ಪುಲ್ವಾಮಾ ದಾಳಿ ಬಳಿಕ, ಸೇನಾ ವಾಹನ ಸಂಚಾರ ಬಂದ್ ಮಾಡಿದ ಸರ್ಕಾರ
ಶ್ರೀನಗರ, ಫೆಬ್ರವರಿ 21: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಆತ್ಮಾಹುಳಿ ದಾಳಿಯ ಬಳಿಕ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಗುರುವಾರದಂದು ಪ್ರಕಟಿಸಿದೆ.
ಶ್ರೀನಗರ- ಅವಂತಿಪೋರ್ ಮಾರ್ಗದ ಹೆದ್ದಾರಿಯಲ್ಲಿ ಸೇನಾ ವಾಹನ ಸಂಚಾರ ಬಂದ್ ಮಾಡುವಂತೆ ಸೂಚಿಸಲಾಗಿದೆ. ಯೋಧರನ್ನು ಇನ್ಮುಂದೆ ವಿಮಾನ, ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲು ಗೃಹ ಸಚಿವಾಲಯ ತೀರ್ಮಾನಿಸಿದೆ. ಕೇಂದ್ರ ಸಶಸ್ತ್ರ ಮೀಸಲು ಪಡೆ, ಪ್ಯಾರಾಮಿಲಿಟರಿ ದಳ ಸೇರಿದಂತೆ ಜಮ್ಮು -ಶ್ರೀನಗರ ವಲಯದ ಎಲ್ಲಾ ಮಿಲಿಟರಿ ಕ್ಯಾಂಪಿನವರಿಗೂ ಈ ಆದೇಶ ಅನ್ವಯವಾಗಲಿದೆ.
ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ
ಈ ಆದೇಶದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಸುಮಾರು 7,80,000 ಸಿಎಪಿಎಫ್ ಸೇನಾ ಸಿಬ್ಬಂದಿಗಳಿಗೆ ನೆರವಾಗಲಿದೆ. ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೇಬಲ್, ಎಎಸ್ ಐಗಳಿಗೆ ಈ ಮುಂಚೆ ಏರ್ ಲಿಫ್ಟ್ ಸೌಲಭ್ಯ ಸಿಗುತ್ತಿರಲಿಲ್ಲ. ಈಗ ಸೇವಾ ಅವಧಿ, ರಜಾ ವೇಳೆ ತೆರಳುವಾಗಲೂ ಸೇನಾ ವಿಮಾನ ಬಳಸಲು ಅನುಮತಿ ಸಿಕ್ಕಿದೆ.
ಈ ಹೊಸ ಸೌಲಭ್ಯದಿಂದ ಯೋಧರ ಪ್ರಯಾಣ ಸಮಯವೂ ಉಳಿಯುತ್ತದೆ ಹಾಗೂ ಸುರಕ್ಷಿತವಾಗಿಯೂ ಇರಬಹುದು ಎಂದು ಗೃಹ ಸಚಿವಾಲಯ ಹೇಳಿದೆ.
ಪುಲ್ವಾಮಾ ದಾಳಿಗೆ ಬಳಸಿದ್ದು ಮಾರುತಿ ಸಂಸ್ಥೆ ನಿರ್ಮಿತ ವಾಹನ!
ಜಮ್ಮು ಮತ್ತು ಕಾಶ್ಮೀರ ವಲಯದಲ್ಲಿ ಏರ್ ಕೊರಿಯರ್ ಸೇವೆ ಸಿಎಪಿಎಫ್ ಸಿಬ್ಬಂದಿಗಳಿಗೆ ಲಭ್ಯವಾಗಿದೆ. ಶ್ರೀನಗರ-ಜಮ್ಮು ಸೆಕ್ಟರ್ ಅಲ್ಲದೆ ದೆಹಲಿ -ಜಮ್ಮು, ಜಮ್ಮು-ಶ್ರೀನಗರ, ಜಮ್ಮು-ದೆಹಲಿ ಸೆಕ್ಟರ್ ಗೂ ಏರ್ ಕೊರಿಯರ್ ಸೇವೆ ಜನವರಿ 2017ರಿಂದ ಲಭ್ಯವಿದೆ.