ಅಮರನಾಥ ಯಾತ್ರೆ: ಉಗ್ರರಿಂದ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಿಸುವ ಬೆದರಿಕೆ
ಶ್ರೀನಗರ ಜೂನ್ 8: ಈ ವರ್ಷದ ಪವಿತ್ರ ಅಮರನಾಥ್ ಯಾತ್ರೆಯು ಇದೇ ಜೂನ್ 30 ರಿಂದ ಆರಂಭವಾಗಲಿದೆ. ಆದರೆ, ಅಮರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ವಾಹನಗಳ ಮೇಲೆ ಉಗ್ರರು ಮ್ಯಾಗ್ನೆಟಿಕ್ ಬಾಂಬ್ ದಾಳಿ ಮಾಡಬಹುದು ಎಂದು ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ. ಇದು ಯಾತ್ರಾರ್ಥಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ.
ಈ ವರ್ಷ ಮೂರು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪವಿತ್ರ ಅಮರನಾಥನ ದರ್ಶನ ಮಾಡುವ ಅಂದಾಜಿದೆ. ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಭದ್ರತಾ ಪಡೆಗಳು ಹೊಡೆದುರುಳಿತು. ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದೊಡ್ಡ ಉಗ್ರ ದಾಳಿಯ ಸಂಚಿನ ಭಾಗವಾಗಿ ಮ್ಯಾಗ್ನೆಟಿಕ್ ಬಾಂಬ್ ಗಳನ್ನು ಈ ಡ್ರೋನ್ ಮೂಲಕ ಸಾಗಿಸಲಾಗುತ್ತಿತ್ತು.
ಉದ್ದೇಶಿತ ಹತ್ಯೆ ವಿರೋಧಿಸಿ ಖೀರ್ ಭವಾನಿ ಉತ್ಸವ ಬಹಿಷ್ಕರಿಸಿದ ಕಾಶ್ಮೀರಿ ಪಂಡಿತರು
ಇನ್ನೊಂದೆಡೆ ಚಾರ್ ಧಾಮ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳ ಬಸ್ ಮೇಲೆ ದಾಳಿ ಮಾಡಲು ಉಗ್ರರು ಮ್ಯಾಗ್ನೆಟಿಕ್ ಬಾಂಬ್ ಗಳನ್ನು ಬಳಸಬಹುದು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಮ್ಯಾಗ್ನೆಟಿಕ್ ಬಾಂಬ್ ಬಳಸಿ ದಾಳಿ
ಮೇ ತಿಂಗಳಲ್ಲಿ ನಡೆದ ಕಟ್ರಾ ಬಸ್ ಮೇಲಿನ ದಾಳಿಯಲ್ಲಿ ಇದೇ ರೀತಿಯ ಮ್ಯಾಗ್ನೆಟಿಕ್ ಬಾಂಬ್ ಅನ್ನು ಬಳಸಲಾಗಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟು, 22 ಮಂದಿ ಗಾಯಗೊಂಡಿದ್ದರು. ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ನಡೆಸಿತ್ತು. ಈ ಘಟನೆಗಳನ್ನು ಗಮನಿಸಿ ಭದ್ರತಾ ಪಡೆಗಳು, ಅಮರನಾಥ ಯಾತ್ರಿಕರ ವಾಹನ ಸಂಚಾರದ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿವೆ. ಉಗ್ರರು ಮ್ಯಾಗ್ನೆಟಿಕ್ ಬಾಂಬ್ ಗಳನ್ನು ಹೊಂದಿದ್ದಾರೆ ಎಂಬ ವರದಿಗಳ ನಂತರ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಕುಪ್ವಾರದಲ್ಲಿ ಎನ್ಕೌಂಟರ್, ಇಬ್ಬರು ಉಗ್ರರ ಹತ್ಯೆ
ಮ್ಯಾಗ್ನೆಟಿಕ್ ಬಾಂಬ್ ಎಂದರೇನು?
ಮ್ಯಾಗ್ನೆಟಿಕ್ ಬಾಂಬ್ ಅನ್ನು ಸ್ಟಿಕಿ ಬಾಂಬ್ ಎಂದು ಸಹ ಕರೆಯಲಾಗುತ್ತದೆ. ಮ್ಯಾಗ್ನೆಟಿಕ್ ಬಾಂಬ್ ಗಳು ಒಂದು ರೀತಿಯ ಸ್ಫೋಟಕಗಳಾಗಿದ್ದು, ಅವು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ದೂರದಿಂದ ಅದನ್ನು ಸ್ಫೋಟಿಸಲು ವಾಹನ ಅಥವಾ ವಸ್ತುಗಳಿಗೆ ಅವುಗಳನ್ನು ಅಂಟಿಸಬಹುದು. ಎರಡನೇ ಮಹಾ ಯುದ್ಧದ ನಂತರ ಮ್ಯಾಗ್ನೆಟಿಕ್ ಬಾಂಬ್ ಗಳು ಬಳಕೆಯಲ್ಲಿವೆ. ಇತ್ತೀಚಿಗೆ ಅವುಗಳನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ನ್ಯಾಟೋ ಪಡೆಗಳ ವಿರುದ್ಧ ಬಳಸಿದ್ದರು.
ಈ ರೀತಿಯ ಬಾಂಬ್ ಗಳನ್ನು ದೂರದಿಂದಲೇ ಸ್ಫೋಟಿಸಬಹುದು. ಹಾಗೂ ಅವುಗಳಿಗೆ ಟೈಮರ್ ಗಳನ್ನು ಅಳವಡಿಸಬಹುದು. ಇದು ಸಣ್ಣ ಕಂಟೇರ್ನ ಕೆಳಭಾಗದಲ್ಲಿರುವ ನಾಣ್ಯದ ಆಕಾರದ ಮ್ಯಾಗ್ನೆಟ್ ಆಗಿದೆ. ಇವುಗಳನ್ನು ಲೋಹದ ಮೇಲ್ಮೈಗೆ ಅಥವಾ ಸಾಮಾನ್ಯವಾಗಿ ವಾಹನಕ್ಕೆ ಅಂಟಿಸಬಹುದು.
ಎರಡನೇ ಮಹಾ ಯುದ್ಧದಲ್ಲಿ ಬಳಕೆ
ಈ ಬಾಂಬ್ ಗಳು ಸುಮಾರು 5-10 ನಿಮಿಷಗಳ ಟೈಮರ್ ಹೊಂದಿರುತ್ತದೆ. ಹೀಗಾಗಿ ದಾಳಿಕೋರನಿಗೆ ಪರಾರಿಯಾಗಲು ಸಾಕಷ್ಟು ಸಮಯ ಸಿಗುತ್ತದೆ. ಎರಡನೇ ಮಹಾ ಯುದ್ಧದ ಸಮಯದಲ್ಲಿ ಬ್ರಿಟಿಶ್ ಪಡೆಗಳು ಮ್ಯಾಗ್ನೆಟಿಕ್ ಬಾಂಬ್ ಗಳನ್ನು ಬಳಸುತ್ತಿದ್ದರು. ಇದನ್ನು ಯಾವುದೇ ವಾಹನದ ಮೇಲೆ ಹಾಕಬಹುದು ಮತ್ತು ರಿಮೋಟ್ ಕಂಟ್ರೋಲ್ ಅಥವಾ ಇನ್ ಬಿಲ್ಟ್ ಟೈಮರ್ ಮೂಲಕ ಇದನ್ನು ಸ್ಫೋಟಿಸಬಹುದು.
ವಾಹನಗಳ ಸಂಪೂರ್ಣ ಪರಿಶೀಲನೆ
ಅಮರನಾಥ ಯಾತ್ರೆಯ ಭದ್ರತಾ ಕಾರ್ಯತಂತ್ರದ ಕುರಿತು ಭದ್ರತಾ ಪಡೆಗಳು ಹೊಸದಾಗಿ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿವೆ. ಸುರಕ್ಷತಾ ದೃಷ್ಟಿಯಿಂದ ಅಮರನಾಥ ಯಾತ್ರಿಕರ ವಾಹನದ ಸಂಚಾರದ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ. ಅಮರನಾಥ ಯಾತ್ರಿಕರ ವಾಹನಗಳು ಮತ್ತು ಭದ್ರತಾ ಪಡೆಗಳ ವಾಹನಗಳನ್ನು ಕಟ್ಟುನಿಟ್ಟಾಗಿ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ವಾಹನದಲ್ಲಿ ಯಾರು ಇಲ್ಲದೇ ಖಾಲಿ ಬಿಡದಿರುವಂತೆ ಭದ್ರತಾ ಪಡೆಗಳು ಮತ್ತು ಯಾತ್ರೆ ನಿರ್ವಹಿಸುವ ಏಜೆಂಟರಿಗೆ ಸೂಚಿಸಲಾಗಿದೆ ಎಂದು ಸಿಆರ್ ಪಿಎಫ್ ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮೀರದ ಎತ್ತರದ ಪ್ರದೇಶದಲ್ಲಿರುವ ಅಮರನಾಥ ಗುಹಾಂತರ ದೇಗುಲಕ್ಕೆ ಈ ವರ್ಷ ಸುಮಾರು ಮೂರು ಲಕ್ಷ ಯಾತ್ರಿಕರು ಭೇಟಿ ನೀಡುವ ಅಂದಾಜಿದೆ. ಆಗಸ್ಟ್ 11 ರಂದು ಅಮರನಾಥ ಯಾತ್ರೆ ಕೊನೆಗೊಳ್ಳಲಿದೆ.
(ಒನ್ಇಂಡಿಯಾ ಸುದ್ದಿ)