ಜಮ್ಮು ಕಾಶ್ಮೀರದಲ್ಲಿ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
ಶ್ರೀನಗರ್, ಜುಲೈ 23: ಜಮ್ಮು-ಕಾಶ್ಮೀರದ ಕನಚಕ್ ಪ್ರದೇಶದ ಬಳಿ ಪೊಲೀಸರು ಡ್ರೋನ್ ಒಂದನ್ನು ಹೊಡೆದುರುಳಿಸಿದ್ದು, ಅದರಲ್ಲಿದ್ದ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇಶದ ಆರು ಕಿಲೋ ಮೀಟರ್ ಗಡಿಯಲ್ಲಿ ಪ್ರವೇಶಿಸಿದ್ದ ಹೆಕ್ಸಾಕಾಪ್ಟರ್ ನಲ್ಲಿ 5 ಕೆಜಿಯಷ್ಟು ಸ್ಫೋಟಕಗಳನ್ನು ಇರಿಸಲಾಗಿತ್ತು. ಅದನ್ನು ಹೊಡೆದುರುಳಿಸಿರುವ ಪೊಲೀಸರು ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡ್ರೋನ್ ನಿಯಮಾವಳಿ 2021 ಪ್ರಕಟ, ಆಕ್ಷೇಪವಿದ್ದರೆ ಸಲ್ಲಿಸಿ
ಕಳದ ಜುಲೈ 16ರ ಬುಧವಾರ ಸತ್ವಾರಿ ಪ್ರದೇಶದಲ್ಲಿ ಸಂಶಯಾಸ್ಪದ ಡ್ರೋನ್ ಪತ್ತೆಯಾಗಿತ್ತು. ಜಮ್ಮು ಕಾಶ್ಮೀರದ ವಾಯುನೆಲೆಯ ಸುತ್ತಮುತ್ತಲೂ ಸಂಚರಿಸುತ್ತಿದ್ದ ಡ್ರೋನ್ ಬಗ್ಗೆ ಡ್ರೋನ್ ನಿರ್ಬಂಧಕ ವ್ಯವಸ್ಥೆಯು ರಾಷ್ಟ್ರೀಯ ಭದ್ರತಾ ಪಡೆಗೆ ಮಾಹಿತಿ ನೀಡಿತ್ತು. ಈ ಹಿಂದೆ ಜಮ್ಮು-ಕಾಶ್ಮೀರಯ ವಾಯುನೆಲೆ ಬಳಿ ನಡೆಸಿದ ಡ್ರೋನ್ ದಾಳಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿಯು ಕಳೆದ ತಿಂಗಳು ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಡ್ರೋನ್ ಮೇಲೆ ನಿಗಾ ವಹಿಸುವಂತಾ ಆಂಟಿ-ಡ್ರೋನ್ ಸಿಸ್ಟಮ್ ಅನ್ನು ಅಳವಡಿಸಿದ್ದರು.
ಡ್ರೋನ್ ಮೇಲಿನ ಗುಂಡಿನ ದಾಳಿ ಬಗ್ಗೆ ಸ್ಪಷ್ಟನೆ:
"ಅದು ಜುಲೈ 13ರ ರಾತ್ರಿ ಸಮಯ 9.52, ಅರ್ನಿಯಾ ಸೆಕ್ಟರ್ನಲ್ಲಿ ಮಿಣುಕುವ ಕೆಂಪು ಬಣ್ಣದ ದೀಪವನ್ನು ನಮ್ಮ ಸೇನಾ ಯೋಧರು ಗಮನಿಸಿದರು. ಅದು ನಮ್ಮ ಗಡಿಯ 200 ಮೀಟರ್ ಒಳಗೆ ಪ್ರವೇಶಿಸಿದ್ದು, ತಕ್ಷಣ ಎಚ್ಚೆತ್ತುಕೊಂಡ ಯೋಧರು ಆ ಕೆಂಪು ದೀಪದ ಕಡೆಯಲ್ಲಿ ಗುಂಡಿನ ದಾಳಿ ಶುರು ಮಾಡಿದರು. ಈ ವೇಳೆ ಕೆಂಪು ದೀಪ ಹಿಮ್ಮುಖವಾಗಿ ಸಂಚರಿಸಿದ್ದು, ಅದೇ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಈವರೆಗೂ ಯಾವುದೇ ಡ್ರೋನ್ ಪತ್ತೆಯಾಗಿಲ್ಲ," ಎಂದು ಬಿಎಸ್ಎಫ್ ಸ್ಪಷ್ಟಪಡಿಸಿತ್ತು.
ಜಮ್ಮು ಐಎಎಫ್ ಕೇಂದ್ರದಲ್ಲಿ ಡ್ರೋನ್ ದಾಳಿ:
ಕಳೆದ ಜೂನ್ 27ರ ಭಾನುವಾರ ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆಸಲಾಗಿತ್ತು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಛಾವಣಿಗೆ ಹಾನಿಯಾಗಿತ್ತು. ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು.
"ಭಾರತೀಯ ವಾಯು ನೆಲೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಎರಡು ಲಘುಸ್ಫೋಟವು ಉಗ್ರರ ದಾಳಿಯಾಗಿದೆ," ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಸ್ಪಷ್ಟಪಡಸಿದ್ದಾರೆ. ಮೊದಲ ಬಾರಿಗೆ ಉಗ್ರರ ದಾಳಿಗೆ ಡ್ರೋನ್ ಬಳಕೆ ಆಗಿರುವುದು ಗೊತ್ತಾಗಿದೆ. ಅಲ್ಲದೇ, ಈ ಡ್ರೋನ್ ದಾಳಿ ಹಿಂದೆ ಪಾಕಿಸ್ತಾನ ಉಗ್ರ ಸಂಘಟನೆ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.