ನೀಟ್ ಬರೆಯಲು ಅನುಮತಿ ಕೇಳಿದ ಪುಲ್ವಾಮಾ ಉಗ್ರರ ದಾಳಿಯ ಆರೋಪಿ
ಶ್ರೀನಗರ, ಸೆಪ್ಟೆಂಬರ್ 2: ಪುಲ್ವಾಮಾ ಉಗ್ರರ ದಾಳಿಯಲ್ಲಿ ಭಯೋತ್ಪಾದಕರಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಕಾಶ್ಮೀರದ ಯುವಕನೊಬ್ಬ ಸೆ. 13ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಬರೆಯಲು ಅನುಮತಿ ನೀಡುವಂತೆ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾನೆ.
40 ಸಿಆರ್ಪಿಎಫ್ ಯೋಧರ ಜೀವ ಬಲಿ ತೆಗೆದುಕೊಂಡ ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದಂತೆ 19 ಹೆಸರುಗಳನ್ನು ಒಳಗೊಂಡ ಆರೋಪಪಟ್ಟಿಯನ್ನು ಎನ್ಐಎ ಒಂದು ವಾರದ ಹಿಂದೆ ಸಲ್ಲಿಕೆ ಮಾಡಿತ್ತು. ಅದರಲ್ಲಿ 20 ವರ್ಷದ ವಾಯಿಜ್ ಉಲ್ ಇಸ್ಲಾಂ ಹೆಸರೂ ಇದೆ. ತನ್ನ ಮನವಿ ಸಲ್ಲಿಸಲು ವಾಯಿಜ್ ವಿಡಿಯೋ ಕಾನ್ಫರೆನ್ಸ್ ಮೂಲಕ ಜಮ್ಮುವಿನಲ್ಲಿನ ಕೋರ್ಟ್ಗೆ ಹಾಜರಾಗಿದ್ದಾನೆ.
ಪುಲ್ವಾಮಾ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
ಜೈಶ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ವಾಯಿಜ್, ಇ-ಕಾಮರ್ಸ್ ತಾಣಗಳಿಂದ ಸ್ಫೋಟಕಗಳನ್ನು ತರಿಸಿ ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹೀಗಾಗಿ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು ಎಂದು ಆತನ ಅರ್ಜಿಗೆ ವಿರೋಧ ವ್ಯಕ್ತಪಡಿಸಲು ಎನ್ಐಎ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವಾಯಿಜ್ ಅರ್ಜಿ ಸೆ. 3ರಂದು ವಿಚಾರಣೆಗೆ ಬರಲಿದೆ.
ಶ್ರೀನಗರವನ್ನು ಆತ ಪರೀಕ್ಷಾ ಕೇಂದ್ರವನ್ನಾಗಿ ತೆಗೆದುಕೊಂಡಿದ್ದಾನೆ. ಇಲ್ಲಿ ಬೇರೆ ಬೇರೆ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲು ಬರುತ್ತಾರೆ. ಇದರಿಂದಾಗಿ ಈ ಕೇಂದ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ತೊಡಕು ಉಂಟಾಗಬಹುದು. ಅಲ್ಲದೆ ಆತ ತಪ್ಪಿಸಿಕೊಳ್ಳಲು ಸಹ ಪ್ರಯತ್ನಿಸಬಹುದು. ಇಂತಹ ಸಮಯದಲ್ಲಿ ಅದಕ್ಕೆ ಆಸ್ಪದ ನೀಡಬಾರದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಲ್ವಾಮಾ ದಾಳಿಕೋರನಿಗೆ ರೊಟ್ಟಿ ತಟ್ಟಿ ಕೊಟ್ಟಿದ್ದಾಕೆ ಇವಳು!
ಬಾಘ್-ಎ-ಮೆಹ್ತಾಬ್ ನಿವಾಸಿಯಾದ ವಾಯಿಜ್, ಓದಿನಲ್ಲಿ ಚುರುಕಾಗಿದ್ದಾನೆ. ಆತನನ್ನು ಜೈಶ್ ಎ ಮೊಹಮ್ಮದ್ ಸಂಘಟನೆ ಬ್ರೈನ್ ವಾಶ್ ಮಾಡಿ ತನ್ನ ಕೆಲಸಕ್ಕೆ ಬಳಸಿಕೊಂಡಿದೆ ಎನ್ನಲಾಗಿದೆ. ಆತನನ್ನು ಮಾರ್ಚ್ ತಿಂಗಳಲ್ಲಿ ಎನ್ಐಎ ಬಂಧಿಸಿತ್ತು. ಆತನ ತಂದೆ ಸರ್ಕಾರಿ ನೌಕರ. ಈ ಘಟನೆಗೂ ಮುನ್ನ ಆತನಿಗೆ ಉಗ್ರರ ಸಂಪರ್ಕ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಆತ ನೀಡಿರುವ ಸಹಾಯದ ಬಗ್ಗೆ ಪ್ರಬಲ ಪುರಾವೆಗಳು ಸಿಕ್ಕಿವೆ.