ಬಿಜೆಪಿ ಸೇರಿದ ಕಾರಣವನ್ನು ಬಹಿರಂಗಪಡಿಸಿದ ಕುಸ್ತಿಪಟು ದಿ ಗ್ರೇಟ್ ಖಲಿ
ನವದೆಹಲಿ ಮೇ 23: ಅಮೆರಿಕದ ಜನಪ್ರಿಯ ಕ್ರೀಡೆ ವೃತ್ತಿಪರ ಕುಸ್ತಿ ಪಂದ್ಯಾವಳಿ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ರಿಂಗ್ನಲ್ಲಿ ದಿ ಗ್ರೇಟ್ ಖಲಿ ಎಂದು ಜನಪ್ರಿಯವಾಗಿರುವ ಕುಸ್ತಿಪಟು ದಲೀಪ್ ಸಿಂಗ್ ರಾಣಾ ತಾವೂ ಭಾರತೀಯ ಜನತಾ ಪಕ್ಷಕ್ಕೆ ಸೇರುವುದಕ್ಕೆ ಕಾರಣ ಏನೆಂಬುವುದನ್ನು ಸುಮಾರು ಮೂರು ತಿಂಗಳ ನಂತರ ಬಹಿರಂಗಪಡಿಸಿದ್ದಾರೆ. ರೆಸ್ಲರ್ ತಾವೂ ಪ್ರಧಾನಿ ನರೇಂದ್ರ ಮೋದಿಯವರ ಸಿದ್ಧಾಂತದಿಂದ ಪ್ರಭಾವಿತರಾಗಿ ಬಿಜೆಪಿಗೆ ಸೇರಿರುವುದಾಗಿ ತಿಳಿಸಿದ್ದಾರೆ.
ಭಾರತೀಯ ಕುಸ್ತಿಪಟು "ಮ್ಯಾಕ್ಗ್ರುಬರ್", "ಗೆಟ್ ಸ್ಮಾರ್ಟ್" ಮತ್ತು "ದಿ ಲಾಂಗೆಸ್ಟ್ ಯಾರ್ಡ್" ನಂತಹ ಕೆಲವು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಮುಂದಿನ ಪೀಳಿಗೆಯ ಕುಸ್ತಿಪಟುಗಳನ್ನು ರಿಂಗ್ಗೆ ಸಿದ್ಧಗೊಳಿಸಲು ಕುಸ್ತಿ ಶಾಲೆಯನ್ನು ಸಹ ತೆರೆದಿದ್ದಾರೆ.
ಸೋಮವಾರ ಎಎನ್ಐ ಜೊತೆ ಮಾತನಾಡಿದ ಖಲಿ, ಬಿಜೆಪಿಗೆ ಸೇರಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ಖಲಿ ಮಾಧ್ಯಮದ ಜೊತೆ ಮಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸೇರಿರುವುದಕ್ಕೆ ತುಂಬಾ ಹೆಮ್ಮೆ
ನಾನು ಡಾ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಲು ಬಂದಿದ್ದೆ. ಈಗ ನಾನು ಹಿಂತಿರುಗುತ್ತಿದ್ದೇನೆ. ಇದೊಂದು ಸಾಮಾನ್ಯ ಸಭೆಯಾಗಿತ್ತು, ಅವರು ನನ್ನಂತೆ ಗುಡ್ಡಗಾಡು ಪ್ರದೇಶಕ್ಕೆ ಸೇರಿದವರಾಗಿರುವುದರಿಂದ ಸೌಹಾರ್ಧಯುತವಾಗಿ ಅವರನ್ನು ಭೇಟಿಯಾಗಲು ಬಂದಿದ್ದೇನೆ. ಎಂದು ಖಲಿ ಹೇಳಿದರು. ಬಿಜೆಪಿ ಸೇರಿರುವುದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಲಿ, " ಬಿಜೆಪಿ ಸೇರಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ, ಪ್ರಧಾನಿ ನರೇಂದ್ರ ಮೋದಿ ಅವರ ಸಿದ್ಧಾಂತದಿಂದ ನಾನು ಪ್ರಭಾವಿತನಾಗಿ ಬಿಜೆಪಿ ಸೇರಿದ್ದೇನೆ ಎಂದರು
ಫೆಬ್ರವರಿಯಲ್ಲಿ ಬಿಜೆಪಿ ಸೇರಿದ್ದ ರಾಣಾ
ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ಇನ್ನು ಕೆಲವೇ ದಿನಗಳಿದ್ದ ಸಂದರ್ಭದಲ್ಲಿ'ದಿ ಗ್ರೇಟ್ ಖಲಿ' ಬಿಜೆಪಿ ಸೇರ್ಪಡೆ ಆಗಿದ್ದರು. ದಲೀಪ್ ಸಿಂಗ್ ರಾಣಾ ಔಪಚಾರಿಕವಾಗಿ ಬಿಜೆಪಿ ಸೇರಿದ ಮೂರು ತಿಂಗಳ ನಂತರ ಸಿಂಗ್ ಅವರನ್ನು ಭೇಟಿಯಾಗಿದ್ದರು. ಫೆಬ್ರವರಿ ಎರಡನೇ ವಾರದಲ್ಲಿ ಜಿತೇಂದ್ರ ಸಿಂಗ್, ರಾಜ್ಯಸಭಾ ಸಂಸದ ಅರುಣ್ ಸಿಂಗ್ ಮತ್ತು ಲೋಕಸಭೆ ಸಂಸದೆ ಸುನೀತಾ ದುಗ್ಗಲ್ ಅವರ ಸಮ್ಮುಖದಲ್ಲಿ ಕುಸ್ತಿಪಟು ಬಿಜೆಪಿ ಸೇರಿದ್ದರು. ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್ನ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೂ ಅಚ್ಚರಿಯಲ್ಲ
ಸಿನಿಮಾದಲ್ಲೂ ನಟಿಸಿರುವ ಖಲಿ
ರಾಣಾ ಅವರು WWE ಯೂನಿವರ್ಸ್ನಲ್ಲಿ ದಿ ಗ್ರೇಟ್ ಖಲಿ ಎಂದೇ ಚಿರಪರಿಚಿತರಾಗಿದ್ದಾರೆ. ಅಲ್ಲಿ ಅವರು ಬಟಿಸ್ಟಾ, ಶಾನ್ ಮೈಕೆಲ್ಸ್ , ಜಾನ್ ಸೀನಾ ಮತ್ತು ಕೇನ್ನಂತಹ ವೃತ್ತಿಪರ ಕುಸ್ತಿಪಟುಗಳೊಂದಿಗೆ ಫೈಟ್ ಮಾಡಿದ್ದಾರೆ. ಖಲಿ ಒಮ್ಮೆ ವರ್ಲಡ್ ಹೆವಿವೇಟ್ ಚಾಂಪಿಯನ್ ಆಗಿದ್ದಾರೆ. ಅವರನ್ನು 2021ರಲ್ಲಿ WWE ಹಾಲ್ ಆಫ್ ಫೇಮ್ ವರ್ಗಕ್ಕೆ ಸೇರಿಸಲಾಗಿದೆ.
ಕಾನೂನು ಹೋರಾಟದ ವೇಳೆ ರೈತರಿಗೆ ಬೆಂಬಲ
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ 'ದಿ ಗ್ರೇಟ್ ಖಲಿ' ರೈತರಿಗೆ ಬೆಂಬಲ ಸೂಚಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಕುಸ್ತಿಪಟು ರಾಣಾ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳು ರಾಷ್ಟ್ರದ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲವನ್ನು ತೋರಿಸಬೇಕೆಂದು ಮನವಿ ಮಾಡಿದ್ದರು. ರಾಣಾ ಬೆಂಬಲ ಸೂಚಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. "ಬೆಳೆಯನ್ನು 2 ರೂಪಾಯಿಗೆ ಖರೀದಿಸಿ 200 ರೂಪಾಯಿಗೆ ಮಾರಾಟ ಮಾಡುತ್ತಾರೆ. ಕಾನೂನುಗಳಿಂದ ದಿನಗೂಲಿ ಕಾರ್ಮಿಕರು, ರಸ್ತೆಬದಿ ವ್ಯಾಪಾರಿಗಳಿಗೂ ತೊಂದರೆಯಾಗುತ್ತದೆ. ಜನಸಾಮಾನ್ಯರು ತೊಂದರೆ ಅನುಭವಿಸುತ್ತಾರೆ ರೈತರನ್ನು ಬೆಂಬಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಈ ಮೂಲಕ ಕೇಂದ್ರ ಸರ್ಕಾರವು ರೈತರ ಬೇಡಿಕೆಯನ್ನು ಒಪ್ಪಬೇಕಾಗುತ್ತದೆ," ಎಂದು ಹೇಳಿದ್ದರು.