ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಬಿಗ್ ಶಾಕ್! ವಿರೋಧಿಗಳಿಂದ ಮೈತ್ರಿ?
ಶ್ರೀನಗರ, ನವೆಂಬರ್ 21: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯನ್ನು ಮೂಲೆಗುಂಪು ಮಾಡಲು ಹಾವು-ಮುಂಗುಸಿಯಂತಿದ್ದ ಪಿಡಿಪಿ ಮತ್ತು ನ್ಯಾಶನಲ್ ಕಾನ್ಫಿರೆನ್ಸ್ ಪಕ್ಷಗಳು ಒಂದಾಗಲಿವೆಯಾ? ಈ ಎರಡು ಪಕ್ಷದ ಜೊತೆ ಬಿಜೆಪಿಯ ಬದ್ಧ ವೈರಿ ಕಾಂಗ್ರೆಸ್ ಪಕ್ಷವೂ ಕೈಜೋಡಿಸಲಿದೆಯಾ?
ಈ ಮೂರು ಪಕ್ಷಗಳ ನಂಬಲರ್ಹ ಮೂಲಗಳು ನೀಡಿದ ಮಾಹಿತಿಯ ಪ್ರಕಾರ ಜಮ್ಮು ಕಾಶ್ಮಿರದಲ್ಲಿ ಕೆಲವೇ ದಿನಗಳಲ್ಲಿ ಬಿಜೆಪಿಗೆ ಆಘಾತ ನೀಡುವಂಥ ರಾಜಕೀಯ ಬೆಳವಣಿಗೆ ನಡೆಯಲಿದೆ.
ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?
ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ(ಪಿಡಿಪಿ) ಮತ್ತು ಓಮರ್ ಅಬ್ದುಲ್ಲಾ ಅವರ ನ್ಯಾಶನಲ್ ಕಾನ್ಫಿರೆನ್ಸ್ ಪಕ್ಷದ ಜೊತೆ ಕಾಂಗ್ರೆಸ್ ಕೂಡ ಕೈ ಜೋಡಿಸಿ ಸರ್ಕಾರ ರಚಿಸಲು ನೆರವಾಗಲಿದೆ!
ಡಿಸೆಂಬರ್ ನಲ್ಲಿ ರಾಜ್ಯಪಾಲರ ಆಳ್ವಿಕೆ ಅಂತ್ಯ
ಕಳೆದ ಜೂನ್ ನಲ್ಲಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ಬಿದ್ದ ನಂತರ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು. ಆರು ತಿಂಗಳ ಅವಧಿಯ ರಾಜ್ಯಪಾಲರ ಆಳ್ವಿಕೆ ಡಿಸೆಂಬರ್ 19 ರಂದು ಅಂತ್ಯಗೊಳ್ಳಲಿದೆ. ಇದಾದ ನಂತರ ಇನ್ನೂ ವಿಸರ್ಜನೆಯಾಗದ ವಿಧಾನಸಭೆಯನ್ನು ವಿಸರ್ಜಿಸಿ, ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಡಿಸೆಂಬರ್ 19 ರವರೆಗೆ ಯಾವುದೇ ಪಕ್ಷಗಳೂ ಸರ್ಕಾರ ರಚಿಸದೆ ಇದ್ದಲ್ಲಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಪಿಡಿಪಿ ಮೈತ್ರಿ ವದಂತಿ: ಮುಫ್ತಿ ಏನಂತಾರೆ?
ಬಿಜೆಪಿ ನಡೆಸುತ್ತಿರುವ ತೆರೆಮರೆಯ ಪ್ರಯತ್ನವೇನು?
ಅಷ್ಟಕ್ಕೂ ತರಾತುರಿಯಲ್ಲಿ ಈ ಮೂರು ಪಕ್ಷಗಳೂ ಮೈತ್ರಿ ಮಾಡಿಕೊಳ್ಳಲು ಯೋಚಿಸುತ್ತಿರುವುದಕ್ಕೆ ಕಾರಣವಿದೆ. ಕೆಲವು ಮೂಲಗಳ ಪ್ರಕಾರ ಬಿಜೆಪಿಯು ಕಾಶ್ಮೀರದಲ್ಲಿ ಸರ್ಕಾರ ರಚಿಸುವ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಕಾಶ್ಮೀರದ ಪ್ರಾದೇಶಿಕ ಪಕ್ಷವಾದ ಪೀಪಲ್ಸ್ ಕಾನ್ಫಿರೆನ್ಸ್ ಎಂಬ ಪಕ್ಷದ ಇಬ್ಬರು ಶಾಸಕರು ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ. ಒಟ್ಟು 25 ಶಾಸಕರನ್ನು ಹೊಂದಿರುವ ಬಿಜೆಪಗೆ ಇಷ್ಟಕ್ಕೇ ಬಹುಮತ ಲಭ್ಯವಾಗುವುದಿಲ್ಲ. ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 44(87) ಅನ್ನು ಪಡೆಯಲು ಬಿಜೆಪಿಯು ಪಿಡಿಪಿ ಪಕ್ಷವನ್ನೇ ಒಡೆಯಲು ಹೊಂಚು ಹಾಕುತ್ತಿದೆ ಎಂಬ ಮಾತು ಕೇಳಿಬರುತ್ತಿದೆ! ಇದರಿಂದ ಆತಂಕಗೊಂಡ ಪಿಡಿಪಿ ನ್ಯಾಶನಲ್ ಕಾನ್ಫಿರೆನ್ಸ್ ಜೊತೆ ಮೈತ್ರಿ ಮಾಡಿಕೊಂಡಾದರೂ ಸರ್ಕಾರ ರಚಿಸಲು ಮುಂದಾಗುತ್ತಿದೆ ಎನ್ನಲಾಗುತ್ತಿದೆ.
ಬಿಜೆಪಿ-ಪಿಡಿಪಿ ಬ್ರೇಕಪ್: ಬಿಜೆಪಿಯದು ಕಪಟ ನಾಟಕವೇ?
ಪಿಡಿಪಿಯ ಆಂತರಿಕ ಭಿನ್ನಾಭಿಪ್ರಾಯ ಬಲ್ಲ ಬಿಜೆಪಿ
ಪಿಡಿಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ, ಆಂತರಿಕ ಭಿನ್ನಾಭಿಪ್ರಾಯವಿದೆ ಎಂಬುದನ್ನು ಚೆನ್ನಾಗಿಯೇ ಬಲ್ಲ ಬಿಜೆಪಿ, 28 ಶಾಸಕರನ್ನು ಹೊಂದಿರುವ ಪಿಡಿಪಿಯನ್ನು ಒಡೆಯಲು ಸಂಚು ರೂಪಿಸುತ್ತಿದೆ. ಒಟ್ಟು 87 ಸದಸ್ಯಬಲದ ವಿಧಾನಸಭೆಯಲ್ಲಿ ನ್ಯಾಶನಲ್ ಕಾನ್ಫಿರೆನ್ಸ್ 15, ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದಿವೆ. ಈ ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡರೆ ಒಟ್ಟು 55 ಸ್ಥಾನಗಳನ್ನು ಪಡೆದು, ಬಹುಮತ ತೋರಿಸಿ ಸರ್ಕಾರ ರಚಿಸಬಹುದು. ಅಕಸ್ಮಾತ್ ಪಿಡಿಪಿಯ ಕೆಲ ಶಾಸಕರು ಪಕ್ಷ ತೊರೆದರೂ, ಬಹುಮತಕ್ಕೆ ತೊಂದರೆಯಾಗುವುದಿಲ್ಲ ಎಂಬುದು ಪಿಡಿಪಿ ಯೋಚನೆ!
ಬಾಹ್ಯ ಬೆಂಬಲ ನೀಡಲು ಸಿದ್ಧ ಎಂದ ನ್ಯಾಶನಲ್ ಕಾನ್ಫಿರೆನ್ಸ್!
"ಪಿಡಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಸರ್ಕಾರ ರಚಿಸಬೇಕು. ಅದಕ್ಕೆ ತಾವು ಬಾಹ್ಯ ಬೆಂಬಲ ನೀಡಲು ಸಿದ್ಧ" ಎಂದು ನ್ಯಾಶನಲ್ ಕಾನ್ಫಿರೆನ್ಸ್ ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನಕ್ಕಾಗಿ ವಿರೋಧಿಗಳೆಲ್ಲ ಒಂದಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸರ್ಕಾರ ರಚಿಸಿದ್ದ ಬಿಜೆಪಿಗೆ ವಿರೋಧ ಪಕ್ಷಗಳ ಈ ನಡೆ ಭಾರೀ ಆಘಾತವನ್ನುಂಟು ಮಾಡಿದ್ದಂತೂ ಸತ್ಯ!