ಗಡಿ ಉದ್ವಿಗ್ನ: ಅಮರನಾಥ ಯಾತ್ರಿಗಳ ಏರ್ಲಿಫ್ಟ್
ಶ್ರೀನಗರ, ಆಗಸ್ಟ್ 03: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಕಾರಣ, ಅಮರನಾಥ ಯಾತ್ರಿಕರು ಕೂಡಲೇ ಹಿಂತಿರುಗುವಂತೆ ಸೇನೆಯು ಎಚ್ಚರಿಕೆ ನೀಡಿದೆ. ಅಲ್ಲದೆ, ಈಗಾಗಲೇ ಯಾತ್ರೆಯಲ್ಲಿರುವವರನ್ನು ಸೇನಾ ವಿಮಾನದ ಮೂಲಕ ವಾಪಸ್ ಕರೆತರಲಾಗುತ್ತಿದೆ.
ಅಮರನಾಥ ಯಾತ್ರಿಕರನ್ನು ಏರ್ಲಿಫ್ಟ್ ಮಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈಗಾಗಲೇ ಸೇನೆಯನ್ನು ಮನವಿ ಮಾಡಿದ್ದು, ಸೇನೆಯ ಸಿ-17 ವಿಮಾನ ಬಳಸಿ ಯಾತ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಚಿಂತನೆ ನಡೆದಿದೆ.
ಅಮರನಾಥ ಯಾತ್ರಿಕರನ್ನು ಪಠಾಣ್ ಕೋಟ್ ಅಥವಾ ದೆಹಲಿಗೆ ಏರ್ಲಿಫ್ಟ್ ಮಾಡುವಂತೆ ಜಮ್ಮು ಕಾಶ್ಮೀರ ಸರ್ಕಾರವು ಭಾರತೀಯ ವಾಯುಪಡೆಯನ್ನು ಕೇಳಿದೆ.
ಬೋಯಿಂಗ್ ನಿರ್ಮಿಸಿರುವ ಸಿ-17 ವಿಮಾನವು ಒಮ್ಮೆಲೆ 230 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊತ್ತೊಯ್ಯಬಲ್ಲದಾಗಿದೆ, ಅಷ್ಟೆ ಅಲ್ಲದೆ ಅತ್ಯಂತ ಕಡಿಮೆ ಸಮಯದಲ್ಲಿ, ಪ್ರತಿಕೂಲ ಹವಾಮಾನದಲ್ಲಿಯೂ ಈ ವಿಮಾನ ಕಾರ್ಯ ಮಾಡುತ್ತದೆ.
ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ಆಗುವ ಸಂಭವ ಇರುವ ಕಾರಣ ಆದಷ್ಟು ಬೇಗ ಯಾತ್ರಿಕರು ಜಮ್ಮು ಕಾಶ್ಮೀರವನ್ನು ತೊರೆಯುವಂತೆ ನಿನ್ನೆಯೇ ಸರ್ಕಾರವು ಸೂಚಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಉದ್ವಿಗ್ನಿ ಸ್ಥಿತಿ ನಿರ್ಮಾಣವಾಗಿದ್ದು, ಭಾರತೀಯ ಸೇನೆಯು ಹಲವು ತುಕಡಿಗಳನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಿದೆ. ಅಷ್ಟೆ ಅಲ್ಲದೆ, ಇಂದು ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಬಾಂಬ್ ದಾಳಿ ನಡೆಸಿದ್ದು, ಯುದ್ಧದ ಮುನ್ಸೂಚನೆ ಎಂದು ಅಂದಾಜಿಸಲಾಗುತ್ತಿದೆ.