ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಮಗುಚಿ ಬಿದ್ದ ದೋಣಿ
ಶ್ರೀನಗರ, ಡಿಸೆಂಬರ್ 14: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಜಿಲ್ಲಾ ಅಭಿವೃದ್ಧಿ ಸಮಿತಿ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಮಾಧ್ಯಮದ ಸಿಬ್ಬಂದಿ ಇದ್ದ ಶಿಕಾರಾ (ದೋಣಿ) ಭಾನುವಾರ ದಾಲ್ ಸರೋವರದಲ್ಲಿ ಮಗುಚಿ ಬಿದ್ದಿದೆ. ಚುನಾವಣಾ ಪ್ರಚಾರದ ಅಂತಿಮ ಹಂತದಲ್ಲಿ ದೋಣಿ ಸರೋವರದ ದಡಕ್ಕೆ ಸಮೀಪಿಸುವಾಗ ಪಲ್ಟಿ ಹೊಡೆದಿದೆ.
ದೋಣಿಯಿಂದ ಕೊರೆಯುವ ತಣ್ಣೀರಿನೊಳಗೆ ಬಿದ್ದ ನಾಲ್ವರು ಬಿಜೆಪಿ ಮುಖಂಡರು ಮತ್ತು ಮಾಧ್ಯಮದವರನ್ನು ಸ್ಥಳದಲ್ಲಿದ್ದ ಜನರು ಮತ್ತು ರಾಜ್ಯ ವಿಪತ್ತು ಪರಿಹಾರ ತಂಡದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ. ದಾಲ್ ಸರೋವರವು ಪ್ರಮುಖ ಪ್ರವಾಸಿ ತಾಣವಾಗಿದ್ದು, ಇಲ್ಲಿ ದೋಣಿಯನ್ನು ಬಳಸಿ ಬಿಜೆಪಿ ಪ್ರಚಾರ ನಡೆಸುತ್ತಿತ್ತು.
ಚುನಾವಣಾ ಅಭ್ಯರ್ಥಿ ಮೇಲೆ ಉಗ್ರರಿಂದ ಗುಂಡಿನ ದಾಳಿ
'ಶಿಕಾರಾ ಪ್ರಚಾರ'ವನ್ನು ಜಮ್ಮು ಮತ್ತು ಕಾಶ್ಮೀರದ ಡಿಡಿಸಿ ಚುನಾವಣೆಯ ಬಿಜೆಪಿ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಈ ಪ್ರಚಾರದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ತರುಣ್ ಚುಗ್ ಮತ್ತು ಶಹನವಾಜ್ ಹುಸೇನ್ ಕೂಡ ಹಾಜರಿದ್ದರು. ಆದರೆ ಪಲ್ಟಿಹೊಡೆದ ದೋಣಿಯಲ್ಲಿ ಅವರು ಇರಲಿಲ್ಲ.
'ದೋಣಿಯಲ್ಲಿ ಮಾಧ್ಯಮದ ಅನೇಕ ಮಂದಿ ಇದ್ದರು. ಅದೃಷ್ಟವಶಾತ್ ಎಲ್ಲರೂ ಸುರಕ್ಷಿತರಾಗಿದ್ದಾರೆ. ದಾಲ್ ಸರೋವರಲ್ಲಿ ಉತ್ತಮ ಪ್ರಚಾರ ನಡೆಸಿದ್ದೆವು. ದಡ ತಲುಪಿದಾಗ ದೋಣಿ ಮಗುಚಿ ಬಿದ್ದಿದೆ' ಎಂದು ಶಹನವಾಜ್ ಹುಸೇನ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಡಿಸಿಸಿ ಚುನಾವಣೆ; ಬಿಜೆಪಿ v/s ಪಿಎಜಿಡಿ ಮೈತ್ರಿಕೂಟ
ಶಿಕಾರಾ ಸಾಮಾನ್ಯ ಮರದ ದೋಣಿಯಾಗಿದ್ದು, ಶ್ರೀನಗರದ ಅನೇಕ ಸರೋವರಗಳಲ್ಲಿ ಸಾರಿಗೆಗಾಗಿ ಬಳಸಲಾಗುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದ ಸಾಂಸ್ಕೃತಿಕ ಸಂಕೇತಗಳಲ್ಲಿ ಒಂದು.