ಆಂಡ್ಯ್ರೂ ಸೈಮಂಡ್ಸ್ ಸೇರಿದಂತೆ ವಿವಾದಗಳಿಂದಲೇ ವೃತ್ತಿ ಜೀವನ ಕೆಡಿಸಿಕೊಂಡ ಸ್ಟಾರ್ ಕ್ರಿಕೆಟಿಗರು
ಸಿಡ್ನಿ, ಮೇ 15; ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಆಂಡ್ಯ್ರೂ ಸೈಮಂಡ್ಸ್ ಶನಿವಾರ ರಾತ್ರಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಕ್ವೀನ್ಸ್ ಲ್ಯಾಂಡ್ನ ಟೌನ್ಸ್ವಿಲ್ಲೆ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ 46 ವರ್ಷದ ವಯಸ್ಸಿನ ಮಾಜಿ ಕ್ರಿಕೆಟಿಗ ದುರಂತ ಅಂತ್ಯ ಕಂಡಿದ್ದಾರೆ.
ಸೈಮಂಡ್ಸ್ ಆಸ್ಟ್ರೇಲಿಯಾ ಕಂಡಂತಹ ವಿಧ್ವಂಶಕ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದರು ಮೈದಾನದಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸುತ್ತಿದ್ದ ಇವರೂ ಆಲ್ರೌಂಡರ್ ಆಗಿ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದರು. ಆದರೆ ಮೈದಾನದ ಹೊರಗೂ ಕೂಡ ಸೈಮಂಡ್ಸ್ ಹಲವಾರು ವಿವಾದಕ್ಕೆ ಒಳಗಾಗಿದ್ದರು. ಇವರ ಈ ನಡತೆಯಿಂದ ತಮ್ಮ ವೃತ್ತಿಜೀವನವನ್ನೇ ಹದಗೆಡಿಸಿಕೊಂಡರು.
ಜಂಟಲ್ ಮನ್ ಕ್ರಿಕೆಟ್ನಲ್ಲಿ ಉತ್ತುಂಗದಲ್ಲಿದ್ದರೂ ವಿವಾದಗಳಿಂದ ಕೆರಿಯರ್ ಹಾಳುಮಾಡಿಕೊಂಡ ಟಾಪ್ 5 ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ.
ಆಂಡ್ರ್ಯೂ ಸೈಮಂಡ್ಸ್
ಸೈಮಂಡ್ಸ್ ಕ್ರಿಕೆಟ್ ಲೋಕ ಕಂಡಂತಹ ಶ್ರೇಷ್ಠ ಆಲ್ರೌಂಡರ್ ಮತ್ತು ಫಿನಿಶರ್ಗಳಲ್ಲಿ ಒಬ್ಬರಾಗಿದ್ದರು. 1999-007ರಲ್ಲಿ ಆಸ್ಟ್ರೇಲಿಯಾದ ಭಾಗವಾಗಿದ್ದ ಅವರು ಹಲವಾರು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಆದರೆ ವೃತ್ತಿ ಜೀವನವನ್ನು ಅವರ ಚಟಗಳೇ ಅವರಿಗೆ ಮುಳುವಾಯಿತು. 2005ರಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕೂ ಮುನ್ನ ಮದ್ಯಪಾನ ಮಾಡಿದ್ದರು. ಇದರಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
2008ರಲ್ಲಿ ತಂಡದ ಮೀಟಿಂಗ್ಗೆ ಪಾಲ್ಗೊಳ್ಳುವ ಬದಲು ಕುಡಿದು ಫಿಶಿಂಗ್ ಮಾಡಲು ಹೋಗಿದ್ದರು. ಇವರ ಬೇಜಾವಾಬ್ದಾರಿ ವರ್ತನೆಯಿಂದ ಆಸ್ಟ್ರೇಲಿಯಾ ಕ್ರಿಕೆಟ್ನಿಂದ ಅನಿರ್ಧಿಷ್ಟಾವಧಿ ಕಾಲ ಅವರನ್ನು ತಂಡದಿಂದ ಹೊರಗಿಡಲಾಯಿತು. ಇದಲ್ಲದೆ ಭಾರತ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರೊಂದಿಗೆ ಪಂದ್ಯದ ನಡುವೆ ಮಂಕಿಗೇಟ್ ವಿವಾದದಲ್ಲೂ ಸೈಮಂಡ್ಸ್ ಭಾಗವಾಗಿದ್ದರು. ರೇಡಿಯೋ ಸಂದರ್ಶನದಲ್ಲಿ ಕುಡಿದು ಭಾಗಿಯಾಗಿದ್ದ ಇವರು ಕಿವೀಸ್ ಮಾಜಿ ನಾಯಕ ಬ್ರೆಂಡನ್ ಮೆಕಲ್ಮ್ ರನ್ನು ನಿಂಧಿಸಿದ್ದರು. ಇವೆಲ್ಲಾ ಘಟನೆಗಳು ಅವರನ್ನು ಕ್ರಿಕೆಟ್ ಲೋಕದಿಂದ ಹಿಂದೆ ಸರಿಯುವಂತೆ ಮಾಡಿತ್ತು.
ಶೋಯಬ್ ಆಖ್ತರ್
ಕ್ರಿಕೆಟ್ ಲೋಕದ ಮಾರಕ ವೇಗಿ ಎಂದೇ ಗುರುತಿಸಿಕೊಂಡಿರುವ ಅಖ್ತರ್ ತಮ್ಮ ಕ್ರಿಕೆಟ್ಗಿಂತ ವಿವಾದಕ್ಕೆ ಹೆಚ್ಚು ಹೆಸರುವಾಸಿ. ಇವರು 2003ರಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದು 5 ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದರು. ಮುಂಗೋಪಿಯಾಗಿದ್ದ ಅಖ್ತರ್ ಮೈದಾನದಲ್ಲಿ ಪಂದ್ಯದ ನಡುವೆಯೇ ದಕ್ಷಿಣ ಆಫ್ರಿಕಾದ ಬೌಲರ್ ಪಾಲ್ ಆಡಮ್ಸ್ರನ್ನು ನಿಂಧಿಸಿ 3 ಪಂದ್ಯಗಳಲ್ಲಿ ನಿಷೇಧಕ್ಕೊಳಗಾಗಿದ್ದರು. 2006ರಲ್ಲಿ ತಮ್ಮ ವೇಗದ ಬೌಲಿಂಗ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ನಿಷೇಧಿತ ಮದ್ದು ಸೇವಿಸಿ 2 ವರ್ಷಗಳ ನಿಷೇಧಕ್ಕೆ ಒಳಗಾದರು. 2007ರ ಏಕದಿನ ವಿಶ್ವಕಪ್ ವೇಳೆ ತಂಡದ ಸಹ ಆಟಗಾರ ಆಸಿಫ್ಗೆ ಬ್ಯಾಟ್ನಿಂದ ಹೊಡೆದು ಮತ್ತೊಂದು ವಿವಾದಕ್ಕೀಡಾಗಿದ್ದರು.
ಕೆವಿನ್ ಪೀಟರ್ಸನ್
ಹುಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲಾದರೂ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ವೃತ್ತಿಜೀವನ ಕಂಡುಕೊಂಡಿದ್ದು ಕೆವಿನ್ ಪೀಟರ್ಸನ್ ತಮ್ಮಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಇದ್ದರೂ ವಿವಾದದಿಂದ ಕ್ರಿಕೆಟ್ನಿಂದ ದೂರವಾದರು. ಕ್ರಿಕೆಟ್ನ ಎಲ್ಲಾ ಮಾದರಿಗು ತಕ್ಕ ಕ್ರಿಕೆಟಿಗನಾಗಿದ್ದ ಅವರೂ ತಮ್ಮ ಕೈಯಾರೆ ಕೆರಿಯರ್ ಹಾಳುಮಾಡಿಕೊಂಡರು.
ಮೈಕಲ್ ವಾನ್ ನಂತರ ಇಂಗ್ಲೆಂಡ್ ತಂಡದ ನಾಯಕನಾಗಿ ನೇಮಕವಾಗಿದ್ದ ಪೀಟರ್ಸನ್ ತಂಡದ ಮುಖ್ಯ ಕೋಚ್ ಪೀಟರ್ ಮೋರ್ಸ್ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಇಸಿಬಿ ಇವರಿಬ್ಬರನ್ನು ತಂಡದಿಂದ ಹೊರ ಹಾಕಿತ್ತು. ಐಪಿಎಲ್ಗೆ ಅನುಮತಿ ಬೋರ್ಡ್ ನೀಡದ ಕಾರಣ 2012ರಲ್ಲಿ ಏಕದಿನ ಕ್ರಿಕೆಟ್ನಿಂದಲೇ ನಿವೃತ್ತಿಯಾಗಿದ್ದರು. ತಮ್ಮ ತಂಡದ ನಾಯಕ ಆಂಡ್ರ್ಯೂ ಸ್ಟ್ರಾಸ್ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಅಸಭ್ಯ ಸಂದೇಶ ರವಾನಿಸಿ ಸಿಕ್ಕಿಬಿದ್ದಿದ್ದರು. ಕೊನೆಗೆ 2014ರಲ್ಲಿ ಅವರು ಅತ್ಯುತ್ತಮ ಫಾರ್ಮ್ನಲ್ಲಿದ್ದರೂ ಕೋಚ್ ಆಂಡಿ ಪ್ಲವರ್ ಅವರೊಂದಿಗಿದ್ದ ಮನಸ್ತಾಪದಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇವರನ್ನು ತಂಡದಿಂದ ಹೊರ ಹಾಕಿತ್ತು.
ಎಸ್. ಶ್ರೀಶಾಂತ್
ಭಾರತ ತಂಡ ಗೆದ್ದಿರುವ ಎರಡೂ ವಿಶ್ವಕಪ್ಗಳಲ್ಲೂ ತಂಡದ ಭಾಗವಾಗಿದ್ದ ಶ್ರೀಶಾಂತ್ ತಮ್ಮ ಆರಂಭಿಕ ದಿನಗಳಲ್ಲಿ ವೇಗದ ಬೌಲಿಂಗ್ನಿಂದ ವಿಶ್ವ ಕ್ರಿಕೆಟ್ನಲ್ಲಿ ಶ್ರೇಷ್ಠ ವೇಗಿಗಳ ಸಾಲಿನಲ್ಲಿ ನಿಲ್ಲುವ ಸಾಮರ್ಥ್ಯವಿದೆ ಎನಿಸಿಕೊಂಡಿದ್ದರು. ಆದರೆ ತಮ್ಮ ಕರಿಯರ್ ಆರಂಭದಿಂದಲೇ ಅವರು ವಿವಾದಗಳನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಲೇ ಸಾಗಿದರು.
ಪ್ರಮುಖ ವಿವಾದವೆಂದರೆ 2013ರ ಐಪಿಎಲ್ನ ಸ್ಪಾಟ್ ಫಿಕ್ಸಿಂಗ್. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದ ಅವರು ಪಂದ್ಯದ ವೇಳೆ ಮೋಸದಾಟ ಆಡಿದ್ದಾರೆ ಎಂಬ ಆರೋಪಕ್ಕೆ ಸಿಲುಕಿದ್ದರು. ಈ ಕಾರಣಕ್ಕೆ ಅವರಿಗೆ ಬಿಸಿಸಿಐ ಅಜೀವ ನಿಷೇಧವೇರಿತ್ತು. ಹಲವು ವರ್ಷಗಳ ಕಾನೂನು ಹೋರಾಟ ನಡೆಸಿ ಅಜೀವ ನಿಷೇದಿಂದ ಮುಕ್ತರಾದರು, ಆದರೆ ಅಷ್ಟರಲ್ಲಿ ಅವರ ಕ್ರಿಕೆಟ್ ಜೀವನ ಬಹುತೇಕ ಅಂತ್ಯವಾಗಿತ್ತು.
ಮೊಹಮ್ಮದ್ ಆಸಿಫ್
ಅಖ್ತರ್ ಜೊತೆಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಮತ್ತೊಬ್ಬ ಪಾಕಿಸ್ತಾನ ವೇಗಿ ಮೊಹಮ್ಮದ್ ಆಸಿಫ್ ಕ್ರಿಕೆಟ್ ಜಗತ್ತಿನ ಅಪಾಯಕಾರಿ ವೇಗಿಯಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅವರು ಭವಿಷ್ಯದಲ್ಲಿ ಪಾಕ್ನ ಲೆಜೆಂಡರಿ ವೇಗಿಗಳಾದ ವಸೀಂ ಅಕ್ರಮ್ ಮತ್ತು ವಕಾರ್ ಯೂನಿಸ್ರಂತೆ ಬೆಳೆಯಲಿದ್ದಾರೆ ಎಂಬ ಭರವಸೆ ಉಂಟು ಮಾಡಿದ್ದರು.
ಆದರೆ 2008ರಲ್ಲಿ ನಿಷೇಧಿತ ಸ್ಟೆರಾಯ್ಡ್ ಬಳಸಿ ಸಿಕ್ಕಿಬಿದ್ದಿದ್ದರಿಂದ ಕೆಲಕಾಲ ಅವರನ್ನು ಪಿಸಿಬಿ ನಿಷೇಧಿಸಿತ್ತು. ಮತ್ತೆ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದರಾದರೂ 2010ರ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಲುಕಿ ಸಲ್ಮಾನ್ ಭಟ್, ಮೊಹಮ್ಮದ್ ಅಮಿರ್ ಜೊತೆಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಜೊತೆಗೆ 5 ವರ್ಷಗಳ ಕಾಲ ಕ್ರಿಕೆಟ್ನಿಂದ ನಿಷೇಧಕ್ಕೆ ಒಳಗಾದರು. ಅಲ್ಲಿಂದ ಮತ್ತೆ ಅವರು ಕ್ರಿಕೆಟ್ಗೆ ಮರಳಲಿಲ್ಲ.