ಭಯೋತ್ಪಾದನೆ ದಾಳಿ ಸೂಚನೆ; ಕಣಿವೆ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಿದ ಕೇಂದ್ರ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾನುವಾರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಪ್ರಮುಖವಾದ ಭಯೋತ್ಪಾದನೆ ದಾಳಿ ಬಗ್ಗೆ ಆತಂಕ ಇರುವ ಹಿನ್ನೆಲೆಯಲ್ಲಿ ಅವರು ಈ ಚರ್ಚೆಯನ್ನು ನಡೆಸಿದ್ದಾರೆ.
ಮೂಲಗಳ ಪ್ರಕಾರ: ಪಾಕಿಸ್ತಾನ ಸೇನೆ ಬೆಂಬಲಿತ ಉಗ್ರ ಸಂಘಟನೆಗಳು ಭಾರತದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಯೋಜನೆ ಹಾಕಿಕೊಂಡಿವೆ. ಆದ್ದರಿಂದ ನೂರು ಕಂಪನಿ ಪ್ಯಾರಾ ಮಿಲಿಟರಿ ಗುಂಪುಗಳನ್ನು ಕಾಶ್ಮೀರ ಕಣಿವೆಯಲ್ಲಿ ನಿಯೋಜನೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 35A ವಿಧಿ ರದ್ದುಗೊಳಿಸಲು ಕೇಂದ್ರ ಸಜ್ಜು?
ಸ್ವತಃ ಅಜಿತ್ ದೋವಲ್ ಕಾಶ್ಮೀರಕ್ಕೆ ತೆರಳಿ, ಭಯೋತ್ಪಾದನೆ ವಿರೋಧಿ ದಳದ ಉನ್ನತ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ಆ ನಂತರ ಹೆಚ್ಚುವರಿ ಪಡೆಯನ್ನು ಜಮ್ಮು ಕಾಶ್ಮೀರದಲ್ಲಿ ನಿಯೋಜಿಸುವ ಬಗ್ಗೆ ತೀರ್ಮಾನಿಸಲಾಗಿದೆ.
ಅಮರನಾಥ ಯಾತ್ರೆ ಶಾಂತಿಯುತವಾಗಿ ಆಗಿದ್ದು, ಪಂಚಾಯತ್ ಚುನಾವಣೆಗಳ ಯಶಸ್ಸಿನಿಂದ ಭಯೋತ್ಪಾದಕರು ಹಾಗೂ ಐಎಸ್ ಐಗೆ ಚಿಂತೆ ಶುರು ಆಗಿದೆ. ಶನಿವಾರದಂದು ಹತ್ತು ಸಾವಿರ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಗೃಹ ಸಚಿವಾಲಯವು ಆದೇಶಿಸಿದೆ. ಉಗ್ರರು ಕಾಶ್ಮೀರ ಕಣಿವೆಯೊಳಗೆ ನುಸುಳುವುದನ್ನು ತಡೆಯಲು, ಕಾನೂನು- ಸುವ್ಯವಸ್ಥೆ ಕಾಪಾಡಲು ಈ ತೀರ್ಮಾನ ಮಾಡಲಾಗಿದೆ.
ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಕಣಿವೆಯಲ್ಲಿ ಬೇರೆ ವಿಚಾರಗಳು ಸುಳಿದಾಡುತ್ತಿವೆ. ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪರಿಚ್ಛೇದ 35A ಅನ್ನು ವಾಪಸ್ ಪಡೆಯಲಾಗುವುದು. ಆ ನಂತರ ಗಲಭೆಯಾದರೆ ಬಂಧನಕ್ಕೆ ಅನುಕೂಲವಾಗಲು ಹೀಗೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈಗಾಗಲೇ ಅಮರನಾಥ ಯಾತ್ರೆ ಸಲುವಾಗಿ ನಲವತ್ತು ಸಾವಿರಕ್ಕೂ ಹೆಚ್ಚು ಮಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.