ಆರ್ಟಿಕಲ್ 35ಎ ರದ್ದಿಗೆ ಚಿಂತನೆ: ಕಾಶ್ಮೀರ ಉದ್ವಿಗ್ನ, ಭದ್ರತೆ ಹೆಚ್ಚಳ
ಶ್ರೀನಗರ, ಜುಲೈ 29: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಸಂವಿಧಾನದ 35ಎ ವಿಧಿಯನ್ನು ರದ್ದು ಮಾಡುವ ಬಗ್ಗೆ ಕೇಂದ್ರ ಸರ್ಕಾರ ಮುಂದುವರೆದಿದ್ದು, ಇದಕ್ಕೆ ಕಾಶ್ಮೀರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಣಿವೆ ರಾಜ್ಯವು ಬೂದಿ ಮುಚ್ಚಿದ ಕೆಂಡದಂತಾಗಿದೆ.
ಆರ್ಟಿಕಲ್ 35ಎ ರದ್ದು ಕುರಿತು ತೀವ್ರ ಆಕ್ರೋಶ ಹೊರಹಾಕಿರುವ ಮಾಜಿ ಸಿಎಂ ಮೆಹಬೂಬಾ ಮಫ್ತಿ ಅವರು, 'ಆರ್ಕಿಕಲ್ 35ಎ ರದ್ದು ಮಾಡುವುದು, ಬಾಂಬ್ಗೆ ಬೆಂಕಿ ಇಟ್ಟಂತೆ' ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೆಹಬೂಬಾ ಮಫ್ತಿ ಜೊತೆ ಇನ್ನೂ ಕೆಲವು ಮುಖಂಡರು ಆರ್ಟಿಕಲ್ 35ಎ ರದ್ದನ್ನು ವಿರೋಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ ವಿಶೇಷಾಧಿಕಾರ ಕಲಂ 35ಎ ಎಂದರೇನು?
ಕಣಿವೆ ರಾಜ್ಯದಲ್ಲಿ ಸೂಕ್ಷ್ಮ ಪರಿಸ್ಥಿತಿ ಇರುವ ಕಾರಣ ಸೇನೆಯು ಹೆಚ್ಚು ಹೆಚ್ಚು ತುಕಡಿಗಳನ್ನು ಜಮ್ಮು ಕಾಶ್ಮೀರದ ಪ್ರಮುಖ ನಗರಗಳಲ್ಲಿ ಸ್ಥಿತಗೊಳಿಸಿದ್ದು, ಭದ್ರತೆ ಹೆಚ್ಚಿಸಲಾಗಿದ್ದು, ಆಗಬಹುದಾದ ಅನಾಹುತ ತಡೆಗಟ್ಟಲು ಮುಂಜಾಗೃತೆ ವಹಿಸಿದೆ. ನಿನ್ನೆಯಷ್ಟೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೆಲ್ ಅವರು ಕಾಶ್ಮೀರಕ್ಕೆ ಭೇಟಿ ನೀಡಿ ಭಯೋತ್ಪಾದ ನಿಗ್ರಹ ಅಧಿಕಾರಿಗಳೊಡನೆ ಮಾಡುತಕತೆ ನಡೆಸಿದ್ದಾರೆ.
35 ಎ ವಿಧಿಯನ್ನು ಕಾಯಂ ನಿವಾಸಿಗಳ ಕಾಯ್ದೆ ಎಂದು ಸಹ ಕರೆಯಲಾಗುತ್ತದೆ. ಹೊರ ರಾಜ್ಯದವರು ಜಮ್ಮು ಮತ್ತು ಕಾಶ್ಮೀರದಲ್ಲಿ ಖಾಯಂ ಆಗಿ ನೆಲೆಸುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ. ಇಲ್ಲಿ ಹೊರರಾಜ್ಯದವರು ಸ್ಥಿರಾಸ್ತಿ ಖರೀದಿ, ಸರ್ಕಾರ ಉದ್ಯೋಗ ಪಡೆಯುವುದು, ಸ್ಕಾಲರ್ಶಿಪ್ ಮುಂತಾದ ಸೌಲಭ್ಯಗಳನ್ನು ಪಡೆದುಕೊಳ್ಳುವುದನ್ನು ಸಹ ನಿಷೇಧಿಸಿದೆ.