ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಕೇಜ್ರಿವಾಲ್ ಮಹತ್ವದ ಹೇಳಿಕೆ
ಹೊಸದಿಲ್ಲಿ ಜೂನ್ 01: ಕಾಶ್ಮೀರ ಕಣಿವೆಯಲ್ಲಿನ ಭಯೋತ್ಪಾದಕ ಸಂಘಟನೆಗಳು ಇದೀಗ ಭಾರತೀಯ ಸೇನೆಯ ಕದನದಲ್ಲಿ ಸೋಲನುಭವಿಸಿದ್ದು, ಈ ಕಾರಣದಿಂದಾಗಿ ಅವರು ಸ್ಥಳೀಯ ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಮಂಗಳವಾರ (ಮೇ 31) ಬೆಳಗ್ಗೆ ಕುಲ್ಗಾಮ್ನ ಗೋಪಾಲ್ಪೋರಾ ಪ್ರದೇಶದಲ್ಲಿ ಪ್ರೌಢಶಾಲಾ ಶಿಕ್ಷಕಿ ರಜನಿ ಬಾಲಾ ಅವರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಅಂದಿನಿಂದ ಕಣಿವೆಯಲ್ಲಿ ಸೇನೆಯ ಕಣ್ಗಾವಲು ಹೆಚ್ಚಿಸಲಾಗಿದೆ. ಕಾಶ್ಮೀರಿ ಪಂಡಿತರ ಮೇಲಿನ ಹತ್ಯೆ ರಾಜಕೀಯ ವಾಗ್ದಾಳಿಗೆ ಕಾರಣವಾಗಿದೆ. ಇದೀಗ ಈ ವಿಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ಹೊರಬಿದ್ದಿದೆ.
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರಿಗೆ ಏನಾಗಿದೆಯೋ ಅದೇ ಈಗ ಕಣಿವೆಯಲ್ಲಿರುವ ಕಾಶ್ಮೀರಿ ಪಂಡಿತರಿಗೆ ಆಗುತ್ತಿದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಅವರ ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಬೀದಿಗಳಲ್ಲಿ ಅವರನ್ನು ಗುರಿಯಾಗಿಸಿ ಕೊಲ್ಲಲಾಗುತ್ತಿದೆ. ಇದು ಮಾನವೀಯತೆ ಮತ್ತು ದೇಶಕ್ಕೆ ವಿರುದ್ಧವಾಗಿದೆ. ಅದನ್ನು ತಡೆಯಲು ಯಾರೂ ಏನೂ ಮಾಡುತ್ತಿಲ್ಲ. ಕಾಶ್ಮೀರಿ ಪಂಡಿತರು ಅದರ ವಿರುದ್ಧ ಧ್ವನಿ ಎತ್ತಲು ಪ್ರಯತ್ನಿಸಿದಾಗ ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ದೆಹಲಿ ಸಿಎಂ ಹೇಳಿದರು.
ಈ ವರ್ಷ 16 ಕಾಶ್ಮೀರಿ ಪಂಡಿತರು ಹತ್ಯೆಯಾಗಿದ್ದಾರೆ. ಹೀಗಾಗಿ ಅವರಿಗೆ ಉನ್ನತ ಮಟ್ಟದ ಭದ್ರತೆ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ಕಾಶ್ಮೀರದಲ್ಲಿ ಅವರ ಸ್ಥಾನ ಭದ್ರಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಕೇಜ್ರಿವಾಲ್ ಪ್ರಕಾರ, ಕಾಶ್ಮೀರದ ಜನರು ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬದುಕಬೇಕೆಂದು ಬಯಸುತ್ತಾರೆ ಆದರೆ ಭಯೋತ್ಪಾದಕರು ಅದನ್ನು ಇಷ್ಟಪಡುತ್ತಿಲ್ಲ. ಇವೆರಡರ ಏಕತೆ ಅವರಿಗೆ ಅತ್ಯಂತ ಅಪಾಯಕಾರಿ ಎಂದು ಅವರಿಗೆ ತಿಳಿದಿದೆ. ಪ್ರಸ್ತುತ, ಪಂಡಿತರು ಕಾಶ್ಮೀರಕ್ಕೆ ಹೋಗಲು ಬಯಸುತ್ತಾರೆ, ಆದರೆ ಭಯೋತ್ಪಾದಕರು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ. ಹೀಗಾದರೆ ಅವರು ಎಲ್ಲಿಗೆ ಹೋಗಬೇಕು? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಮಂಗಳವಾರ (ಮೇ 31) ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಶಿಕ್ಷಕಿಯನ್ನು ಕೆಲವು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಆಕೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಶಿಕ್ಷಕಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ದಾಳಿಯ ನಂತರ, ದಾಳಿಕೋರರನ್ನು ಹಿಡಿಯಲು ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಆದರೆ ಭಯೋತ್ಪಾದಕರು ಇನ್ನೂ ಗುರುತಿಸಲ್ಪಟ್ಟಿಲ್ಲ. ಆದರೆ ಅವರು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪುರ ಪ್ರದೇಶಕ್ಕೆ ಸೇರಿದವರು ಎಂದು ಹೇಳಲಾಗುತ್ತಿದೆ.
ರಜನಿ ಅವರ ಕುಟುಂಬ 1990 ರಲ್ಲಿ ವಲಸೆ ಹೋಗಿತ್ತು. ಆಗ ಅವರಿಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕೆಲಸ ನೀಡಿತ್ತು. ಇದರಿಂದಾಗಿ ಅವರು 27 ವರ್ಷಗಳ ನಂತರ ಕಣಿವೆಗೆ ಮರಳಿದರು.