ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ, 6ಕ್ಕೂ ಹೆಚ್ಚು ಮಂದಿಗೆ ಗಾಯ
ಶ್ರೀನಗರ, ಅಕ್ಟೋಬರ್ 26: ಜಮ್ಮು-ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ನಡೆದಿದ್ದು 6 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸುಂಬಾಲ್ ಪ್ರದೇಶದಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಐದಾರು ಜನರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸೋಪೋರಾದ ಮುಷ್ತಾಕ್ ಅಹ್ಮದ್ ಭಟ್, ಮರ್ಕುಂಡಲ್ನ ಅಬ್ದುಲ್ ಹಮೀದ್ ಮಲ್ಲಾ ಅವರ ಪತ್ನಿ ತಸ್ಲೀಮಾ, ಬಶೀರ್ ಅಹ್ಮದ್ ಅವರ ಪುತ್ರ ಫರೋಜ್ ಅಹ್ಮದ್, ಮೊಹಮ್ಮದ್ ಅಲ್ತಾಫ್, ಸಫಾಪೋರಾದ ಫೈಸಲ್ ಅಹ್ಮದ್ ಮತ್ತು ಅಬ್ದುಲ್ ಹಮೀದ್ ಮಲ್ಲಾ ಎಂದು ಗುರುತಿಸಲಾಗಿದೆ.
ಉಗ್ರರು ಸಂಬಾಲ್ನ ಸೇತುವೆ ಪ್ರದೇಶದಲ್ಲಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಂಬಾಲ್ನ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ಸಿ)ಕ್ಕೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ 250 ಉಗ್ರರು: ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ, ಈ ವರ್ಷಾಂತ್ಯದೊಳಗೆ ಜಮ್ಮು-ಕಾಶ್ಮೀರದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆ -ಎಲ್ ಒಸಿಯಾದ್ಯಂತ ಸುಮಾರು 250 ಉಗ್ರರು ಕಾಯುತ್ತಿರುವುದಾಗಿ ತಿಳಿದುಬಂದಿದೆ.
ಆಗಸ್ಟ್ ತಿಂಗಳಲ್ಲಿ ಸುಮಾರು 180 ಉಗ್ರರು ಪತ್ತೆಯಾಗಿದ್ದರು. ದೇಶದೊಳಗೆ ನುಸುಳಲು ಹೊಂಚು ಹಾಕುತ್ತಿರುವ ಉಗ್ರರು ಬಹುತೇಕ ಲಷ್ಕರ್-ಇ- ತೊಯ್ಬಾ ಮತ್ತು ಜೈಷ್ -ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ.
ಫೆಬ್ರವರಿಯಲ್ಲಿ ಪಾಕಿಸ್ತಾನ- ಭಾರತ ನಡುವಣ ಕದನ ವಿರಾಮ ಒಪ್ಪಂದ ಆಗಿದ್ದರೂ, ಎಲ್ ಒಸಿಯಾದ್ಯಂತ ಅಪಾರ ಸಂಖ್ಯೆಯ ಉಗ್ರರು ಬರುತ್ತಿರುವುದಾಗಿ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಂಗ್ಧರ್, ಭಿಂಬರ್ ಗಲಿ ಮತ್ತು ನೌಶೇರಾ ಸೆಕ್ಟರ್ ನಲ್ಲಿ ಉಗ್ರರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಗರಿಷ್ಠ ಭಯೋತ್ಪಾದಕರನ್ನು ಒಳನುಸುಳಲು ಉಗ್ರ ಸಂಘಟನೆಗಳು ಹೊಸ ಮಾರ್ಗಗಳು, ನದಿಯ ಅಂತರಗಳು ಮತ್ತು ಪತ್ತೆಯಾಗದ ಸುರಂಗಗಳನ್ನು ಅನ್ವೇಷಿಸಬಹುದು ಎಂದು ಇಂಟೆಲ್ ವರದಿಗಳು ಸೂಚಿಸುತ್ತವೆ ಎಂದು ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಜಾಗರೂಕರಾಗಿದ್ದೇವೆ ಮತ್ತು ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಆದರೆ ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವುದರಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ನೈತಿಕತೆ ಹೆಚ್ಚಿದೆ ಮತ್ತು ಅವರು ಭಯೋತ್ಪಾದಕರಿಗೆ ತರಬೇತಿಯನ್ನು ತೀವ್ರಗೊಳಿಸಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.