ಸಿಆರ್ಪಿಎಫ್ ಪಡೆ ಮೇಲೆ ಉಗ್ರರ ದಾಳಿ: ಒಬ್ಬ ಯೋಧ ಹುತಾತ್ಮ
ಶ್ರೀನಗರ, ಮಾರ್ಚ್ 25: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಲವಾಯಪೊರಾದಲ್ಲಿ ಸಿಆರ್ಪಿಎಫ್ ಸಿಬ್ಬಂದಿಯ ಬೆಂಗಾವಲಿನ ಮೇಲೆ ಉಗ್ರರು ಗುರುವಾರ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಒಬ್ಬ ಸಿಆರ್ಪಿಎಫ್ ಯೋಧ ಹುತಾತ್ಮನಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ತಿಳಿಸಿದ್ದಾರೆ.
ಲಷ್ಕರ್ ಎ ತಯಬಾ ಉಗ್ರರು ಈ ದಾಳಿ ನಡೆಸಿದ್ದಾರೆ. ಲಷ್ಕರ್ ಉಗ್ರರ ಗುಂಪು ಕೇಂದ್ರ ಕಾಶ್ಮೀರದ ಶ್ರೀನಗರ ಜಿಲ್ಲೆಯ ಲವಾಯಪೊರಾದಲ್ಲಿನ ಸಿಆರ್ಪಿಎಫ್-73 ಬೆಟಾಲಿಯನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸಿಆರ್ಪಿಎಫ್ ತಂಡವು ರೋಡ್ ಓಪನಿಂಗ್ ಪಾರ್ಟಿ (ಆರ್ಒಪಿ) ಕರ್ತವ್ಯದಲ್ಲಿತ್ತು ಎಂದು ಅವರು ಹೇಳಿದ್ದಾರೆ.
ಶೋಪಿಯಾನ್ ಎನ್ಕೌಂಟರ್: ಲಷ್ಕರ್ ಇ ತೊಯ್ಬಾದ ಮೂವರು ಉಗ್ರರ ಹತ್ಯೆ
ಲವಾಯಪೊರ ಮುಖ್ಯ ಚೌಕದ ಬಳಿಕ ನಡೆದ ಈ ಆಕ್ರಮಣದಲ್ಲಿ ನಾಲ್ವರು ಸಿಆರ್ಪಿಎಫ್ ಯೋಧರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಒಬ್ಬ ಯೋಧ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ಮೂವರು ಯೋಧರಿಗೆ 92 ಬೇಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹುತಾತ್ಮ ಯೋಧನನ್ನು ತ್ರಿಪುರಾ ಮೂಲದ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಂಗರಾಮ್ ಬರ್ಮನ್ ಎಂದು ಗುರುತಿಸಲಾಗಿದೆ. ಲವಾಯಪೊರಾ ಪ್ರದೇಶದಲ್ಲಿ ಉಗ್ರರನ್ನು ಸೆರೆಹಿಡಿಯಲು ಭದ್ರತಾ ಪಡೆಗಳು ಬೀಡುಬಿಟ್ಟಿವೆ.
ಶೋಪಿಯಾನ್ನಲ್ಲಿ ಮಾರ್ಚ್ 22ರಂದು ಭದ್ರತಾ ಪಡೆಗಳು ನಡೆಸಿದ ಎನ್ಕೌಂಟ್ನಲ್ಲಿ ನಾಲ್ವರು ಉಗ್ರರರನ್ನು ಹತ್ಯೆ ಮಾಡಲಾಗಿತ್ತು.