ಜಮ್ಮು ಕಾಶ್ಮೀರ ಪ್ರವಾಸದಲ್ಲಿ ಅಮಿತ್ ಶಾ: ಹುತಾತ್ಮ ಪೊಲೀಸ್ ಪತ್ನಿಗೆ ಸರ್ಕಾರಿ ಉದ್ಯೋಗ
ಶ್ರೀನಗರ, ಅಕ್ಟೋಬರ್ 23: ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲಿನ ಸರಣಿ ದಾಳಿ ಹಾಗೂ ಪೂಂಚ್ ಜಿಲ್ಲೆಯ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಕಣಿವೆ ರಾಜ್ಯ ಪ್ರವಾಸದಲ್ಲಿದ್ದಾರೆ. ಕಳೆದ 2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ 370ರಡಿ ನೀಡಲಾದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರದಲ್ಲಿ ಅಮಿತ್ ಶಾ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.
ಶನಿವಾರ ಮೊದಲ ದಿನ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಅಮಿತ್ ಶಾ, ಅಕ್ಟೋಬರ್ ತಿಂಗಳ ಆರಂಭದಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ ಇನ್ಸ್ಪೆಕ್ಟರ್ ಪರ್ವೇಜ್ ಅಹ್ಮದ್ ಅವರ ಕುಟುಂಬವನ್ನು ಭೇಟಿ ಮಾಡಿದರು. ಇದೇ ವೇಳೆ ಮೃತ ಪೊಲೀಸ್ ಅಧಿಕಾರಿ ಅಹ್ಮದ್ ಅವರ ಪತ್ನಿ ಫಾತಿಮಾ ಅಖ್ತರ್ ಅವರಿಗೆ ಸರ್ಕಾರಿ ಕೆಲಸದ ನೇಮಕಾತಿ ಪತ್ರವನ್ನು ನೀಡಿದರು.
ಅಮಿತ್ ಶಾ ಭೇಟಿಗೂ ಒಂದು ದಿನ ಮುನ್ನವೇ ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ
"ಹುತಾತ್ಮ ಯೋಧ ಪರ್ವೇಜ್ ಅಹ್ಮದ್ ದಾರ್ ಅವರ ಮನೆಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದೆ. ಆತನ ಶೌರ್ಯದ ಬಗ್ಗೆ ನನಗೆ ಮತ್ತು ಇಡೀ ದೇಶಕ್ಕೆ ಹೆಮ್ಮೆ ಇದೆ. ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರ ಪತ್ನಿಗೆ ಸರ್ಕಾರಿ ಕೆಲಸ ನೀಡಿಲಾಗಿದೆ," ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಶಾ ಜೊತೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಉಪಸ್ಥಿತರಿದ್ದರು.
ಕಣಿವೆ ರಾಜ್ಯದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ
ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ನಾಗರಿಕರ ಮೇಲಿನ ಹತ್ಯೆ ಪ್ರಕರಣಗಳು ಹೆಚ್ಚಾಗಿರುವುದರ ನಡುವೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ ಕಣಿವೆ ರಾಜ್ಯದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಶ್ರೀನಗರದಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಕೆಲವು ನಿಗದಿತ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರತಿಯೊಂದು ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.
ಕಣಿವೆ ರಾಜ್ಯದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ
ಕೇಂದ್ರ ಸಚಿವ ಅಮಿತ್ ಶಾ ಪ್ರವಾಸ ಕೈಗೊಂಡಿರುವುದರ ಹಿನ್ನೆಲೆ ಜಮ್ಮು ಕಾಶ್ಮೀರದದಾದ್ಯಂತ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಶ್ರೀನಗರ್ ದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಕಣಿವೆ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ತುಕಡಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಅಮಿತ್ ಶಾ ಭೇಟಿ ನೀಡುವ ಸಾಧ್ಯತೆಯಿರುವ ಜವಾಹರ್ ನಗರದಲ್ಲಿರುವ ಬಿಜೆಪಿ ಕಚೇರಿ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಶೆರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ (SKICC) ಗೆ ಹೋಗುವ ರಸ್ತೆಗಳನ್ನು ಶನಿವಾರದಿಂದ ಮೂರು ದಿನಗಳವರೆಗೆ ನಿರ್ಬಂಧಿಸಲಾಗಿದೆ, ಏಕೆಂದರೆ ಕೇಂದ್ರ ಗೃಹ ಸಚಿವರು ಅಲ್ಲಿಯೂ ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆಯಿದೆ. ಅದೇ ರೀತಿ ನಗರದ ಹಲವಾರು ಪ್ರದೇಶಗಳಲ್ಲಿ ಮತ್ತು ಇತರ ಭಾಗಗಳಲ್ಲಿ ಅರೆಸೇನಾಪಡೆಯ ಸಿಆರ್ಪಿಎಫ್ನಿಂದ ಬಂಕರ್ಗಳನ್ನು ನಿಯೋಜಿಸಲಾಗಿದೆ.
ಭದ್ರತಾ ದೃಷ್ಟಿಯಿಂದ ಇಂಟರ್ ನೆಟ್ ಸೇವೆ ಸ್ಥಗಿತ
ಜಮ್ಮು ಕಾಶ್ಮೀರದ 12ಕ್ಕೂ ಹೆಚ್ಚು ಟವರ್ಗಳ ಮೇಲಿನ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯವಾಗಿ ಕಳೆದ ವಾರ ನಾಗರಿಕರ ಮೇಲೆ ದಾಳಿ ನಡೆದ ಪ್ರದೇಶಗಳಲ್ಲಿ ಭದ್ರತಾ ದೃಷ್ಟಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ದ್ವಿಚಕ್ರ ವಾಹನ ಸವಾರರ ದಾಖಲೆಗಳನ್ನೂ ಸಹ ಪರಿಶೀಲಿಸಲಾಗುತ್ತಿದ್ದು, ಈಗಾಗಲೇ ಹಲವು ಬೈಕ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕ್ರಮಗಳು ಸಂಪೂರ್ಣವಾಗಿ ಭಯೋತ್ಪಾದಕ ಹಿಂಸಾಚಾರಕ್ಕೆ ಸಂಬಂಧಿಸಿವೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. "ಕೆಲವು ಬೈಕ್ಗಳನ್ನು ವಶಪಡಿಸಿಕೊಳ್ಳುವುದು ಮತ್ತು ಕೆಲವು ಟವರ್ಗಳ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವುದು ಸಂಪೂರ್ಣವಾಗಿ ಭಯಾನಕ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದ ಕ್ರಮವಾಗಿದೆ. ಈ ಕ್ರಮಗಳಿಗೂ ಕೇಂದ್ರ ಗೃಹ ಸಚಿವರ ಭೇಟಿಗೂ ಯಾವುದೇ ಸಂಬಂಧವಿಲ್ಲ," ಎಂದು ಹೇಳಿದ್ದಾರೆ.
ಸಚಿವ ಅಮಿತ್ ಶಾ ಮೂರು ದಿನಗಳ ಜಮ್ಮು ಕಾಶ್ಮೀರ ಪ್ರವಾಸ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಜಮ್ಮು ಕಾಶ್ಮೀರ ಪ್ರವಾಸದಲ್ಲಿ ಹಲವು ಕಾರ್ಯಕ್ರಮ ಮತ್ತು ಕ್ರಿಯಾ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈ ಮೂರು ದಿನಗಳ ಭೇಟಿಯಲ್ಲಿ ಅವರ ಕಾರ್ಯಕ್ರಮ ಹೇಗಿರಲಿದೆ ಎಂಬುದರ ಕಿರು ಪರಿಚಯ ಇಲ್ಲಿದೆ ಓದಿ.
* ಮೊದಲ ದಿನವಾದ ಶನಿವಾರ ಕೇಂದ್ರ ಸಚಿವ ಅಮಿತ್ ಶಾ ಅವರು, ಶ್ರೀನಗರ ಮತ್ತು ಶಾರ್ಜಾ ನಡುವಿನ ನೇರ ವಿಮಾನ ಉದ್ಘಾಟಿಸಲಿದ್ದಾರೆ.
* ಕಣಿವೆಯಲ್ಲಿ ಇತ್ತೀಚೆಗೆ ನಡೆದ ನಾಗರಿಕ ಹತ್ಯೆಗಳಲ್ಲಿ ಸಾವನ್ನಪ್ಪಿದವರ ಕುಟುಂಬಗಳನ್ನೂ ಅವರು ಭೇಟಿ ಮಾಡಲಿದ್ದಾರೆ.
* ಎರಡನೇ ದಿನ ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಪರಿಶೀಲನೆಗೆ ಏಕೀಕೃತ ಕಮಾಂಡ್ನ ಸಭೆಯನ್ನು ಕರೆಯಲು ನಿರ್ಧರಿಸಿದ್ದಾರೆ.
* ಅಕ್ಟೋಬರ್ 24ರ ಭಾನುವಾರ ಅಮಿತ್ ಶಾ ಜಮ್ಮುವಿಗೆ ಭೇಟಿ ನೀಡಲಿದ್ದು, ಅಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
* ಮೂರನೇ ದಿನ ಸರಪಂಚರನ್ನು (ಗ್ರಾಮ ಮುಖ್ಯಸ್ಥರು) ಕರೆದು ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ.