ಜಮ್ಮು- ಕಾಶ್ಮೀರದಲ್ಲಿ ನಾಲ್ವರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ ಯೋಧರು
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಸೆಪ್ಟೆಂಬರ್ 28: ಕಾಶ್ಮೀರ ಕಣಿವೆಯ ಗಂದೇರ್ ಬಾಲ್ ಜಿಲ್ಲೆಯಲ್ಲಿ, ಜಮ್ಮುವಿನ ಬಟೋಟೆಯಲ್ಲಿ ಹಾಗೂ ಶ್ರೀನಗರ್ ನ ನವಕದಲ್ ನಲ್ಲಿ ಶನಿವಾರ ಉಗ್ರಗಾಮಿಗಳು ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಬಟೋಟೆಯಲ್ಲಿ ಮೂವರು ಉಗ್ರಗಾಮಿಗಳು ಮೃತಪಟ್ಟಿದ್ದಾರೆ ಹಾಗೂ ನಾಗರಿಕರರೊಬ್ಬರನ್ನು ಒತ್ತೆಯಿಂದ ಬಿಡಿಸಲಾಗಿದೆ.
ಒತ್ತೆಯಿಂದ ಬಿಡಿಸಿಕೊಂಡ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಜಮ್ಮುವಿನ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ. ಭಯೋತ್ಪಾದಕರು ಸೇನಾ ತಂಡದ ಮೇಲೆ ಗ್ರೆನೇಡ್ ಎಸೆದಿದ್ದಾರೆ. "ಮಾರುಕಟ್ಟೆಯಲ್ಲಿ ಕೆಲ ಉಗ್ರರು ಇದ್ದರು. ಅವರನ್ನು ಭದ್ರತಾ ಪಡೆಗಳು ಬೆನ್ನಟ್ಟಿವೆ. ಆಗ ಮನೆಯೊಂದಕ್ಕೆ ನುಗ್ಗಿದ ಉಗ್ರರು ನಾಗರಿಕರೊಬ್ಬರನ್ನು ಒತ್ತೆಯಾಳಾಗಿ ಇರಿಸಿಕೊಂಡರು" ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಶನಿವಾರ ಮಧ್ಯಾಹ್ನ ಉಗ್ರಗಾಮಿಗಳು ಸಿಆರ್ ಪಿಎಫ್ ತಂಡದ ಮೇಲೆ ಗ್ರೆನೇಡ್ ಎಸೆದಿದ್ದಾರೆ. ತಂಡದಿಂದ ದೂರದಲ್ಲಿ ಗ್ರೆನೇಡ್ ಬಿದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಅಥವಾ ಗಾಯಗಳು ಸಂಭವಿಸಲಿಲ್ಲ. ಈ ಘಟನೆಯು ಶ್ರೀನಗರ್ ನ ನವಕದಲ್ ಪ್ರದೇಶದಲ್ಲಿ ನಡೆಯಿತು. ಕಾಶ್ಮೀರ ಕಣಿವೆಯ ಗಂಡೇರಬಲ್ ಜಿಲ್ಲೆಯಲ್ಲಿ ಒಬ್ಬ ಉಗ್ರನನ್ನು ಕೊಂದು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು.