ಅಫ್ಘಾನ್ ತಾಲಿಬಾನ್ ವಶವಾಗುತ್ತಿದ್ದಂತೆ ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರು
ಶ್ರೀನಗರ, ಅಕ್ಟೋಬರ್ 02:ಅಫ್ಘಾನಿಸ್ತಾನವು ತಾಲಿಬಾನ್ ವಶವಾಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಳವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಭಾರತದ ಮೇಲೆ ದಾಳಿ ನಡೆಸಲು ಜೈಶ್ ಉಗ್ರರ ಸಂಚು: ವರದಿ
ಜುಲೈನಿಂದ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಅಫ್ಘಾನಿಸ್ತಾನದ ಗಡಿಯ ಬುಡಕಟ್ಟು ಪ್ರದೇಶಗಳಿಂದ ಸುಮಾರು 50 ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದಾರೆ ಮತ್ತು ಸಕ್ರಿಯರಾಗಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದಾಗ ಬಿಗಿಯಾದ ಕ್ರಮಗಳಿಂದಾಗಿ ಭಯೋತ್ಪಾದಕರ ಸಂಖ್ಯೆ ಕ್ಷೀಣಿಸಿತ್ತು.
ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಭಯೋತ್ಪಾದಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರಂತೆ ದೇಶದಲ್ಲಿ ಭಯೋತ್ಪಾದಕರ ದಾಳಿ ನಡೆಯುವ ಶಂಕೆಯನ್ನು ಕೂಡಾ ತಜ್ಞರು ವ್ಯಕ್ತಪಡಿಸಿದ್ದಾರೆ.
2019ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಭಯೋತ್ಪಾಕರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಗುಂಪುಗಳ ಭಯೋತ್ಪಾದಕರು ಜಮ್ಮು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂದು ಯೂರೋಪಿಯನ್ ಯೂನಿಯನ್ ಟುಡೇ ಸಂಸ್ಥೆಯು ನಿಕ್ಕಿ ಏಷ್ಯಾದ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಹೊಸ ಸರಕಾರ ರಚನೆಯಾದ ಬೆನ್ನಲ್ಲೇ, ಆ ನೆಲದಿಂದ ಭಾರತ ಮತ್ತು ರಷ್ಯಾಕ್ಕೂ ಭಯೋತ್ಪಾದನೆಯ ಅಪಾಯ ಹರಡುವ ಆತಂಕ ಇದೆ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೋಲೆ ಕುದಶೇವ್ ಆತಂಕ ವ್ಯಕ್ತಪಡಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ರಾಯಭಾರಿ ನಿಕೋಲೆ 'ಅಫ್ಘಾನಿಸ್ತಾನದಲ್ಲಿನ ಒಟ್ಟಾರೆ ಬೆಳವಣಿಗೆಗಳ ಕುರಿತು ಭಾರತ ಮತ್ತು ರಷ್ಯಾದ ನಿಲುವು ಒಂದೇ ಆಗಿದೆ. ತಾಲಿಬಾನಿ ಸರ್ಕಾರಕ್ಕೆ ಮಾನ್ಯತೆ ನೀಡುವ ರಷ್ಯಾದ ನಿರ್ಧಾರವು ಅವರ ಕಾರ್ಯಗಳನ್ನು ಅವಲಂಬಿಸಿರಲಿದೆ. ಅಷ್ಘಾನಿಸ್ತಾನಕ್ಕೆ ಭದ್ರತೆ, ಸ್ಥಿರತೆ ಮತ್ತು ನಿರೀಕ್ಷಿಸಬಹುದಾದ ಆಡಳಿತ ನೀಡುವ ಸಮಗ್ರ ಸರ್ಕಾರ ರಚನೆಯನ್ನು ನಾವು ಬಯಸುತ್ತೇವೆ' ಎಂದು ಹೇಳಿದ್ದಾರೆ.
ಇದೇ ವೇಳೆ 'ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಭಾರತ ಮತ್ತು ರಷ್ಯಾ ಎರಡೂ ಕಳವಳ ಹೊಂದಿವೆ. ಈ ವಲಯದ ಯಾವುದೇ ದೇಶಗಳಿಗೂ ಉಗ್ರವಾದ ಹಬ್ಬುವ ನೆಲವಾಗಿ ಅಫ್ಘಾನಿಸ್ತಾನ ಹೊರಹೊಮ್ಮಬಾರದು ಎಂದು ನಾವು ಬಯಸುತ್ತೇವೆ. ಆದರೂ ಅಫ್ಘಾನಿಸ್ತಾನದಲ್ಲಿ ಉದ್ಭವವಾಗುವ ಯಾವುದೇ ಆಂತರಿಕ ಸಂಘರ್ಷ ಪ್ರಾದೇಶಿಕ ಭದ್ರತೆಗೆ ಅಪಾಯಕಾರಿಯಾಗಿ ಹೊರಹೊಮ್ಮಲಿದೆ.
ಜೊತೆಗೆ ಭಯೋತ್ಪಾದನೆ ಅಪಾಯ ರಷ್ಯಾದ ಪ್ರದೇಶಗಳು ಮತ್ತು ಭಾರತದ ಕಾಶ್ಮೀರಕ್ಕೆ ಹಬ್ಬುವ ಅಪಾಯ ಇದ್ದೇ ಇದೆ. ಇದು ಎರಡೂ ದೇಶಗಳಿಗೂ ಸಮಾನ ಆತಂಕದ ವಿಷಯ' ಎಂದು ನಿಕೋಲೆ ಹೇಳಿದ್ದಾರೆ.
ಅಫ್ಘಾನಿಸ್ತಾನದ ತಾಲಿಬಾನಿಗಳು ತಮ್ಮ ಪ್ರಾಬಲ್ಯ ಸಾಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಪಾಕ್ ಪೋಷಿತ ಉಗ್ರ ಸಂಘಟನೆಗಳಾದ ಲಷ್ಕರೆ ತೊಯ್ಬಾ, ಜೈಷ್ ಮೊಹಮ್ಮದ್, ಅಲ್-ಬದ್ರ್ ಮುಖಂಡರು ಜಮ್ಮು-ಕಾಶ್ಮೀರಕ್ಕೆ ತಮ್ಮ ಉಗ್ರರನ್ನು ನುಸುಳಿಸುವಲ್ಲಿ ನಿರತರಾಗಿದ್ದರು.
ಇದರ ಫಲವಾಗಿ ಸದ್ಯ ಕಾಶ್ಮೀರ ಕಣಿವೆಯಲ್ಲಿ 200 ಪಾಕ್ ಉಗ್ರರು ಸಕ್ರಿಯವಾಗಿದ್ದಾರೆ. ಐಎಸ್ಐ ಸೂಚನೆಯಂತೆ ಶೀಘ್ರವೇ ಅವರು ದೇಶದಲ್ಲಿ ದಾಳಿ ನಡೆಸಲಿದ್ದಾರೆ ಎಂದು ಗುಪ್ತಚರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಉಗ್ರರ ಕ್ರೌರ್ಯಕ್ಕೆ ಅಸಮಾಧಾನ ಹೊರಹಾಕಿರುವ ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರು, '' ಇಸ್ಲಾಂ ಮೂಲಭೂತವಾದ ಹಾಗೂ ಅದರ ಹೆಸರಲ್ಲಿ ಬಲಪ್ರಯೋಗವು ಇಡೀ ವಿಶ್ವಕ್ಕೆ ದೊಡ್ಡ ಅಪಾಯವಾಗಿದೆ. ಧರ್ಮವನ್ನು ರಾಜಕೀಯ ಹಿತಾಸಕ್ತಿಗಳಿಗೆ ಮೂಲಭೂತವಾದಿಗಳು ಬಳಸಿಕೊಳ್ಳುತ್ತಿದ್ದಾರೆ.
ಜಗತ್ತಿನಲ್ಲಿಮೂಲಭೂತ ಇಸ್ಲಾಂ ಪ್ರಸರಿಸುವ ದೊಡ್ಡ ಅಭಿಯಾನದ ಭಾಗವೇ ಈ ತಾಲಿಬಾನ್ ಸಂಘಟನೆ. ಇಂಥವರಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಸಹಿಸಿಕೊಳ್ಳಲುವ ವಿಶಾಲ ಮನಸ್ಥಿತಿ ಇರುವುದಿಲ್ಲ,'' ಎಂದು ಆರೋಪಿಸಿದ್ದಾರೆ.