ಕಾರ್ಗಿಲ್ ವಿಜಯ ದಿನದಂದು ಸೇನಾ ಮುಖ್ಯಸ್ಥರಿಂದ ಪಾಕ್ ಗೆ ಎಚ್ಚರಿಕೆ
ಕಾರ್ಗಿಲ್, ಜುಲೈ 26: ಕಾರ್ಗಿಲ್ ವಿಜಯ ದಿವಸದ 20 ನೇ ವಾರ್ಷಿಕೋತ್ಸವ(1999, ಜುಲೈ 26)ದ ನಿಮಿತ್ತ ಪತ್ರಿಕಾ ಗೋಷ್ಠಿ ನಡೆಸಿದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಪಾಕಿಸ್ತಾನಕ್ಕೆ ಮತ್ತೊಮ್ಮೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
"ನೀವು ಮತ್ತೊಮ್ಮೆ ಇಂಥ ಸಾಹಸಕ್ಕೆ ಕೈಹಾಕಿದರೆ ನಾವು ಸುಮ್ಮನಾಗುವುದಿಲ್ಲ. ಆಗಿನದಕ್ಕಿಂತ ಉಗ್ರ ಪ್ರತಿಕ್ರಿಯೆ ನೀಡುತ್ತೇವೆ" ಎಂದು ರಾವತ್ ಹೇಳಿದರು.
ವಿಜಯದಿವಸಕ್ಕೂ ಮುನ್ನ ಪಾಕ್ ಗೆ ಸೇನಾ ಮುಖಂಡರಿಂದ ನೇರ ಎಚ್ಚರಿಕೆ
'ಇಪ್ಪತ್ತನೇ ವರ್ಷದ ವಿಜಯ ದಿವಸಕ್ಕೆ ನಿಮ್ಮ ಸಂದೇಶವೇನು' ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 'ಈಗಾಗಲೇ ಗಡಿಯಲ್ಲಿ ಕೊಂಚ ಮಟ್ಟಿನ ಶಾಂತಿ ನೆಲೆಸಿದೆ. ಇದು ಮುಂದುವರಿಯಬೇಕು. ಶಾಂತಿ ಕದಡಲು ಪಾಕಿಸ್ತಾನ ಪ್ರಯತ್ನ ನಡೆಸಿದ್ದೇ ಆದಲ್ಲಿ ಅತ್ಯುಗ್ರ ಪ್ರತ್ಯುತ್ತರ ಪಡೆಯಬೇಕಾಗಬಹುದು' ಎಂದು ಅವರು ಹೇಳಿದರು.
ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರನ್ನು ನೆನಪಿಸಿಕೊಂಡು, ಅವರಿಗೆ ನಮನ ಸಲ್ಲಿಸಿದ ರಾವತ್, "ನಾನು ಈ ದೇಶದ ಜನರಿಗೆ ಒಂದು ಭರವಸೆ ನೀಡಬಲ್ಲೆ. ನಮ್ಮ ಸೇನೆ ಎಂದಿಗೂ ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ. ಅದು ಗುರಿ ಸಾಧಿಸಿಯೇ ಹಿಂದಿರುಗುತ್ತದೆ" ಎಂದು ರಾವತ್ ಹೇಳಿದರು.
"ಸೇನಾ ವಿಭಾಗದಲ್ಲಿ ಆಧುನೀಕರಣದ ಅಗತ್ಯವಿದೆ. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. 2020 ರ ಹೊತ್ತಿಗೆ ಪೊಫೋರ್ಸ್ ಮಾದರಿಯ ಎರಡು ಆಯುಧಗಳನ್ನು ಭಾರತದಲ್ಲೇ ನಿರ್ಮಿಸಲಿದ್ದೇನೆ" ಎಂದು ರಾವತ್ ಹೇಳಿದರು.
ಗುರುವಾರ ಮಾತನಾಡಿದ್ದ ರಾವತ್, "ನಮಗೂ ಉಗ್ರ ಹೆಜ್ಜೆ ಇಡುವುದಕ್ಕೆ ಬರುತ್ತದೆ ಎಂಬುದು ಗೊತ್ತಿರಲಿ. ಯಾವುದಕ್ಕೂ ಪಾಕಿಸ್ತಾನ ಎಚ್ಚರಿಕೆಯಿಂದಿರುವುದು ಒಳಿತು" ಎಂದು ರಾವತ್ ಹೇಳಿದ್ದರು.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ಗೆ ಪರಮ ವಿಶಿಷ್ಟ ಸೇವಾ ಪದಕ
ಪುಲ್ವಾಮಾ ದಾಳಿಯ ಬಗ್ಗೆ ಪಾಕಿಸ್ತಾನಿ ಪ್ರಧಾನಿ ನೀಡಿದ್ದ, 'ಇದು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಘಟನೆ' ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾವತ್, 'ಪುಲ್ವಾಮಾ ಘಟನೆಯ ಬಗ್ಗೆ ಯಾರು ನೀಡುವ ಹೇಳಿಕೆಯನ್ನೂ ಕೇಳುವ ಅಗತ್ಯ ನಮಗಿಲ್ಲ. ಆ ಘಟನೆಗೆ ಯಾರು ಕಾರಣ, ಕುಮ್ಮಕ್ಕು ನೀಡಿದ್ದು ಯಾರು ಎಂಬ ಬಗ್ಗೆ ಈಗಾಗಲೇ ಅಂತಾರಾಷ್ಟ್ರೀಯ ಏಜೆನ್ಸಿಗಳಿಗೆ ಎಲ್ಲ ಸಾಕ್ಷ್ಯಗಳನ್ನೂ ನೀಡಿದ್ದೇವೆ' ಎಂದು ರಾವತ್ ಹೇಳಿದ್ದರು.
1999 ರಲ್ಲಿ ಜಮ್ಮು ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಪಾಕ್ ಸೇನೆ ವಶಪಡಿಸಿಕೊಂಡ ಕಾರಣ ಉಭಯ ದೇಶಗಳ ನಡುವೆ ಆರಂಭವಾದ ಯುದ್ಧ ಮೇ ಯಿಂದ ಜುಲೈ ತಿಂಗಳವರೆಗೆ ನಡೆದಿತ್ತು. ಆದರೆ ಕೊನೆಗೆ ಭಾರತ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಗಿ, ಜುಲೈ 25 ರಂದು ವಿಜಯ ಪತಾಕೆ ಹಾರಿಸಿತ್ತು.
ಈ ಯುದ್ಧದಲ್ಲಿ ಭಾರತದ 527 ಯೋಧರು ಹುತಾತ್ಮರಾದರು. ಅವರೆಲ್ಲರಿಗೆ ಈ ದಿನ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಪಾಕಿಸ್ತಾನದ 1000 ಕ್ಕೂ ಹೆಚ್ಚು ಸೈನಿಕರನ್ನು ಭಾರತ ಹತ್ಯೆಗೈದಿತ್ತು.