ಉರಿ ನಂತರದ ಭೀಕರ ದಾಳಿ; 30ಕ್ಕೆ ಏರಿತು ಹುತಾತ್ಮರಾದವರ ಸಂಖ್ಯೆ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಫೆಬ್ರವರಿ 14: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಉಗ್ರಗಾಮಿಗಳ ದಾಳಿಯಲ್ಲಿ ಕನಿಷ್ಠ 30 ಮಂದಿ ಸಿಆರ್ ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಸಿಬ್ಬಂದಿ ಮೃತಪಟ್ಟು, ನಲವತ್ತು ಮಂದಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಇದ್ದ ಸ್ಫೋಟಕ ಸಿಡಿದು, ಚಲಿಸುತ್ತಿದ್ದ ಬಸ್ ಗೆ ಹಾನಿಯಾಗಿದೆ. ಅಪಾರ ಪ್ರಮಾಣದಲ್ಲಿ ಜೀವ ಹಾನಿಯಾಗಿದೆ.
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಈ ಘಟನೆ ನಡೆದಿದೆ. ಶ್ರೀನಗರದಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಅವಂತಿಪುರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಉಗ್ರ ಸಂಘಟನೆ ಜೈಶ್-ಇ-ಮೊಹ್ಮದ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. 2016ನೇ ಇಸವಿಯಲ್ಲಿ ಉರಿ ಸೇನಾ ನೆಲೆಯಲ್ಲಿ ನಡೆದ ಭೀಕರ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರು. ಆ ನಂತರದ ಉಗ್ರ ಸ್ವರೂಪದ ದಾಳಿ ಇದಾಗಿದೆ.
* ಪೊಲೀಸರು ಕಾಕಾಪೂರ್ ನ ಆತ್ಮಹತ್ಯಾ ದಾಳಿಕೋರ ಅದಿಲ್ ಅಹ್ಮದ್ ನನ್ನು ಗುರುತಿಸಿದ್ದಾರೆ. ಆತ ಕಳೆದ ವರ್ಷ ಜೈಶ್-ಇ-ಮೊಹ್ಮದ್ ಅನ್ನು ಸೇರಿಕೊಂಡಿದ್ದ.
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರ ದಾಳಿ, 18 ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮ
* ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ದಾಳಿಗೆ ಗುರಿಯಾದ ಬಸ್ ಲೋಹದ ತುಂಡುಗಳಂತಾಗಿದೆ. ಹಲವು ಇತರ ವಾಹನಗಳು ಸಹ ಧ್ವಂಸವಾಗಿವೆ.
* ಭಾರೀ ಸ್ಫೋಟದ ನಂತರ ಮನುಷ್ಯರ ಅಂಗಗಳು ಹಾಗೂ ಅವಶೇಷಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿವೆ. ಮಂಜಿನ ಜತೆ ಬೆರೆತುಹೋಗಿವೆ.
* ಬಸ್ಸಿನ ಮೇಲೆ ಗುಂಡಿನ ಗುರುತುಗಳು ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರು ಅವಿತಿಟ್ಟುಕೊಂಡು, ಭದ್ರತಾ ವಾಹನದ ಮೇಲೆ ಗುಂಡು ಹಾರಿಸಿರುವುದು ಗೊತ್ತಾಗುತ್ತದೆ.
ಲೋಕಸಭೆ ಚುನಾವಣೆ ವೇಳೆ ಭಾರತದಲ್ಲಿ ಪಾಕ್ ನಿಂದ ಕೋಮು ಗಲಭೆಗೆ ಕುಮ್ಮಕ್ಕು
* "ಈ ಘಟನೆಯು ಉಗ್ರಗಾಮಿಗಳ ದಾಳಿ. ಇದು ಹೆಗಾಯಿತು ಎಂಬುದನ್ನು ಪರಾಂಬರಿಸುತ್ತಿದ್ದೇವೆ. ನಾವು ಶಂಕಿಸಿರುವ ಪ್ರಕಾರ ವಾಹನ ಬಳಸಿ ಮಾಡಿದ ದಾಳಿಯಿದು" ಎಂದು ಸಿಆರ್ ಪಿಎಫ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
* ಈ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಭದ್ರತಾ ವ್ಯವಸ್ಥೆ ಇರುತ್ತದೆ. ಅಂಥದ್ದರಲ್ಲೂ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಸಾಗಿಸಿರುವುದು ಹೇಗೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಆರ್ ಪಿಆಎಫ್ ಅಧಿಕಾರಿ, ಅದೇ ಈಗ ತನಿಖೆಯ ವಿಚಾರ ಎಂದು ಉತ್ತರಿಸಿದ್ದಾರೆ.
* ಗೃಹ ಖಾತೆ ರಾಜ್ಯ ಸಚಿವರಾದ ಸುಭಾಷ್ ಭಮ್ರೆ ದಾಳಿಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. "ಈ ಕೃತ್ಯಕ್ಕೆ ಕಾರಣರಾದವರನ್ನು ಯಾವ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ" ಎಂದು ಹೇಳಿದ್ದಾರೆ.
* ಕೇಂದ್ರ ಸಚಿವ ವಿ.ಕೆ.ಸಿಂಗ್ ಟ್ವೀಟ್ ಮಾಡಿ, ಸೈನಿಕನಾಗಿ- ಭಾರತದ ನಾಗರಿಕನಾಗಿ ನನ್ನ ರಕ್ತ ಕುದಿಯುತ್ತಿದೆ. ಇದೊಂದು ಹೇಡಿ ಕೃತ್ಯ. ಸಿಆರ್ ಪಿಎಫ್ ಸಿಬ್ಬಂದಿಯ ನಿಸ್ವಾರ್ಥ ತ್ಯಾಗಕ್ಕೆ ಸೆಲ್ಯೂಟ್ ಮಾಡ್ತೀನಿ ಮತ್ತು ನಮ್ಮ ಸೈನಿಕರ ಪ್ರತಿ ಹನಿ ರಕ್ತಕ್ಕೆ ಪ್ರತೀಕಾರ ಹೇಳೇ ಹೇಳುತ್ತೇವೆ. ಜೈ ಹಿಂದ್ ಎಂದಿದ್ದಾರೆ.