ಕಾಶ್ಮೀರದಲ್ಲಿ ಹಿಮಪಾತ: ಸೈನಿಕರು ಸೇರಿ 12 ಮಂದಿ ಸಾವು
ಶ್ರೀನಗರ, ಜನವರಿ 15: ಕಾಶ್ಮೀರದ ಕುಪ್ವಾರ ಮತ್ತು ಗಾಂಧರ್ಬಲ್ ಜಿಲ್ಲೆಗಳಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಕನಿಷ್ಠ ಆರು ಮಂದಿ ಸೈನಿಕರು ಮತ್ತು ಆರು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರದ ಐದು ಕಡೆ ಹಿಮಪಾತ ಸಂಭವಿಸಿರುವುದು ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕುಪ್ವಾರ ಜಿಲ್ಲೆಯ ಮಾಚಿಲ್ ಪ್ರದೇಶದ ಶಹಾಪುರದಲ್ಲಿನ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಕಳೆದ 24 ಗಂಟೆಗಳಲ್ಲಿ ಮೂರು ಪ್ರತ್ಯೇಕ ಹಿಮಪಾತದ ಅವಘಡಗಳು ಸಂಭವಿಸಿದ್ದು, ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಯ ನೆಲೆಗಳು ತೊಂದರೆ ಅನುಭವಿಸಿವೆ ಎಂದು ಸೇನಾ ವಕ್ತಾರ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.
ಸಿಯಾಚಿನ್ ಸಂಘರ್ಷ: ಹಿಮದ ಸೌಂದರ್ಯದ ಮೇಲೆ ಯುದ್ಧ ಮೂಡಿಸಿದ ನೆತ್ತರ ಕಲೆ
ಉತ್ತರ ಕಾಶ್ಮೀರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಹಿಮಪಾತದಿಂದಾಗಿ ಐವರು ಸೈನಿಕರು ಹಿಮದ ಅಡಿ ಹೂತುಹೋಗಿದ್ದರು. ಅವರಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದರೆ, ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ.
ಕಾಶ್ಮೀರದ ವಾಯವ್ಯ ಭಾಗದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಹಿಮಪಾತಗಳಲ್ಲಿ ಅರೆಸೇನಾ ಪಡೆಯ ಯೋಧರೊಬ್ಬರು ಮಂಗಳವಾರ ಸಾವಿಗೀಡಾಗಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ವ್ಯಾಪಕವಾಗಿ ಬೀಳುತ್ತಿರುವ ಹಿಮದಿಂದಾಗಿ ನಾಗರಿಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೂ ಆರು ಮಂದಿ ಜೀವಗಳೆದುಕೊಂಡಿದ್ದಾರೆ.
ಸೋಮವಾರ ಪೂರ್ವ ಕಂಗನ್ ಪ್ರದೇಶದಲ್ಲಿ ಒಂಬತ್ತು ನಾಗರಿಕರು ಹಿಮಪಾತದಲ್ಲಿ ಸಿಲುಕಿದ್ದರು. ಆ ಗುಂಪಿನಿಂದ ನಾಲ್ವರನ್ನು ರಕ್ಷಿಸಲಾಯಿತು. ಬಳಿಕ ಹಿಮದ ಅಡಿಯಲ್ಲಿ ಸಿಲುಕಿದ್ದ ಐವರ ಮೃತದೇಹಗಳನ್ನು ಹೊರ ತೆಗೆಯಲಾಯಿತು ಎಂದು ಸ್ಥಳೀಯ ಅಧಿಕಾರಿ ಬಸೀರ್ ಖಾನ್ ತಿಳಿಸಿದ್ದಾರೆ.
ಸಿಯಾಚಿನ್ ಮೃತ್ಯುಕೂಪದ ಬದಲು ಮಿಲಿಟರಿ ಮುಕ್ತ ತಾಣವಾಗಲಿ
ಬಂಡಿಪೊರಾ ಪ್ರದೇಶದಲ್ಲಿ ಮಂಗಳವಾರ ಮತ್ತೊಬ್ಬ ನಾಗರಿಕ ಇದೇ ರೀತಿಯ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ಹಿಮಾಲಯ ಪ್ರದೇಶಗಳಲ್ಲಿ ವಿಪರೀತ ಹಿಮಪಾತವಾಗುತ್ತಿದೆ. ಹಿಮಪಾತ ಮತ್ತು ಭೂಕುಸಿತಗಳಿಂದ ಭಾರಿ ಹಾನಿಯಾಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ರಸ್ತೆಗಳು ಹಿಮದ ರಾಶಿಯ ಅಡಿಯಲ್ಲಿ ಮುಚ್ಚಿಹೋಗುತ್ತಿವೆ. ಇದರಿಂದ ಜನಜೀವನಕ್ಕೆ ತೀವ್ರ ಸಂಕಷ್ಟ ಉಂಟಾಗಿದೆ.
ಹಿಮಪಾತದಲ್ಲಿ ಬಲಿಯಾದ ಚಾರಣಿಗರ ಕೊನೆಯ ವಿಡಿಯೋ ಬಹಿರಂಗ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಹಿಮಪಾತಕ್ಕೆ 57 ಮಂದಿ ಬಲಿಯಾಗಿದ್ದಾರೆ.
2017ರಲ್ಲಿ ಕನಿಷ್ಠ 20 ಸೈನಿಕರು ಮೂರು ಹಿಮಪಾತದ ಪ್ರಕರಣಗಳಲ್ಲಿ ಬಲಿಯಾಗಿದ್ದರು. 2012ರಲ್ಲಿ ಪಾಕಿಸ್ತಾನದ 129 ಸೈನಿಕರು ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರಲ್ಲಿ 140 ಮಂದಿ ಮೃತಪಟ್ಟಿದ್ದರು.