ಜಮ್ಮು ಕಾಶ್ಮೀರದಲ್ಲಿ 3 ಉಗ್ರರನ್ನು ಸದೆಬಡಿದ ಭಾರತೀಯ ಸೇನೆ
ಶ್ರೀನಗರ, ಸೆಪ್ಟೆಂಬರ್ 17: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಬೆಳ್ಳಂಬೆಳಗ್ಗೆ ಭಾರತೀಯ ಯೋಧರು ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಉಗ್ರರು ಅನುಮಾನ ಬರುವಂತೆ ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಡುತ್ತಿದ್ದರು. ಹೀಗಾಗಿ ಯೋಧರು ಶ್ರೀನಗರದ ಬಟಾಮಲು ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು.
ನೌಗಾಮ್ನಲ್ಲಿ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ
ಭಯೋತ್ಪಾದಕರು ಅವಿತಿರುವ ಮಾಹಿತಿ ಪಡೆದ ಪೊಲೀಸರು ಮತ್ತು ಸಿಆರ್ಎಫ್ ಯೋಧರು ಉಗ್ರರ ಬೇಟೆ ಮಾಡಿದ್ದಾರೆ.ಕಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 582 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದು, ಈ ಅವಧಿಯಲ್ಲಿ 46 ಭಯೋತ್ಪಾದಕರನ್ನು ಬಂಧಿಸಲಾಗಿದೆ.
2018ರಿಂದ 2020ರ ಸೆಪ್ಟೆಂಬರ್ 8ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 76 ಸೇನಾ ಯೋಧರು ಹತ್ಯೆಯಾಗಿದ್ದಾರೆ. ಇದೇ ಅವಧಿಯಲ್ಲಿ ಉಗ್ರರು ನಡೆಸಿರುವ ದಾಳಿಯಿಂದಾಗಿ 76 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದು ನಿನ್ನೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿತ್ತು. ಇದೀಗ ಇಂದು ಮತ್ತೆ ಮೂವರು ಉಗ್ರರು ಹತ್ಯೆಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಉಗ್ರರು ಏಕಾಏಕಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡುವ ಮೂಲಕ ಮೂವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಭಾರತೀಯ ಸೇನಾಪಡೆ ಯಶಸ್ವಿಯಾಗಿದೆ.
ಗುಂಡಿನ ಚಕಮಕಿ ನಂತರ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಇನ್ನೂ ಹಲವು ಉಗ್ರರು ಅವಿತಿರುವ ಸಾಧ್ಯತೆಯಿದ್ದು, ಭದ್ರತಾ ಪಡೆಗಳಿಂದ ಶೋಧ ಕಾರ್ಯ ಮುಂದುವರೆದಿದೆ ಎಂದು ಸೇನೆಯ ಮೂಲಗಳು ಹೇಳಿವೆ.