Breaking: ಕಾಶ್ಮೀರ: ಎರಡು ದಿನ..ನಾಲ್ಕು ದಾಳಿ..ಇಬ್ಬರು ಪೊಲೀಸರ ಸಾವು
ಶ್ರೀನಗರ, ಆಗಸ್ಟ್ 16: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಬಿಗಿ ಭದ್ರತೆ ಮತ್ತು ಹೆಚ್ಚಿನ ಎಚ್ಚರಿಕೆಯ ನಡುವೆಯೂ ಭಾನುವಾರ ಮತ್ತು ಸೋಮವಾರ ಎರಡು ದಿನಗಳಲ್ಲಿ ನಾಲ್ಕು ದಾಳಿಗಳು ನಡೆದಿವೆ. ಘಟನೆಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. ಪೊಲೀಸ್ ಅಧಿಕಾರಿ ಸೇರಿದಂತೆ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ.
ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಕಂಟ್ರೋಲ್ ರೂಂ ಅನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ಶ್ರೀನಗರದ ನೌಹಟ್ಟಾದಲ್ಲಿ ಭಾನುವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ, ಶ್ರೀನಗರ ಸಮೀಪದ ಗೋಪಾಲ್ಪೋರಾದಲ್ಲಿ ಗ್ರೆನೇಡ್ ದಾಳಿಯಲ್ಲಿ ಮತ್ತೊಬ್ಬ ನಾಗರಿಕ ಗಾಯಗೊಂಡಿದ್ದಾರೆ.
ದಾಳಿಕೋರರ ಬಗ್ಗೆ ಸುಳಿವು ಸಿಕ್ಕಿದ್ದು, ಅವರು ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿದ್ದಾರೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. "ಈ ದಾಳಿಯ ಹಿಂದಿರುವ ವ್ಯಕ್ತಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ನೌಹಟ್ಟಾದಲ್ಲಿ ನಡೆದ ಗುಂಡಿನ ಚಕಮಕಿ ದೃಶ್ಯದಲ್ಲಿ ಸ್ಕೂಟರ್, ಒಂದು ರೈಫಲ್ ಮತ್ತು ಎರಡು ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳು ಇಬ್ಬರು ಭಯೋತ್ಪಾದಕರಿಗೆ ಸೇರಿದವು ಎಂದು ಪೊಲೀಸರು ತಿಳಿಸಿದ್ದಾರೆ.
ಶೂಟೌಟ್ನಲ್ಲಿ ಇಬ್ಬರಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಆದರೆ ಕತ್ತಲೆಯಿಂದಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಇನ್ನೂ, ಭಯೋತ್ಪಾದಕರಿಗೆ ಸ್ಕೂಟರ್ ಒದಗಿಸಿದ್ದಕ್ಕಾಗಿ ಶ್ರೀನಗರ ನಿವಾಸಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ, ಪಂಜಾಬ್ ಪೊಲೀಸರು ಪಾಕ್-ಐಎಸ್ಐ ಬೆಂಬಲಿತ ಭಯೋತ್ಪಾದಕ ಘಟಕವನ್ನು ಭೇದಿಸಿ ನಾಲ್ವರು ಸದಸ್ಯರನ್ನು ಬಂಧಿಸಿದ್ದಾರೆ. ಐಎಸ್ಐ ಬೆಂಬಲಿತ ಭಯೋತ್ಪಾದಕರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮಾರಣಾಂತಿಕವಾಗಿವೆ. ಇವುಗಳನ್ನು ಸಾಮಾನ್ಯವಾಗಿ ಪಾಕಿಸ್ತಾನ ಸೇನೆಯು ಬಳಸುತ್ತದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕೆನಡಾ ಮೂಲದ ಅರ್ಶ್ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಮತ್ತು ಆಸ್ಟ್ರೇಲಿಯಾ ಮೂಲದ ದರೋಡೆಕೋರ ಗುರ್ಜಂತ್ ಸಿಂಗ್ ಅಲಿಯಾಸ್ ಜಂತಾ ಅವರೊಂದಿಗೆ ಸಂಬಂಧ ಹೊಂದಿದ್ದರು. ದೆಹಲಿ ಪೊಲೀಸರ ಸಹಾಯದಿಂದ ಪಂಜಾಬ್ ಪೊಲೀಸ್ನ ಕೌಂಟರ್-ಇಂಟಲಿಜೆನ್ಸ್ ಘಟಕವು ನಡೆಸಿದ ಗುಪ್ತಚರ ನೇತೃತ್ವದ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ.