ಕೊರೊನಾ ಭೀತಿ: ಇಬ್ಬರು ಸಿಆರ್ಪಿಎಫ್ ಅಧಿಕಾರಿಗಳು ಆತ್ಮಹತ್ಯೆ!
ಶ್ರೀನಗರ, ಮೇ 13: ಇಬ್ಬರು ಸಿಆರ್ಪಿಎಫ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ವರದಿಯಾಗಿದೆ. ಜಮ್ಮು ಕಾಶ್ಮೀರದ ಬೇರೆ ಬೇರೆ ಕಡೆಗಳಲ್ಲಿ ಇಬ್ಬರು ಸಾವಿಗೆ ಶರಣಾಗಿದ್ದಾರೆ.
ಸಹಾಯಕ ಸಬ್ ಇನ್ಸ್ಪೆಕ್ಟರ್ ಬಂಗಾಳಿ ಬಾಬು ಶ್ರೀನಗರದ ಕರಣ್ ನಗರದಲ್ಲಿ ಮಂಗಳವಾರ ತಮ್ಮ ಸೇವಾ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತೆ 30 ಬಿಎಸ್ಎಫ್ ಯೋಧರಿಗೆ ಕೊರೊನಾ ಸೋಂಕು ಪತ್ತೆ
ಚೆಕ್ಪಾಯಿಂಟ್ನಲ್ಲಿ ಕಾರ್ಯನಿರತನಾಗಿದ್ದ ಅಧಿಕಾರಿ ಕೆಲಸ ಮುಗಿದ ನಂತರ ತನ್ನ ರೈಫಲ್ನಿಂದ ಶೂಟ್ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಸಿಆರ್ಪಿಎಫ್ ವಕ್ತಾರ ಪಂಕಜ್ ಸಿಂಗ್ ಹೇಳಿದ್ದಾರೆ. ಅವರು ಆರೋಗ್ಯವಾಗಿದ್ದರೂ ಮತ್ತು ಯಾವುದೇ ಡೆತ್ನೋಟ್ ಬರೆದಿಟ್ಟಿಲ್ಲ ಎಂದು ತಿಳಿಸಿದ್ದಾರೆ.
49ನೇ ಬೆಟಾಲಿಯನ್ನಲ್ಲಿ ಕೆಲಸ ಮಾಡುತ್ತಿದ್ದು 46 ವರ್ಷದ ಬಂಗಾಳಿ ಬಾಬು ಗ್ವಾಲಿಯರ್ನಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.
ಇನ್ನು ಸೋಮವಾರ ಸಿಆರ್ಪಿಎಫ್ನ 96ನೇ ಬೆಟಾಲಿಯನ್ನಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ತಮ್ಮ ಸೇವಾ ರೈಫಲ್ನಿಂದ ಶೂಟ್ ಮಾಡಿಕೊಂಡಿದ್ದಾರೆ. ಅನಂತ್ ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಮೃತಪಟ್ಟಿದ್ದಾರೆ ಎಂದು ಸಿಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಆತ್ಮಹತ್ಯೆಗೆ ಶರಣಾದ ಅಧಿಕಾರಿ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ನನಗೆ ಕೊರೊನಾ ವೈರಸ್ ತಗುಲಿರಬಹುದು. ನನ್ನ ದೇಹವನ್ನು ಯಾರೂ ಮುಟ್ಟಬೇಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸಿಆರ್ಪಿಎಫ್ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ. ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.
ಪೊಲೀಸ್ ಮೂಲಗಳು ಹೇಳಿರುವ ಪ್ರಕಾರ, ಮೃತ ಅಧಿಕಾರಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.