭಾಗಗಳಿಂದ ಕಾಶ್ಮೀರಕ್ಕೆ ಸೇನಾ ಪಡೆ:
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯದ ಮಟ್ಟಿಗೆ ಸುಮಾರು ಎರಡು ಡಜನ್ ಸಿಆರ್ಪಿಎಫ್ ತುಕಡಿಗಳು ದೇಶದ ವಿವಿಧ ಭಾಗಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿವೆ. ಶೀಘ್ರದಲ್ಲೇ ಈ ಸೇನೆಗಳ ರವಾನಿಸುವ ಕುರಿತು ಅಧಿಕೃತ ಆದೇಶ ಬಿಡುಗಡೆ ಮಾಡಲಾಗುವುದು. ವಸತಿ, ಸಾರಿಗೆ ಇತ್ಯಾದಿಗಳ ವ್ಯವಸ್ಥೆ ಈಗಾಗಲೇ ಆರಂಭವಾಗಿದ್ದು, ಭದ್ರತೆಗಾಗಿ ಜಮ್ಮು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ನಿಯೋಜನೆಯಾಗುತ್ತಿರುವ ತುಕಡಿಗಳಿಗೆ ಈ ಕುರಿತು ಮಾಹಿತಿ ನೀಡುವ ಪ್ರಕ್ರಿಯೆಯೂ ಆರಂಭವಾಗಿದೆ.
ಅಕ್ಟೋಬರ್ 23ರಿಂದ 25ರವರೆಗೆ ಕಾಶ್ಮೀರಕ್ಕೆ ಶಾ:
ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಡಿಜಿ ಸಿಆರ್ಪಿಎಫ್ ಕುಲದೀಪ್ ಸಿಂಗ್ ಪರಿಸ್ಥಿತಿಯ ಮೇಲ್ವಿಚಾರಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇವರಿಗೆ ಈ ಕಾರ್ಯದಲ್ಲಿ ಅತಿದೊಡ್ಡ ಅರೆಸೇನಾ ಪಡೆಯ ಇತರ ಉನ್ನತ ಅಧಿಕಾರಿಗಳು ಸಾಥ್ ನೀಡಲಿದ್ದಾರೆ. ಅಕ್ಟೋಬರ್ 23 ರಿಂದ 25ರವರೆಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಅಲ್ಲಿವರೆಗೂ ಡಿಜಿ ಅಲ್ಲಿಯೇ ಇರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಇಬ್ಬರು ಉಗ್ರರನ್ನು ಕೊಂದು ಹಾಕಿದ ಸೇನೆ:
ಜಮ್ಮು ಕಾಶ್ಮೀರದಲ್ಲಿ ಇಬ್ಬರು ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರನ್ನು ಬುಧವಾರ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ. ಕುಲ್ಗಾಮ್ ಜಿಲ್ಲೆಯ ವಾನಪೋಹ್ ಪ್ರದೇಶದಲ್ಲಿ ಇಬ್ಬರು ಬಿಹಾರಿ ಕಾರ್ಮಿಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಎಲ್ಇಟಿ ಉಗ್ರರನ್ನು ಎನ್ಕೌಂಟರ್ನಲ್ಲಿ ಕೊಂದು ಹಾಕಲಾಗಿದೆ. ಈ ಪೈಕಿ ಒಬ್ಬನು ಲಷ್ಕರ್-ಇ-ತೊಯ್ಬಾ ಸಂಘಟನೆ ಕಮಾಂಡರ್ ಗುಲ್ಜಾರ್ ಅಹ್ಮದ್ ರೇಶಿ ಎಂದು ಕಾಶ್ಮೀರ ಐಜಿಪಿ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಗೂ ಮುನ್ನ ದಿನ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರು ಹತರಾಗಿದ್ದು, ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಈ ಪೈಕಿ ಒಬ್ಬ ಉಗ್ರನನ್ನು ಆದಿಲ್ ವಾನಿ ಎಂದು ಗುರುತಿಸಲಾಗಿದ್ದು, ಆತ ಉತ್ತರ ಪ್ರದೇಶದ ಸಹರಾನ್ಪುರದ ಬಡಗಿ ಹತ್ಯೆಯಲ್ಲಿ ಭಾಗಿಯಾಗಿದ್ದನು ಎಂದು ತಿಳಿದು ಬಂದಿದೆೆ.
ಕಾಶ್ಮೀರದಲ್ಲಿ 15 ದಿನಗಳಲ್ಲಿ 15 ಉಗ್ರರ ಹತ್ಯೆ:
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 15 ದಿನಗಳಲ್ಲಿ 15 ಉಗ್ರರನ್ನು ಹೊಡೆದುರುಳಿಸಲಾಗಿದ್ದು, 9 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೀಗೆ ಮೃತಪಟ್ಟ 9 ನಾಗರಿಕರಲ್ಲಿ ಬಹುಪಾಲು ಮಂದಿ ವಲಸೆ ಕಾರ್ಮಿಕರು ಎಂದು ತಿಳಿದು ಬಂದಿದೆ. ಈ ಹಿಂದೆ ಅಕ್ಟೋಬರ್ 17ರಂದು ಕುಲ್ಗಾಮ್ ಜಿಲ್ಲೆಯ ವಾನಪೋಹ್ ಪ್ರದೇಶದಲ್ಲಿ ಇಬ್ಬರು ಬಿಹಾರಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಉಗ್ರರ ದಾಳಿಯಲ್ಲಿ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರ ಹತ್ಯೆಯಾಗಿತ್ತು. ಇದರ ಹಿಂದಿನ ದಿನ ಅಕ್ಟೋಬರ್ 16ರಂದು ಬಿಹಾರ ಮೂಲದ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರ ಒಬ್ಬನನ್ನು ಉಗ್ರರು ಕೊಂದು ಹಾಕಿದ್ದರು.