J&K ಯ ಬಂಡಿಪೋರಾದಲ್ಲಿ ಬಿಹಾರದ ಕಾರ್ಮಿಕನ ಗುಂಡಿಕ್ಕಿ ಹತ್ಯೆ
ಶ್ರೀನಗರ ಆಗಸ್ಟ್ 12: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ವಲಸೆ ಕಾರ್ಮಿಕನೊಬ್ಬನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಬಂಡಿಪೋರಾದ ಅಜಾಸ್ ತಹಸಿಲ್ನ ಸದುನಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮೊಹಮ್ಮದ್ ಜಲೀಲ್ ಅವರ ಪುತ್ರ ಮತ್ತು ಬಿಹಾರ ನಿವಾಸಿ ಮೊಹಮ್ಮದ್ ಅಮ್ರೇಜ್ ಎಂದು ಗುರುತಿಸಲಾಗಿದೆ.
ಕಾಶ್ಮೀರ ವಲಯ ಪೊಲೀಸರು ಟ್ವಿಟರ್ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. "ಮಧ್ಯರಾತ್ರಿಯಲ್ಲಿ ಭಯೋತ್ಪಾದಕರು ಬಂಡಿಪೋರಾದ ಸೋದ್ನಾರಾ ಸುಂಬಲ್ನಲ್ಲಿ ಹೊರಗಿನ ಕಾರ್ಮಿಕ ಮೊಹಮ್ಮದ್ ಅಮ್ರೇಜ್ ಎಸ್ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಅವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಅಲ್ಲಿ ಅವರು ಸಾವನ್ನಪ್ಪಿದರು'' ಎಂದು ಬರೆಯಲಾಗಿದೆ.
ಕಣಿವೆಯಲ್ಲಿ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಉಗ್ರರು ವ್ಯವಸ್ಥಿತವಾಗಿ ದಾಳಿ ನಡೆಸುತ್ತಿದ್ದಾರೆ. ಜೂನ್ 2 ರಂದು ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಕುಲ್ಗಾಮ್ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು.
ಜೂನ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಬಿಹಾರದ 17 ವರ್ಷದ ದಿಲ್ಖುಷ್ ಕುಮಾರ್ ಎಂದು ಗುರುತಿಸಲಾದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದರು. ಈ ವೇಳೆ ಇನ್ನೊಬ್ಬರು ಗಾಯಗೊಂಡಿದ್ದರು. ಸ್ಥಳೀಯರಲ್ಲದ ಕಾರ್ಮಿಕರು ಬುದ್ಗಾಮ್ ಜಿಲ್ಲೆಯ ಚದೂರ ಗ್ರಾಮದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು.
ಮೇ ತಿಂಗಳಲ್ಲಿ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದೂ ಶಿಕ್ಷಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು. ನಂತರ ಆಕೆಯ ಗಾಯಗಳಿಗೆ ಬಲಿಯಾದಳು.
ಜೂನ್ 2ರಂದು ನಡೆದ ಘಟನೆ
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಉಗ್ರನೊಬ್ಬ (ಜೂನ್ 2) ಗುರುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದನು. ಕಣಿವೆಯಲ್ಲಿನ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಹಿಂದೂಗಳನ್ನು ಗುರಿಯನ್ನಾಗಿಸಿ ನಡೆದ ಎರಡನೇ ದಾಳಿ ಇದಾಗಿದೆ. ರಾಜಸ್ಥಾನ ಮೂಲದವರಾದ ಎಲಾಖಹಿ ದೆಹಟಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಅರೇಹ್ ಬ್ರ್ಯಾಂಚ್ನ ಒಳಗೆ ಗುಂಡಿಕ್ಕಿ ಕೊಲ್ಲಲಾಗಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು. ಬ್ಯಾಂಕ್ ಒಳಗೆ ಗ್ರಾಹಕನಂತೆ ಪ್ರವೇಶಿಸಿದ ಉಗ್ರನೊಬ್ಬ, ಗನ್ನಿಂದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಜೂನ್ 3ರಂದು ನಡೆದ ಘಟನೆ
ಇನ್ನೂ ಬಿಹಾರದ 17 ವರ್ಷದ ದಿಲ್ಖುಷ್ ಕುಮಾರ್ ಎಂಬ ಕಾರ್ಮಿಕ ಜೂನ್ 2ರಂದು ಸಂಜೆ ನಡೆದ ಉಗ್ರರ ದಾಳಿಗೆ ಬಲಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ ಪರಿಣಾಮ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದನು.
ಬಿಹಾರದ ವಲಸೆ 17 ವರ್ಷದ ದಿಲ್ಖುಷ್ ಕುಮಾರ್ ಮತ್ತು ಪಂಜಾಬ್ ನಿವಾಸಿ ರಾಜನ್ ಎಂಬುವವರು ಬುದ್ಗಾಮ್ ಜಿಲ್ಲೆಯ ಚದೂರ ಗ್ರಾಮದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆದ ಪರಿಣಾಮ ಇವರಿಬ್ಬರೂ ಗಾಯಗೊಂಡಿದ್ದರು. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ವೇಳೆ ದಿಲ್ಖುಷ್ ಸಾವನ್ನಪ್ಪಿದ್ದಾನೆ.
ಸರಣಿ ದಾಳಿಯಿಂದ ಆತಂಕ
ಕಳೆದ ವರ್ಷ ಅಕ್ಟೋಬರ್ನಲ್ಲಿ ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲೆಯೊಳಗೆ ನುಗ್ಗಿದ ಉಗ್ರರು, ಪ್ರಿನ್ಸಿಪಾಲ್ ಮತ್ತು ಶಿಕ್ಷಕನನ್ನು ಸಮೀಪದಿಂದ ಗುಂಡು ಹಾರಿಸಿದ್ದರು. ಈ ದಾಳಿ ನಡೆದ ಸಂದರ್ಭದಲ್ಲಿ ಶಾಲೆಯಲ್ಲಿ ಯಾವ ಮಕ್ಕಳೂ ಇರಲಿಲ್ಲ ಮತ್ತು ಆನ್ಲೈನ್ ತರಗತಿಗಳು ನಡೆಯುತ್ತಿದ್ದವು. ದಾಳಿಯಲ್ಲಿ ಮೃತಪಟ್ಟವರಿಬ್ಬರೂ ಕಾಶ್ಮೀರ ಕಣಿವೆಯ ಸಿಖ್ ಮತ್ತು ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಶಿಕ್ಷಕ ದೀಪಕ್ ಚಾಂದ್ ಅವರು ಜಮ್ಮುವಿನ ಹಿಂದೂ ಸಮುದಾಯದವರು. ಪ್ರಿನ್ಸಿಪಾಲ್ ಸುಪುಂದರ್ ಕೌರ್ ಸಿಖ್ ಧರ್ಮೀಯರಾಗಿದ್ದಾರೆ. ಶ್ರೀನಗರದಲ್ಲಿ ಮೂರು ಕಡೆ ಸರಣಿ ದಾಳಿಗಳನ್ನು ನಡೆಸಿದ್ದ ಉಗ್ರರು ಮೂವರನ್ನು ಹತ್ಯೆ ಮಾಡಿದ್ದರು. ಈ ಘೋರ ಘಟನೆ ನಡೆದ ಬಳಿಕ ಭಯೋತ್ಪಾದನಾ ದಾಳಿಗಳಲ್ಲಿ ಏಳು ಮಂದಿ ನಾಗರಿಕರು ಮೃತಪಟ್ಟಿದ್ದಾರೆ.
ಬಿಜೆಪಿ ನಿರೀಕ್ಷೆ ಹುಸಿ
ಈ ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರದಲ್ಲಿನ ಸಾಮಾನ್ಯ ನಾಗರಿಕರು ಮತ್ತು ಸೈನಿಕರ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. 370ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಶಾಂತಿ ಉಂಟಾಗುತ್ತದೆ, ಭಯತ್ಪಾದನಾ ದಾಳಿ ಕಡಿಮೆಯಾಗಿದೆ ಎಂದು ಬಿಜೆಪಿ ಬಿಂಬಿಸುತ್ತಿತ್ತು. ಆದರೆ ಇಲ್ಲಿ ಜನಸಾಮಾನ್ಯರ ಸುರಕ್ಷತೆಗೆ ಅಪಾಯ ಹೆಚ್ಚುತ್ತಿದೆ ಎಂದು ಅನೇಕರು ಆರೋಪಿಸಿದ್ದಾರೆ.