ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಜೊತೆ ಕ್ರಿಕೆಟರ್ ಅರ್ಜುನ್ ಹೊಯ್ಸಳ ನಿಶ್ಚಿತಾರ್ಥ
ಬೆಂಗಳೂರು, ಸೆ. 11: ಕರ್ನಾಟಕದ ಕ್ರಿಕೆಟರ್ಸ್ ಭಾನುವಾರ ಸಂಜೆ ವೇಳೆಗೆ ಅಭಿಮಾನಿಗಳ ಜೊತೆ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಕರ್ನಾಟಕ ಮಹಿಳಾ ತಂಡದ ನಾಯಕಿ ವೇದಾ ಕೃಷ್ಣಮೂರ್ತಿ ಹಾಗೂ ಕರ್ನಾಟಕದ ಬ್ಯಾಟ್ಸ್ ಮನ್ ಅರ್ಜುನ್ ಹೊಯ್ಸಳ ಇಬ್ಬರ ಮದುವೆ ನಿಶ್ಚಯದ ಬಗ್ಗೆ ಸಾಮಾಜಿಕ ಜಾಲ ತಾಣದಿಂದ ತಿಳಿದು ಬಂದಿದೆ. ವೇದಾಗೆ ಪ್ರಪೋಸ್ ಮಾಡಿದೆ, ಅದಕ್ಕೆ ಆಕೆ ಸಮ್ಮತಿಸಿದ್ದಾರೆ ಎಂದು ಅರ್ಜುನ್ ಹೊಯ್ಸಳ ತಮ್ಮ ಇನ್ಸ್ಟಾ ಪೋಸ್ಟ್ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅರ್ಜುನ್ ಅವರು ಕೃಷ್ಣಮೂರ್ತಿ ಅವರ ಚಿತ್ರ ನೋಡಿ ಶುಭ ಹಾರೈಸುವ ಸಂದರ್ಭ ಒದಗಿ ಬಂದಿದೆ. ಹಸಿರು ಹಾಸಿನ ಸುಂದರವಾದ ಹಿನ್ನೆಲೆಯಲ್ಲಿ, ವೇದಾ ಅವರ ಮುಂದೆ ಮಂಡಿಯೂರಿ ಅರ್ಜುನ್ ಪ್ರಪೋಸ್ ಮಾಡುತ್ತಿರುವ ಚಿತ್ರ ಪೋಸ್ಟ್ ಮಾಡಲಾಗಿದೆ. ಚುಟುಕಾಗಿ ಅವಳು 'ಹೌದು' ಎಂದು ಹೇಳಿದಳು ಎಂದು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಅಭಿಮಾನಿಗಳು ಮತ್ತು ಸಹ ಆಟಗಾರರು ಶುಭ ಹಾರೈಕೆಯ ಮಹಾಪೂರವನ್ನೇ ಹರಿಸಿದ್ದಾರೆ.
ಸೆಪ್ಟೆಂಬರ್ 24 ರಂದು ಇಂಗ್ಲೆಂಡ್ ವಿರುದ್ಧದ ODI ಸರಣಿಯಲ್ಲಿ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿರುವ ಮಹಿಳಾ ತಂಡದ ದಿಗ್ಗಜ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರು "ಅಭಿನಂದನೆಗಳು ಬ್ರೋ," ಎಂದು ಕಾಮೆಂಟ್ ಮಾಡಿದ್ದಾರೆ.
ಚಿಕ್ಕಮಗಳೂರು ಮೂಲದ ವೇದಾ ಕೃಷ್ಣಮೂರ್ತಿ ಅವರು ಭಾರತದ ಪರ 48 ODI ಪಂದ್ಯಗಳನ್ನು ಆಡಿದ್ದಾರೆ ಮತ್ತು ಎಂಟು ಅರ್ಧ ಶತಕಗಳೊಂದಿಗೆ 829 ರನ್ ಗಳಿಸಿದ್ದಾರೆ. ಅವರು 76 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 875 ರನ್ ಗಳಿಸಿದ್ದಾರೆ.
2021 ವೇದಾ ಪಾಲಿಗೆ ದುರಂತ ವರ್ಷವಾಗಿತ್ತು. ಕೋವಿಡ್ 19 ಕಾರಣದಿಂದಾಗಿ ತನ್ನ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿದರು. ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಯಲ್ಲಿ ವೇದಾಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಕೃಷ್ಣಮೂರ್ತಿ ಅವರು ಮೃತಪಟ್ಟರು. ಇದಕ್ಕೂ ಮುನ್ನ ವೇದಾಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ (63) ಕೂಡ ಕೋವಿಡ್-19ಗೆ ತುತ್ತಾಗಿ ಸಾವನ್ನಪ್ಪಿದ್ದರು.
"ಮಾನಸಿಕ ಶಕ್ತಿ ಮುಖ್ಯವಾಗಿದೆ. ನನ್ನ ಹಿರಿಯ ಸಹೋದರಿ ವತ್ಸಲಾ ಅವರು ಕೋವಿಡ್ ನಿಂದ ಸಾಯುವ ಮೊದಲು ಪ್ಯಾನಿಕ್ ಅಟ್ಯಾಕ್ ಅನುಭವಿಸಿದ್ದರು, ಸಾಯುವ ಹಿಂದಿನ ದಿನದಂದು ನನ್ನ ತಾಯಿ ಕೂಡಾ ತುಂಬಾ ಆತಂಕದಲ್ಲಿದ್ದರು. ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರಿಗೂ ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿದ್ದು ಅವರನ್ನು ಕಾಡುತ್ತಿತ್ತು ಎಂದು ಕಾಣುತ್ತದೆ" ಎಂದು 28 ವರ್ಷ ವಯಸ್ಸಿನ ವೇದಾ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದರು.
ಇನ್ನು ಅರ್ಜುನ್ ಬಗ್ಗೆ ಹೇಳುವುದಾದರೆ 2016 ರ ಡಿಸೆಂಬರ್ ತಿಂಗಳಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದರು. ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಇಲ್ಲಿಯವರೆಗೆ 10 ಪಂದ್ಯಗಳನ್ನು ಆಡಿದ್ದಾರೆ. ಶಿವಮೊಗ್ಗ ಲಯನ್ಸ್ ಪರ ಬ್ಯಾಟ್ ಬೀಸಿದ್ದಾರೆ.