ಕರ್ನಾಟಕದ ಕ್ರೀಡಾಪಟುಗಳಿಗೆ ಸಂತಸದ ಸುದ್ದಿ ಕೊಟ್ಟ ರಾಜ್ಯ ಸರ್ಕಾರ!
ಬೆಂಗಳೂರು, ಆ. 29: ಈ ಹಿಂದೆ ಒಲಿಂಪಿಕ್ಸ್ನಲ್ಲಿ ಒಂದು ಪದಕವನ್ನಾದರೂ ನಮ್ಮ ಕ್ರೀಡಾಪಟುಗಳು ತರಲಿ ಎಂದು ಆಶಿಸುತ್ತಿದ್ದ ಭಾರತೀಯರಿಗೆ ಈ ಸಲದ ಟೋಕಿಯೋ ಒಲಿಂಪಿಕ್ಸ್ನಲ್ಲಿ ನಮ್ಮ ಕ್ರೀಡಾಪಟುಗಳ ಸಾಧನೆ ಹೊಸ ಭರವಸೆ ಮೂಡಿಸಿದೆ. ನಾವು ಯಾರಿಗೇನು ಕಮ್ಮಿಯಿಲ್ಲ ಎಂಬಂತೆ ಭಾರತೀಯ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ರಾಜ್ಯದಿಂದ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವಂತೆ ಮಾಡಲು ರಾಜ್ಯ ಸರ್ಕಾರ ತಯಾರಿ ಆರಂಭಿಸಿದೆ.
ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಒಲಂಪಿಕ್ ಸಂಸ್ಥೆ ಪದ್ಮಭೂಷಣ ಮೇಜರ್ ಧ್ಯಾನಚಂದ್ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ಒಲಂಪಿಯನ್ಗಳು ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಸನ್ಮಾನಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಘೋಷಣೆ ಮಾಡಿದ್ದಾರೆ. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ಗೆ ರಾಜ್ಯದ 75 ಕ್ರೀಡಾಪಟುಗಳನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಕ್ರೀಡಾಪಟುಗಳ ಪರವಾಗಿ ಕ್ರೀಡಾ ಸಚಿವ ನಾರಾಯಣಗೌಡ ಸಿಎಂ ಬೊಮ್ಮಾಯಿ ಎದುರು ಹೊಸ ಬೇಡಿಕೆ ಇಟ್ಟಿದ್ದಾರೆ. ಆ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಿರುವ ಭರವಸೆ ಏನು? ಮುಂದಿದೆ ಮಾಹಿತಿ!
"ಒಲಿಂಪಿಕ್ಸ್ಗೆ ಕನ್ನಡಿಗರು-ಯಾಕಾಗಬಾರದು"
"ಒಲಿಂಪಿಕ್ಸ್ಗೆ ಕನ್ನಡಿಗರು-ಯಾಕಾಗಬಾರದು" ಎಂಬ ಘೋಷವಾಕ್ಯ ಇಟ್ಟುಕೊಂಡು ಪ್ಯಾರಿಸ್ ಒಲಿಂಪಿಕ್ಸ್ಗೆ ಸಿದ್ಧತೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಒಲಂಪಿಯನ್ಗಳು ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಸನ್ಮಾನಿಸಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಹತ್ವದ ವಿಚಾರವನ್ನು ಸಿಎಂ ತಿಳಿಸಿದ್ದಾರೆ. "ನಾನು ಗೃಹ ಸಚಿವನಾಗಿದ್ದಾಗ ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಪಟುಗಳ ನೇಮಕಕ್ಕೆ ಅನುಮತಿ ನೀಡಿದ್ದೆ. ಈಗ ಕ್ರೀಡಾಪಟುಗಳನ್ನು ಇತರೆ ಇಲಾಖೆಗಳಲ್ಲಿ ನೇಮಕಮಾಡಿಕೊಳ್ಳುವ ಬಗ್ಗೆ ನನ್ನ ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸುತ್ತದೆ. ಇದು ಕ್ರೀಡೆಗೆ ಒಂದು ರೀತಿಯ ಪ್ರೋತ್ಸಾಹ ಇದ್ದಂತೆ" ಎಂದಿದ್ದಾರೆ.
ಕ್ರೀಡೆ ದೇಶದ ವರ್ಚಸ್ಸು ವೃದ್ಧಿಸಲು ಸಹಕಾರಿ
ಮೇಜರ್ ಧ್ಯಾನ ಚಂದ್ರ ಅವರು ದೇಶಕ್ಕೆ ಸ್ಫೂರ್ತಿ. ಭಾರತಕ್ಕೆ ಮೂರು ಒಲಂಪಿಕ್ಸ್ ಚಿನ್ನದ ಪದಕವನ್ನು ಗೆದ್ದ ಅವರ ಸಾಧನೆ ಯಾರೂ ಮುರೆಯಲಾಗದ ದಾಖಲೆಯಾಗಿ ಉಳಿದಿದೆ. ಪ್ರಧಾನಿ ಮೋದಿ ಖೇಲ್ ರತ್ನ ಪ್ರಶಸ್ತಿಯನ್ನು 'ಮೇಜರ್ ಧ್ಯಾನ ಚಂದ್ ಖೇಲ್ ರತ್ನ ಪ್ರಶಸ್ತಿ" ಎಂದು ಘೋಷಿಸಿದ್ದಾರೆ. ಖೇಲೋ ಇಂಡಿಯಾ ಎನ್ನುವ ಮೂಲಕ ಯುವಜನರು ಕ್ರೀಡೆಯತ್ತ ಮುಖ ಮಾಡಲು ಪ್ರೋತ್ಸಾಹಿಸಿದ್ದಾರೆ. ಕ್ರೀಡೆ ನಮ್ಮಲ್ಲಿ ಶಿಸ್ತು, ಆರೋಗ್ಯವನ್ನು ತುಂಬಿ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರಲ್ಲದೆ, ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಸ್ಫೂರ್ತಿಯನ್ನು ಬೆಳೆಸುತ್ತದೆ. ಕ್ರೀಡೆ ದೇಶದ ವರ್ಚಸ್ಸನ್ನು ವೃದ್ಧಿಸಲು ಸಹಕಾರಿಯಾಗಿದೆ ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ರೀಡಾಪಟು!
ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್ನಲ್ಲಿ ಪೂರಕ ಅನುದಾನ ಒದಗಿಸಲಾಗುವುದು. ಜೊತೆಗೆ ಗುಣಮಟ್ಟದ ಮೂಲಸೌಕರ್ಯವುಳ್ಳ ಕ್ರೀಡಾ ಸಂಕೀರ್ಣವನ್ನು ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದ ತರಬೇತಿ, ಕೋಚಿಂಗ್ ಹಾಗೂ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸ್ವತಃ ಕ್ರೀಡಾಪಟುವಾಗಿದ್ದು, ಅನೇಕ ಅಂತರರಾಜ್ಯ ಹಾಗೂ ಅಂತರ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಯನ್ನು ಮತ್ತಷ್ಟು ಮಾಡಲಾಗುವುದು. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಸ್ಥಾಪಿಸಿರುವ 'Hall of fame' ಸಂಗ್ರಹಾಲಯ ಸ್ಥಾಪನೆ ಮಾಡಿದೆ. ಆ ಮೂಲಕ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಸಾಧಕರ ಭಾವಚಿತ್ರ ಸಂಗ್ರಹ ಮಾಡುವ ಮೂಲಕ ಯುವಜನರಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದರು.