Video: ಶ್ರೀನಗರ: ತ್ರಿವರ್ಣ ಧ್ವಜ ಹಾರಿಸಲು ಜಿದ್ದಿಗೆ ಬಿದ್ದವರು ಖಾಕಿ ವಶಕ್ಕೆ
ಶ್ರೀನಗರ್, ಅಕ್ಟೋಬರ್.26: ಜಮ್ಮು ಕಾಶ್ಮೀರದ ಲಾಲ್ ಚೌಕ್ ನಲ್ಲಿರುವ ಗಡಿಯಾರದ ಗೋಪುರದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವುದಕ್ಕೆ ಮುಂದಾದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀನಗರದ ಲಾಲ್ ಚೌಕ್ ಬಳಿ ನೆರೆದ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗುತ್ತಾ ಗಡಿಯಾರದ ಕಂಬದ ಮೇಲೆ ರಾಷ್ಟ್ರಧ್ವಜ ಹಾರಿಸುವುದಕ್ಕೆ ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತದನಂತರ ಬಿಜೆಪಿ ಕಾರ್ಯಕರ್ತರು ನಗರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರುವುದು ಕಂಡು ಬಂದಿತು. ಭಾನುವಾರವಷ್ಟೇ ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮುಫ್ತಿ ಜಮ್ಮು ಕಾಶ್ಮೀರದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಧ್ವಜ ಇರುವವರೆಗೂ ಬೇರೆ ಯಾವುದೇ ಧ್ವಜವನ್ನು ಹಾರಿಸುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ.
#WATCH | Jammu and Kashmir: Police detain Bharatiya Janata Party (BJP) workers who were allegedly trying to hoist national flag at clock tower in Lal Chowk, Srinagar. pic.twitter.com/j8rUFH0kco
— ANI (@ANI) October 26, 2020
ಮೆಹಬೂಬ್ ಮುಫ್ತಿ ಹೇಳಿದ್ದೇನು?:
"ನಮ್ಮ ರಾಷ್ಟ್ರೀಯ ಧ್ವಜದೊಂದಿಗಿನ ನಮ್ಮ ಸಂಬಂಧವು ಹಿಂದಿನ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಧ್ವಜದಿಂದ ಸ್ವತಂತ್ರವಾಗಿಲ್ಲ. ನಾವು ಈ ಮೊದಲಿನ ಧ್ವಜವನ್ನು ಪಡೆದಾಗ, ಭಾರತೀಯ ಧ್ವಜವನ್ನೂ ಹಾರಿಸುತ್ತೇವೆ. ನಮ್ಮಿಂದ ಕದ್ದುಕೊಂಡಿರುವ ಧ್ವಜವನ್ನು ನಮಗೆ ಹಿಂತಿರುಗಿಸುವವರೆಗೂ ಬೇರೆ ಯಾವುದೇ ಧ್ವಜ ಹಾರಿಸುವುದಕ್ಕೆ ಒಪ್ಪುವುದಿಲ್ಲ" ಎಂದು ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದರು.