ಸರ್ಕಾರದ ಬಂಪರ್ ಆಫರ್: ಪ್ಯಾರಾ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದರೆ 5 ಕೋಟಿ ಬಹುಮಾನ ಘೋಷಣೆ!
ಬೆಂಗಳೂರು, ಆ. 16: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟಗಳ ಐತಿಹಾಸಿಕ ಸಾಧನೆ ಬೆನ್ನಲ್ಲಿಯೇ ಸರ್ಕಾರ ಮಹತ್ವದ ಘೋಷನೆಗಳನ್ನು ಮಾಡುತ್ತಿದೆ. ಭಾನುವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಅಮೃತ ಕ್ರೀಡಾ ದತ್ತು ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಮತ್ತು ಕರ್ನಾಟಕದ ಕ್ರೀಡಾ ಪಟುಗಳ ಸಾಧನೆ ಹಿನ್ನೆಲೆಯಲ್ಲಿ ಹೊಸ ಯೋಜನೆ ಘೋಷಿಸಲಾಗಿತ್ತು. ಮುಂದಿನ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಬಹುದಾದ 75 ಕ್ರೀಡಾಪಟುಗಳನ್ನು ಗುರುತಿಸಿ ವಿಶ್ವದರ್ಜೆಯ ತರಬೇತಿ ಕೊಡುವುದು ಯೋಜನೆಯ ಉದ್ದೇಶ.
ಇದೀಗ ಮತ್ತೊಂದು ಮಹತ್ವದ ಘೋಷಣೆಯನ್ನು ರಾಜ್ಯ ಕ್ರೀಡಾ ಇಲಾಖೆ ಮಾಡಿದೆ. ಟೋಕಿಯೋ ಒಲಿಂಪಿಕ್ಸ್ ಬೆನ್ನಲಿಯೇ ಅಲ್ಲಿ ಪ್ಯಾರಾ ಒಲಿಂಪಿಕ್ಸ್ ನಡೆಯಲಿದ್ದು, ರಾಜ್ಯದಿಂದ ಇಬ್ಬರು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇಬ್ಬರೂ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನವಾಗಿ ತಲಾ ರೂ. 10 ಲಕ್ಷ ರೂ. ಗಳನ್ನು ಒದಗಿಸಲಾಗಿದೆ. ಜೊತೆಗೆ ಮತ್ತೊಂದು ಮಹತ್ವದ ಘೋಷಣೆಯನ್ನು ರಾಜ್ಯ ಕ್ರೀಡಾ ಇಲಾಖೆ ಮಾಡಿದೆ.
ಪ್ಯಾರಾ ಒಲಿಂಪಿಕ್ಸ್: ಕ್ರೀಡಾ ಪಟುಗಳಿಗೆ ಬಂಪರ್ ಆಫರ್!
ಟೋಕಿಯೋ ಪ್ಯಾರಾಒಲಿಂಪಿಕ್ಸ್ 2021 ಇದೇ ಆಗಸ್ಟ್ 24ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ. ಪ್ಯಾರಾ ಒಲಿಂಪಿಕ್ಸ್ನಲ್ಲಿ ಭಾರತದ 54 ಕ್ರೀಡಾಪಟುಗಳು 9 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಅವರೊಂದಿಗೆ ರಾಜ್ಯದ ಇಬ್ಬರು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಪ್ಯಾರಾ ಪವರ್ ಲಿಫ್ಟಿಂಗ್ ಶಕೀನ್ ಖಾತುನ್ ಹಾಗೂ ಈಜು ಕ್ರೀಡೆಯಲ್ಲಿ ನಿರಂಜನ್ ಮುಕುಂದನ್ ಪಾಲ್ಗೊಳ್ಳುತ್ತಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ರಾಜ್ಯದ, ದೇಶದ ಕೀರ್ತಿಪತಾಕೆ ಹಾರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ ರಾಜ್ಯ ಸರ್ಕಾರದಿಂದ ರೂ. 5 ಕೋಟಿ, ಬೆಳ್ಳಿ ಗೆದ್ದರೆ ರೂ. 3 ಕೋಟಿ ಹಾಗೂ ಕಂಚಿನ ಪದಕ ಗೆದ್ದರೆ ರೂ. 2 ಕೋಟಿ ಬಹುಮಾನ ನೀಡಲಾಗುವುದು ಎಂದು ಸಚಿವ ಡಾ. ನಾರಾಯಣಗೌಡ ಘೊಷಣೆ ಮಾಡಿದ್ದಾರೆ.
ತಲಾ ರೂ. 10 ಲಕ್ಷ ರೂ. ಪ್ರೋತ್ಸಾಹಧನ
ವಿಧಾನಸೌಧದಲ್ಲಿ ಈ ಇಬ್ಬರೂ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಪ್ರೋತ್ಸಾಹಧನವಾಗಿ ತಲಾ ರೂ. 10 ಲಕ್ಷದ ಚೆಕ್ ವಿತರಿಸಿದ್ದಾರೆ. ಜೊತೆಗೆ ಕ್ರೀಡಾಪಟುಗಳ ಪೋಷಕರಿಗೆ ಸನ್ಮಾನ ಮಾಡಲಾಗಿದೆ.
ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ "ಶಿಖರದಿಂದ ಸಾಗರ" ಸಾಹಸ ಯಾನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕದ 5 ಯುವತಿಯರು ಕಾಶ್ಮೀರದಲ್ಲಿ Kolhoi (5425 ಮೀ) ಶಿಖರವನ್ನು ಏರಲಿದ್ದಾರೆ. ಆ ಬಳಿಕ ನಂತರ 3,000 ಕಿ.ಮೀ. ಸೈಕಲ್ ರ್ಯಾಲಿ ಮೂಲಕ ಕಾರವಾರ ತಲುಪಲಿದ್ದಾರೆ. ಕಾರವಾರ ತಲುಪಿದ ಬಳಿಕ ಕರ್ನಾಟಕದ ಕರಾವಳಿ ತೀರದಲ್ಲಿ 300 ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಸಾಹಸ ಯಾನ ಆರಂಭಿಸಿ, ಅದು ಮಂಗಳೂರಿನಲ್ಲಿ ಮುಗಿಯಲಿದೆ. ಅದು ಸುಮಾರು 45 ದಿನಗಳ ಅಭಿಯಾನವಾಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ ಬಿಂಬಿಸುವಂತಹ ವಿಭಿನ್ನ ಪ್ರಯತ್ನ ಎಂದು ಕ್ರೀಡಾ ಸಚಿವ ನಾರಾಯಣಗೌಡ ವಿವರಿಸಿದ್ದಾರೆ.
ಕಯಾಕಿಂಗ್ ಸಾಹಸ ಯಾನ ಮಾಡಲಿದ್ದಾರೆ ಯುವತಿಯರು!
ಕಯಾಕಿಂಗ್ ಸಾಹಸ ಯಾನದಲ್ಲಿ ಶಿವಮೊಗ್ಗದವರಾದ ಐಶ್ವರ್ಯ. ವಿ, ಧನಲಕ್ಷ್ಮೀ, ಬೆಂಗಳೂರಿನ ಆಶಾ, ಮಡಿಕೇರಿಯ ಪುಷ್ಪಾ ಹಾಗೂ ಮೈಸೂರಿನ ಬಿಂದು ಭಾಗಿಯಾಗಲಿದ್ದಾರೆ. ಇವರೆಲ್ಲರೂ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಶಿವಮೊಗ್ಗದ ಐಶ್ವರ್ಯ 2017ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಮಿಷನ್ ಸುಭದ್ರ ಎಕ್ಸ್ಪಿಡಿಷನ್ನ ಭದ್ರಾ ನದಿಯಲ್ಲಿ 135 ಕಿ.ಮೀ ವೈಟ್ ವಾಟರ್ ಕಯಾಕಿಂಗ್ ಯಾನ ಮಾಡಿದ್ದಾರೆ. ಮತ್ತೊಬ್ಬ ಕ್ರೀಡಾಪಟು ಧನಲಕ್ಷ್ಮೀ 2017 ರಲ್ಲಿ ಓರಿಯೆಂಟೇಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ನಲ್ಲಿ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಿನ ಆಶಾ 2019 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ನಲ್ಲಿ ತೇರ್ಗಡೆಹೊಂದಿದ್ದಾರೆ. ಮಡಿಕೇರಿಯ ಪುಷ್ಪಾ 2017 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಮೈಸೂರಿನ ಬಿಂದು 2017 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಮಾಡಿದ್ದಾರೆ ಎಂದು ಕ್ರೀಡಾ ಇಲಾಖೆ ಮಾಹಿತಿ ಕೊಟ್ಟಿದೆ.
ಶಾಲೆಗೂಂದು ಮೈದಾನ ಕಡ್ಡಾಯ
'ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ ಒಂದು ಗಂಟೆ ದೈಹಿಕ ಶಿಕ್ಷಣಕ್ಕೆ ಸಮಯ ಮೀಸಲಿಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಅಲ್ಲದೆ ಪ್ರತಿಯೊಂದು ಶಾಲೆಗೂ ಖಡ್ಡಾಯವಾಗಿ ಮೈದಾನ ಇರಲೇಬೇಕು. ಒಂದು ವೇಳೆ ಮೈದಾನ ಇಲ್ಲದಿದ್ದಲ್ಲಿ ಬಾಡಿಗೆ ಆಧಾರದಲ್ಲಾದರೂ ಭೂಮಿ ಪಡೆದು, ಮಕ್ಕಳಿಗೆ ದೈಹಿಕ ಶಿಕ್ಷಣ ನೀಡಬೇಕು. ವ್ಯಾಯಾಮ, ಕ್ರೀಡೆ ಮಕ್ಕಳಿಗೆ ಅತ್ಯವಶ್ಯಕ. ಈ ಬಗ್ಗೆ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದೇನೆ. ಶಾಲೆಗಳು ಸರ್ಕಾರದ ಆದೇಶ ಪಾಲಿಸದಿದ್ದಲ್ಲಿ ಪರವಾನಿಗೆಯನ್ನೇ ರದ್ದು ಮಾಡುವಂತೆಯೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದೇನೆ" ಎಂದು ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.