ಬಿಜೆಪಿ ಮುಖಂಡ ಹಾಗೂ ಕುಟುಂಬಸ್ಥರ ಹತ್ಯೆಗೈದ ಉಗ್ರರು
ಶ್ರೀನಗರ, ಜುಲೈ 8: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಬಿಜೆಪಿ ಮುಖಂಡ ಹಾಗೂ ಆತನ ಕುಟುಂಬಸ್ಥರನ್ನು ಉಗ್ರರು ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಬಿಜೆಪಿ ಮುಖಂಡರ ಕುಟುಂಬದ ಭದ್ರತೆಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಮುಖಂಡ, ಆತನ ತಂದೆ ಹಾಗೂ ಸೋದರನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಬಿಜೆಪಿ ಮುಖಂಡನ ಮನೆಯ ಭದ್ರತೆಗೆ 10 ಮಂದಿ ಭದ್ರತಾ ಸಿಬ್ಬಂದಿ (PSO)ಗಳನ್ನು ನಿಯೋಜಿಸಲಾಗಿತ್ತು. ಆದರೆ, ಕರ್ತವ್ಯ ಲೋಪದಿಂದಾಗಿ ಈ ಕೃತ್ಯ ನಡೆದಿದೆ ಎಂದು ಎಲ್ಲಾ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಬಿಜೆಪಿ ಮುಖಂಡನನ್ನು ಬಿಜೆಪಿ ಅಧ್ಯಕ್ಷ ವಾಸೀಂ ಎಂದು ಗುರುತಿಸಲಾಗಿದ್ದು, ಬಂಡಿಪೋರಾದ ಪೊಲೀಸ್ ಠಾಣೆಯ ಬಳಿಯ ಅಂಗಡಿ ಬಳಿ ಘಟನೆ ನಡೆದಿದೆ. ವಾಸೀಂ ಘಟನಾ ಸ್ಥಳದಲ್ಲೇ ಮೃತಪಟ್ಟರೆ, ಅವರ ಸೋದರ ಉಮರ್ ಹಾಗೂ ಬಷೀರ್ ಅಹ್ಮದ್ ತೀವ್ರವಾಗಿ ಗಾಯಗೊಂಡಿದ್ದು, ಬಂಡಿಪೋರಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Shocked and saddened by d killing of young BJP leader Wasim Bari and his brother by terrorists in Bandipora. Bari’s father who is also a senior leader was injured. This despite 8 security commandos. Condolences to d family. pic.twitter.com/hAKnOudaxj
— Ram Madhav (@rammadhavbjp) July 8, 2020
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಟ್ವೀಟ್ ಮಾಡಿದ್ದಾರೆ. ಮೃತರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ದೇವರು ನೀಡಲಿ ಎಂದಿದ್ದಾರೆ.