ಪುಲ್ವಾಮಾ ದಾಳಿಯ ನಂತರ ಭಾರತೀಯ ಸೇನೆಯಿಂದ 18 ಉಗ್ರರ ಹತ್ಯೆ
ಶ್ರೀನಗರ, ಮಾರ್ಚ್ 11 : ಫೆಬ್ರವರಿ 14ರ ಪುಲ್ವಾಮಾ ದಾಳಿಯ ನಂತರ, 14 ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರರು ಸೇರಿದಂತೆ, ವಿವಿಧ ಕಡೆಗಳಲ್ಲಿ ನಡೆಸಿರುವ ಎನ್ಕೌಟರ್ ಗಳಲ್ಲಿ 18 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.
ಪುಲ್ವಾಮಾ ದಾಳಿ ನಡೆದ ನಂತರ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ನಿರ್ನಾಮ ಮಾಡುವ ಕಾರ್ಯಾಚರಣೆ ವೇಗ ಪಡೆದುಕೊಂಡಿದ್ದು, ಭಾರತದೊಳಗೆ ನುಸುಳಿ ಬಂದು ಭಯೋತ್ಪಾದಕ ಕೃತ್ಯ ನಡೆಸುತ್ತಿರುವ ಮಿಲಿಟಂಟ್ಸ್ ಗಳನ್ನು ಸದೆಬಡಿಯುತ್ತಿದ್ದಾರೆ.
ಪುಲ್ವಾಮಾ ಮಾದರಿಯಲ್ಲಿ ಕಾಶ್ಮೀರದಲ್ಲಿ ಮತ್ತೊಂದು ದಾಳಿ? ಗುಪ್ತಚರ ಇಲಾಖೆ ಎಚ್ಚರಿಕೆ
ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದಿದ್ದ ಭೀಕರ ಆತ್ಮಾಹುತಿ ದಾಳಿಯಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆಯ 40ಕ್ಕೂ ಹೆಚ್ಚು ಜವಾನರು ಹುತಾತ್ಮರಾಗಿದ್ದರು. ಜೈಷ್ ನಿಂದ ತರಬೇತಿ ಪಡೆದಿದ್ದ ಆದಿಲ್ ಅಹ್ಮದ್ ದಾರ್ ಎಂಬ ಸ್ಥಳೀಯ ಉಗ್ರ, ಜವಾನರಿದ್ದ ಬಸ್ಸಿಗೆ, ಸ್ಫೋಟಕಗಳನ್ನು ತುಂಬಿದ್ದ ತನ್ನ ಮಾರುತಿ ಇಕೋ ವಾಹನವನ್ನು ನುಗ್ಗಿಸಿ ಸ್ಫೋಟಿಸಿದ್ದ.
ತದ ನಂತರ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರದ ಪೊಲೀಸರು ಉಗ್ರರ ವಿರುದ್ಧ ಮುಗಿಬಿದ್ದಿದ್ದಾರೆ. ಕಾಶ್ಮೀರದ ತ್ರಾಲ್ ನಲ್ಲಿ ಭಾನುವಾರ ನಡೆಸಿದ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಮುದಾಸಿರ್ ಖಾನ್ ಸೇರಿದಂತೆ ಇಬ್ಬರನ್ನು ಮುಗಿಸಲಾಗಿದೆ. ಈ ಹದಿನಾಲ್ಕು ಜೈಷ್ ಉಗ್ರರಲ್ಲಿ 6 ಉಗ್ರರು ಜೈಷ್-ಎ-ಮೊಹಮ್ಮದ್ ಕಮಾಂಡರುಗಳಾಗಿದ್ದಾರೆ.
KJS Dhillon, Corps Commander of Chinar Corps, Indian Army: In last 21 days, we have eliminated 18 terrorists, out of them 14 being from JeM, 6 out of 14 were main commanders. JeM's 2nd commander Mudasir-main conspirator in national highway convoy attack-has also been eliminated. pic.twitter.com/3naaKhfOo0
— ANI (@ANI) 11 March 2019
ಪುಲ್ವಾಮಾ ಆತ್ಮಾಹುತಿ ದಾಳಿಯ ಮಾಸ್ಟರ್ ಮೈಂಡ್ ಹತ್ಯೆ
ಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ದಾಳಿಯ ಸಂಚು ಮಾಡಿದ್ದು ಇದೇ ಮುದಾಸಿರ್ ಖಾನ್ ಎಂಬಾತ ಜೈಷ್-ಎ-ಮೊಹಮ್ಮದ್ ನ ಎರಡನೇ ಕಮಾಂಡರ್ ಆಗಿದ್ದ. ಆತನ ಹತ್ಯೆಯೊಂದಿಗೆ, ಬಹುಮುಖ್ಯ ಉಗ್ರ ಮುಖಂಡನನ್ನು ನಿರ್ನಾಮ ಮಾಡಿದಂತಾಗಿದೆ ಎಂದು ಭಾರತೀಯ ಸೇನೆಯ ಚಿನಾರ್ ಕೋರ್ ನ ಕಮಾಂಡರ್ ಆಗಿರುವ ಕೆಜೆಎಸ್ ಧಿಲ್ಲನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಯಾ ಪಾಕಿಸ್ತಾನ್ ಎಂದ ಇಮ್ರಾನ್ ಖಾನ್ ಗೆ ಭಾರತದ ಸವಾಲು
ರಕ್ಷಣಾ ಸಿಬ್ಬಂದಿ ಇಲ್ಲಿಯವರೆಗೆ ಕಲೆಹಾಕಿರುವ ಸಾಕ್ಷ್ಯಗಳ ಪ್ರಕಾರ, ಕೇವಲ 23 ವರ್ಷದವನಾಗಿರುವ ಮುದಾಸಿರ್ ಖಾನ್ ಎಲೆಕ್ಟ್ರಿಷಿಯನ್ ಆಗಿದ್ದು, ಪುಲ್ವಾಮಾದ ನಿವಾಸಿಯಾಗಿದ್ದಾನೆ ಮತ್ತು ಪುಲ್ವಾಮಾದಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಗಾಗಿ ವಾಹನ ಮತ್ತು ಸ್ಫೋಟಕಗಳನ್ನು ಒದಗಿಸಿದ್ದಾನೆ. ಆತ 2017ರಲ್ಲಿಯೇ ಜೈಷ್ ಸಂಘಟನೆಯನ್ನು ಸೇರಿದ್ದ. ಆದಿಲ್ ಅಹ್ಮದ್ ದಾರ್ ಜೊತೆ ಈ ಖಾನ್ ಸತತವಾಗಿ ಸಂಪರ್ಕದಲ್ಲಿದ್ದು, ಆತ್ಮಾಹುತಿ ದಾಳಿಯ ರೂವಾರಿಯಾಗಿದ್ದ.