"ಜಮ್ಮುಕಾಶ್ಮೀರದಲ್ಲಿ ಬಿಜೆಪಿಯೇತರ ಅಭ್ಯರ್ಥಿಗಳು ಪ್ರಚಾರ ಮಾಡುವಂತಿಲ್ಲ"
ಶ್ರೀನಗರ್, ನವೆಂಬರ್.19: ಜಮ್ಮು ಮತ್ತು ಕಾಶ್ಮೀರದಲ್ಲಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ತಂಡದ ಸದಸ್ಯ ಪಕ್ಷಗಳು ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮುಕ್ತವಾಗಿ ಪ್ರಚಾರ ಮಾಡುವುದನ್ನು ನಿಯಂತ್ರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಭಾರತೀಯ ಜನತಾ ಪಕ್ಷ ಮತ್ತು ಬಿಜೆಪಿಯ ಮಿತ್ರಪಕ್ಷಗಳ ಪ್ರಚಾರಕ್ಕೆ ಭದ್ರತೆಯನ್ನು ನೀಡಲಾಗುತ್ತಿದೆ. ಆದರೆ ವಿರೋಧ ಪಕ್ಷಗಳ ಪ್ರಚಾರದ ಸಂದರ್ಭದಲ್ಲಿ ಭದ್ರತೆ ನೀಡುವುದಕ್ಕೆ ನಿರಾಕರಿಸುತ್ತಿರುವುದು ಸೂಕ್ತ ಕ್ರಮವಲ್ಲ ಎಂದು ಗುಪ್ಕರ್ ತಂಡವು ದೂಷಿಸಿದೆ.
ಸುಳ್ಳಿನ ಹರಡುವಿಕೆ, ಭ್ರಮೆ ಸೃಷ್ಟಿವುದೇ ಮೋದಿ ಮಾರ್ಗ ಎಂದ ಕಾಂಗ್ರೆಸ್
"ನಮ್ಮ ಅಭ್ಯರ್ಥಿಗಳು ಪ್ರಚಾರ ಮಾಡುವುದಕ್ಕೆ ನಿರ್ಬಂಧವನ್ನು ವಿಧಿಸುತ್ತಿದ್ದು, ಹೋಟೆಲ್ ಮತ್ತು ಇತರೆ ಪ್ರದೇಶಗಳಲ್ಲಿ ಇರಿಸಲಾಗುತ್ತಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಮಾತ್ರ ಎಲ್ಲ ರೀತಿಯ ಭದ್ರತೆಗಳನ್ನು ನೀಡಲಾಗುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ನಾಸಿರ್ ಅಸ್ಲಮ್ ವಾನಿ ಆರೋಪಿಸಿದ್ದಾರೆ.
ಶ್ರೀನಗರ ಹೋಟೆಲ್ ನಲ್ಲಿ ಎನ್ ಸಿ ಅಭ್ಯರ್ಥಿ:
ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಖಾಕ್ ಕ್ಷೇತ್ರದ ಅಭ್ಯರ್ಥಿ ರಯಿಸ್ ಅಹ್ಮದ್ ರನ್ನು ಶ್ರೀನಗರದ ಖಾಸಗಿ ಹೋಟೆಲ್ ನಲ್ಲಿ ಇರಿಸಲಾಗಿದೆ. ಯಾವುದೇ ರೀತಿ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಿಲ್ಲ ಹಾಗೂ ಭದ್ರತೆಯನ್ನು ಒದಗಿಸಿಲ್ಲ. ಇಂದು ಮಧ್ಯಾಹ್ನದ ವೇಳೆಗೆ ಪ್ರಚಾರಕ್ಕೆ ತೆರಳಲು ಅನುಮತಿ ನೀಡಿದ್ದು, ನಾಲ್ಕ ಗಂಟೆ ವೇಳೆಗೆ ವಾಪಸ್ಸಾಗುವಂತೆ ಸೂಚಿಸಲಾಗಿತ್ತು. ಇಷ್ಟು ಅವಧಿಯಲ್ಲಿ ನಾನು ನನ್ನ ಕ್ಷೇತ್ರಕ್ಕೆ ತೆರಳಿ ಪ್ರಚಾರ ಮಾಡಿ ವಾಪಸ್ಸಾಗುವುದಾದರೂ ಹೇಗೆ ಎಂದು ಅಭ್ಯರ್ಥಿ ರಯಿಸ್ ಅಹ್ಮದ್ ಪ್ರಶ್ನಿಸಿದ್ದಾರೆ.
ಗುಪ್ಕರ್ ಮೈತ್ರಿಕೂಟದ ಆರೋಪ ನಿರಾಕರಿಸಿದ ಬಿಜೆಪಿ:
ಬಿಜೆಪಿ ಅಭ್ಯರ್ಥಿಗಳಿಗೆ ಮಾತ್ರ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಪ್ರಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ. ಪ್ರತಿಪಕ್ಷಗಳ ಅಭ್ಯರ್ಥಿಗಳಿಗೆ ಭದ್ರತೆ ನೆಪದಲ್ಲಿ ಒಂದು ಕಡೆ ಕೂಡಿ ಹಾಕಲಾಗುತ್ತಿದೆ ಎಂಬ ಆರೋಪವನ್ನು ಬಿಜೆಪಿ ಮುಖಂಡ ರಶಿದ್ ಮಿರ್ ತಳ್ಳಿ ಹಾಕಿದ್ದಾರೆ.
ಪ್ರತಿಯೊಬ್ಬ ಅಭ್ಯರ್ಥಿಗೆ ಪ್ರತ್ಯೇಕ ಭದ್ರತೆ ಸಾಧ್ಯವಿಲ್ಲ:
ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತ್ಯೇಕವಾಗಿ ಭದ್ರತೆ ಒದಗಿಸುವುದಕ್ಕೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನು ಎಸ್ಕಾರ್ಟ್ ಮಾಡಲಾಗಿದ್ದು, ಒಂದು ಸುರಕ್ಷಿತ ಪ್ರದೇಶದಲ್ಲಿ ಇರಿಸಲಾಗಿದೆ ಎಂದು ಜಮ್ಮು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.