ಉಗ್ರರ ಗುಂಡೇಟಿಗೆ ಬೆದರಿದ ಕಾಶ್ಮೀರಿ ಪಂಡಿತರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ
ನವದೆಹಲಿ, ಜೂನ್ 4: ಜಮ್ಮು-ಕಾಶ್ಮೀರಿದಲ್ಲಿ ನಡೆಯುತ್ತಿರುವ ಉದ್ದೇಶಿತ ಹತ್ಯೆಗಳಿಗೆ ಕಾಶ್ಮೀರಿ ಪಂಡಿತರು ಬೆಚ್ಚಿ ಬಿದ್ದಿದ್ದಾನೆ. ನಾವು ಕಾಶ್ಮೀರದಲ್ಲಿ ಬದುಕಲು ಸಿದ್ಧರಿಲ್ಲ, ಬೇರೆಡೆ ನಮ್ಮನ್ನು ವರ್ಗಾವಣೆ ಮಾಡಿ ಎನ್ನುವ ಬೇಡಿಕೆಯ ನಡುವೆ 177 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
Recommended Video
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯೆಗಳ ಹಿನ್ನೆಲೆ ಸುರಕ್ಷತೆ ಒದಗಿಸುವ ದೃಷ್ಟಿಯಲ್ಲಿ ಶನಿವಾರ 177 ಕಾಶ್ಮೀರಿ ಶಿಕ್ಷಕರ ಕುಟುಂಬಗಳನ್ನು ಶ್ರೀನಗರದಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಡೆಸಲಾಯಿತು.
ಅಂದು ಒಂದು ಥರ, ಇಂದು ಇನ್ನೊಂದು ಥರ; ಹೀಗ್ಯಾಕೆ ಆಯಿತು ಕಣಿವೆ ರಾಜ್ಯ ಕಾಶ್ಮೀರ!?
ದೆಹಲಿಯ ನಾರ್ತ್ ಬ್ಲಾಕ್ನಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸರಣಿ ಸಭೆಯಲ್ಲಿ ಈ ನಿರ್ಧಾರ ತೆೆದುಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜನಾಂಗೀಯ ನಿರ್ಮೂಲನೆಯ ಭಾಗವಾಗಲು ಸಾಧ್ಯವಿಲ್ಲ, ಆದ್ದರಿಂದ ಅಲ್ಪಸಂಖ್ಯಾತರನ್ನು ಕಾಶ್ಮೀರ ಕಣಿವೆಯಿಂದ ಸ್ಥಳಾಂತರಿಸಲಾಗುವುದಿಲ್ಲ. ಅದರ ಬದಲಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿತ್ತು.
ಕಾಶ್ಮೀರದಲ್ಲಿ ಸಾಮೂಹಿಕ ಸ್ಥಳಾಂತರಕ್ಕೆ ಒತ್ತಾಯ
2012ರಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಿ ಆಗಿದ್ದ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗಿತ್ತು. ಅದೇ ರೀತಿ ಮೇ 12ರಂದು ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ರಾಹುಲ್ ಭಟ್ ಎಂಬ ಸರ್ಕಾರಿ ಉದ್ಯೋಗಿಯನ್ನು ಭಯೋತ್ಪಾದಕರು ಹತ್ಯೆಗೈದರು. ಈ ಹತ್ಯೆಯ ಬೆನ್ನಲ್ಲೇ ಸಾಮೂಹಿಕವಾಗಿ ವಲಸೆ ಹೋಗುವಂತೆ ಪಂಡಿತರಿಗೆ ಬೆದರಿಕೆ ಹಾಕಲಾಗಿತ್ತು. ಅಂದಿನಿಂದ ಸಾಮೂಹಿಕ ವರ್ಗಾವಣೆಯನ್ನು ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಲಾಗುತ್ತಿತ್ತು.
ರಾಹುಲ್ ಭಟ್ ಹತ್ಯೆಯಿಂದ ಕೆರಳಿ ಸುಮಾರು 6,000 ಉದ್ಯೋಗಿಗಳು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಶುರು ಮಾಡಿದರು. ಕಣಿವೆ ರಾಜ್ಯದಿಂದ ಬೇರೆ ರಾಜ್ಯಗಳಿಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. ಅಂದಿನಿಂದ, ಕಣಿವೆಯಲ್ಲಿ ಉದ್ದೇಶಿತ ಭಯೋತ್ಪಾದಕರ ಹಿಂಸಾಚಾರವು ಮಿತಿ ಮೀರುವುದಕ್ಕೆ ಶುರುವಾಯಿತು.
ಮೇ 1ರಿಂದ ಒಂದು ತಿಂಗಳಿನಲ್ಲೇ 9 ಮಂದಿ ಹತ್ಯೆ
ಕಳೆದ ಜೂನ್ 2ರ ಗುರುವಾರ ಕಾಶ್ಮೀರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು ಬ್ಯಾಂಕ್ ಮ್ಯಾನೇಜರ್ ಹಾಗೂ ಇಟ್ಟಿಗೆ ಗೂಡು ಕಾರ್ಮಿಕನೊಬ್ಬನನ್ನು ಹತ್ಯೆ ಮಾಡಿದ್ದರು. ಈ ಉಗ್ರರ ದಾಳಿಯಲ್ಲಿ ಒಬ್ಬ ಕಾರ್ಮಿಕ ಗಾಯಗೊಂಡಿದ್ದನು. ಮೇ 1ರಿಂದ ಈಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ ಎಂಟನೇ ಬಲಿಯಾಗಿದ್ದರೆ, ಒಬ್ಬತ್ತನೇ ಹತ್ಯೆಯೇ ಕಾರ್ಮಿಕ ಬಿಹಾರದ ಕಾರ್ಮಿಕ ದಿಲ್ಖುಷ್ ಕುಮಾರ್ ಆಗಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಸರಣಿ ಹತ್ಯೆಗಳು
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಮೇ 31ರಂದು ಹಿಂದೂ ಮಹಿಳೆಯೊಬ್ಬರ ಹತ್ಯೆ ನಡೆಯಿತು. ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದ ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯನ್ನು ಕೊಲ್ಲಲಾಯಿತು. ಮೇ 18 ರಂದು ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ವೈನ್ ಶಾಪ್ಗೆ ನುಗ್ಗಿದ ಭಯೋತ್ಪಾದಕರು ಗ್ರೆನೇಡ್ ಎಸೆದರು, ಈ ದಾಳಿಯಲ್ಲಿ ಜಮ್ಮು ಪ್ರದೇಶದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು.
ಕಳೆದ ಮೇ 24ರಂದು ಶ್ರೀನಗರದಲ್ಲಿ ಪೊಲೀಸ್ ಪೇದೆ ಸೈಫುಲ್ಲಾ ಖಾದ್ರಿ ಅನ್ನು ನಿವಾಸದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಇದಾಗಿ ಎರಡು ದಿನಕ್ಕೆ ಅಂದರೆ ಮೇ 26ರಂದು ದೂರದರ್ಶನ ಕಲಾವಿದೆ ಅಮರೀನ್ ಭಟ್ ಅವರನ್ನು ಬುದ್ಗಾಮ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಹೀಗೆ ಕಾಶ್ಮೀರದ ಕಣಿವೆಯಲ್ಲಿ ನಡೆದ ಸಾಲು ಸಾಲು ಸರಣಿ ಹತ್ಯೆಗಳು ಪಂಡಿತರಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿತು.
ಕಣಿವೆಯಲ್ಲಿ ಉದ್ದೇಶಿತ ಹತ್ಯೆಗಳಿಗೆ ಪಾಕಿಸ್ತಾನವೇ ಹೊಣೆ
ಜಮ್ಮ ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಜನಾಂಗೀಯ ಹತ್ಯೆಗಳಿಗೆ ಕೇಂದ್ರ ಸರ್ಕಾರವು ಪಾಕಿಸ್ತಾನದ ಕಡೆಗೆ ಬೊಟ್ಟು ಮಾಡಿದೆ. ದೆಹಲಿಯ ನಾರ್ತ್ ಬ್ಲಾಕ್ನಲ್ಲಿ ಶುಕ್ರವಾರ ನಡೆದ ಸರಣಿ ಸಭೆಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಗಳು ಕಾಶ್ಮೀರ ಕಣಿವೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಾಹಿತಿ ನೀಡಿವೆ. "ಕಾಶ್ಮೀರದಲ್ಲಿ ಹಿಂಸಾಚಾರದ ಪ್ರಕರಣಗಳು ಹೆಚ್ಚಿರಬಹುದು, ಆದರೆ ಅದು ಜಿಹಾದ್ ಅಲ್ಲ. ಕೆಲವು ಹತಾಶ ಶಕ್ತಿಗಳಿಂದ ಇದನ್ನು ನಡೆಸಲಾಗುತ್ತಿದೆ," ಎಂದು ಸರ್ಕಾರದ ಹಿರಿಯ ಕಾರ್ಯಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂಸಾಚಾರದ ದುಷ್ಕರ್ಮಿಗಳು ಪಾಕಿಸ್ತಾನದ ಗಡಿಯುದ್ದಕ್ಕೂ ಕುಳಿತಿದ್ದಾರೆ ಎಂದು ಹೇಳಿದ್ದಾರೆ.