ಪುಲ್ವಾಮಾ ಉಗ್ರರ ದಾಳಿಗೂ ಟ್ರಕ್ ಚಾಲಕನಿಗೂ ಎಲ್ಲಿಂದೆಲ್ಲಿಯ ನಂಟು?
ಶ್ರೀನಗರ್, ಜನವರಿ.31: ಕಣಿವೆ ರಾಜ್ಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಜೈಶ್-ಇ- ಮೊಹಮದ್ ಉಗ್ರ ಸಂಟನೆಯ ಮೂವರು ಉಗ್ರರನ್ನು ಭಾರತೀಯ ಭದ್ರತಾ ಪಡೆಯು ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ.
ಉಗ್ರರನ್ನು ಜೋಪಾನವಾಗಿ ಟ್ರಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಟ್ರಕ್ ಚಾಲಕನಿಗೂ ಮತ್ತು ಫೆಬ್ರುವರಿ.14, 2019ರಲ್ಲಿ ನಡೆದ ಪುಲ್ವಾಮ ಉಗ್ರರ ದಾಳಿಗೂ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಟ್ರಕ್ ಚಾಲಕ ಸಲೀಂ ದಾರ್, ಪುಲ್ವಾಮಾ ದಾಳಿಯ ರೂವಾರಿ ಆದಿಲ್ ದಾರ್ ಸಂಬಂಧಿಕ ಎಂದು ತಿಳಿದು ಬಂದಿದೆ.
ಹಿಜ್ಬುಲ್ ಉಗ್ರರ ಜೊತೆ ದೇವಿಂದರ್ ನಂಟು; ಎನ್ಐಗೆ ಸಿಕ್ತು ಸಾಕ್ಷಿ
ಬೆಳ್ಳಂಬೆಳಗ್ಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಟ್ರಕ್ ನಲ್ಲಿ ಉಗ್ರರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಟ್ರಕ್ ತಪಾಸಣೆ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರನು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಭದ್ರತಾ ಸಿಬ್ಬಂದಿಗೆ ಗಾಯವಾಗಿತ್ತು.
ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ:
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲೇ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯಿತು. ಭಾರತೀಯ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಯಿತು.
ಟ್ರಕ್ ಚಾಲಕನ ಹಿನ್ನಲೆಯೇ ನಿಗೂಢ:
ಟ್ರಕ್ ಚಾಲಕ ಸಲೀಂ ದಾರ್ ಗೂ ಜೈಶ್ -ಇ ಮೊಹಮ್ಮದ್ ಸಂಘಟನೆಗೂ ಮೊದಲಿನಿಂದಲೂ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪುಲ್ವಾಮಾ ದಾಳಿಯ ಉಗ್ರ ಆದಿಲ್ ದಾರ್ ಮತ್ತು ಸಲೀಂ ದಾರ್ ಇಬ್ಬರೂ ಸಂಬಂಧಿಕರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಭದ್ರತಾ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.
ಇನ್ನು, ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆ ಬೆನ್ನಲ್ಲೇ ಐದು ಎಕೆ-47, ಅಮೆರಿಕಾದಲ್ಲಿ ಸಿದ್ಧಗೊಂಡ ರೈಫಲ್ ಮತ್ತು ಐದು ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.