ಈ ಜನರು ರೈಲು ಏರುವುದಕ್ಕೆ ಮೂರು ತಿಂಗಳೇ ಬೇಕಾಯ್ತು!
ಶ್ರೀನಗರ, ನವೆಂಬರ್.11: ಒಂದಲ್ಲ, ಎರಡಲ್ಲ, ಈ ಜನರು ರೈಲಿನ ಮುಖ ನೋಡೋದಕ್ಕೆ ಮೂರು ತಿಂಗಳೇ ಬೇಕಾಯಿತು. ಹಾಗಂತಾ ಈ ಜನರಿಗೆ ರೈಲು ಸಂಚಾರ ಹೊಸತು ಆಗಿರಲಿಲ್ಲ. ಇವರು ರೈಲನ್ನೇ ನೋಡಿರದ ಮಂದಿಯಂತೂ ಮೊದಲೇ ಅಲ್ಲ. ಹಾಗಿದ್ದರೂ ಕೂಡಾ ಈ ಜನರಿಗೆ ಕಳದೆ ಮೂರು ತಿಂಗಳಿನಿಂದ ರೈಲಿನ ಮುಖ ನೋಡೋದಕ್ಕೂ ಆಗಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ.
ಇದು ಭಾರತಾಂಬೆಯ ಮುಕುಟಮಣಿ ಜಮ್ಮು-ಕಾಶ್ಮೀರದ ಎರಡು ನಗರಗಳ ಕಥೆ. ಹೌದು, ಕೇಂದ್ರ ಸರ್ಕಾರ 370 ವಿಶೇಷ ಸ್ಥಾನಮಾನ ಕಾಯ್ದೆಯನ್ನು ತೆರವುಗೊಳಿಸಿದ್ದೇ ತೆರವುಗೊಳಿಸಿದ್ದು. ಈ ಎರಡು ನಗರಗಳ ನಡುವೆ ಬಸ್ ಹಾಗೂ ರೈಲು ಸಂಚಾರವೆಲ್ಲ ಬಂದ್ ಆಗಿತ್ತು. ಅದಾಗಿ ಮೂರು ತಿಂಗಳ ನಂತರ ಈಗ ಮತ್ತೆ ರೈಲು ಸಂಚಾರ ಶುರುವಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ
ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರ ಹಾಗೂ ಬಾರಾಮುಲ್ಲಾ ನಡುವಿನ ರೈಲ್ವೆ ಸಂಚಾರ ಮತ್ತೆ ಆರಂಭಗೊಳ್ಳಲಿದೆ. ಕಳೆದ ಆಗಸ್ಟ್.05ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ವಿಶೇಷ ಸ್ಥಾನಮಾನವನ್ನು ತೆರವುಗೊಳಿಸಿತ್ತು. ಅಂದಿನಿಂದ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಜಮ್ಮು-ಕಾಶ್ಮೀರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂರು ತಿಂಗಳವರೆಗೂ ರೈಲ್ವೆ ಸಂಚಾರವನ್ನು ಇಷ್ಟು ಅವಧಿಗೆ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ.
ನಾಳೆಯಿಂದ ರೈಲ್ವೆ ಸಂಚಾರ ಶುರು:
ಶ್ರೀನಗರದಿಂದ ಬಾರಾಮುಲ್ಲಾ ನಡುವಿನ ರೈಲ್ವೆ ಸಂಚಾರ ನಾಳೆಯಿಂದ ಮತ್ತೆ ಆರಂಭವಾಗಲಿದೆ. ಎರಡು ಮಾರ್ಗಗಳ ನಡುವೆ ಹಳೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇದಾದ ನಂತರದಲ್ಲೇ ಅಂದರೆ ನಾಳೆಯಿಂದಲೇ ರೈಲ್ವೆ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ರೈಲ್ವೆ ಸಂಚಾರವಷ್ಟೇ ಅಲ್ಲ. ವಿಶೇಷ ಸ್ಥಾನಮಾನ ತೆರವುಗೊಳ್ಳುತ್ತಿದ್ದಂತೆ ಬಸ್ ಸಂಚಾರಕ್ಕೂ ಕೂಡಾ ಬ್ರೇಕ್ ಬಿದ್ದಿತ್ತು. ಈಗ ಕಣಿವೆ ರಾಜ್ಯದಲ್ಲಿ ವಾತಾವರಣ ಕೊಂಚ ತಿಳಿಗೊಂಡಿದೆ. ರೈಲ್ವೆ ಸಂಚಾರದ ಜೊತೆಗೆ ಬಸ್ ಸಂಚಾರ ಪುನರ್ ಆರಂಭಗೊಂಡಿದೆ.