ಅಶ್ವಥ ಎಲೆಯ ಮೇಲೆ ಸಚಿನ್ ಭಾವಚಿತ್ರ: ಉಡುಪಿ ಕಲಾವಿದನಿಗೆ ಸಚಿನ್ ಫಿದಾ!
ಮಂಗಳೂರು, ಜೂ. 16: ಕ್ರಿಕೆಟ್ ದೇವರು, ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್ ಉಡುಪಿಯ ಕಲಾವಿದನ ಕಲಾ ಚಾತುರ್ಯಕ್ಕೆ ಭೇಷ್ ಅಂದಿದ್ದಾರೆ. ಉಡುಪಿ ಮರ್ಣೆಯ ಕಲಾವಿದ ಮಹೇಶ್, ಅಶ್ವಥ ಎಲೆಯ ಮೇಲೆ ರಚಿಸಿದ ಸಚಿನ್ ಭಾವಚಿತ್ರಕ್ಕೆ ಸ್ವತಃ ಸಚಿನ್ ತೆಂಡೂಲ್ಕರ್ ಮನಸೋತಿದ್ದಾರೆ. ಮಹೇಶ್ ರಚಿಸಿದ ಚಿತ್ರದಲ್ಲಿ ಅಡಗಿದ ನಿಷ್ಕಲ್ಮಶ ಪ್ರೀತಿಗೆ ತಲೆಬಾಗಿದ ಸಚಿನ್, ತನ್ನ ಹಸ್ತಾಕ್ಷರ ಇರುವ ಎರಡು ಫೋಟೋ ಸಹಿತ ಕಲಾವಿದನಿಗೆ ಪ್ರಶಂಸಾ ಪತ್ರ ಕಳುಹಿಸಿದ್ದಾರೆ.
ಅಮೆರಿಕಾದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಭಾರತೀಯ ಸೇನೆ ಸೇರಿದ ಬೆಳ್ತಂಗಡಿ ಯುವಕ
ಮಹೇಶ್ ನೈಪುಣ್ಯತೆ ಬೆರಗಾದ ಕ್ರಿಕೆಟ್ ದೇವರು
ಕಲಾವಿದ ಮಹೇಶ್ ಮರ್ಣೆ ಅಶ್ವತ್ಥದ ಎಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ರಚಿಸುವ ಮೂಲಕ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ. ಅಶ್ವತ್ಥ ಎಲೆಯಲ್ಲಿ ಭಾವ ಚಿತ್ರಗಳನ್ನು ಮೂಡಿಸುವಲ್ಲಿ ಮಹೇಶ್ ಸಿದ್ಧಹಸ್ತ ಕಲಾವಿದರಾಗಿದ್ದಾರೆ. 2015ರಲ್ಲಿ ಮಹೇಶ್ ಐಸ್ ಕ್ರೀಮ್ ಕಡ್ಡಿಗಳು ಮತ್ತು ಬೆಂಕಿ ಕಡ್ಡಿಗಳಿಂದ ರಚಿಸಿದ ಗಣಪತಿಯ ಕಲಾಕೃತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮನ್ನಣೆ ಪಡೆದಿತ್ತು. ಅತ್ಯಂತ ಸೂಕ್ಷ್ಮವಾಗಿ ಅಶ್ವತ್ಥ ಮರದ ಎಲೆಯಲ್ಲಿ ವಿವಿಧ ಮುಖಗಳ ಪಡಿಯಚ್ಚು ಮೂಡಿಸುವುದರಲ್ಲಿ ಮಹೇಶ್ ನೈಪುಣ್ಯತೆ ಸಾಧಿಸಿದ್ದಾರೆ.
ಎಕ್ಸ್ ಕ್ಯೂಸಿವ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ ಕಲಾಕೃತಿ
ಕೇವಲ ಏಳು ನಿಮಿಷಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ರಚಿಸುವ ಮೂಲಕ ಇವರ ಈ ಕಲಾಕೃತಿ ಎಕ್ಸ್ ಕ್ಯೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿತ್ತು. ಉತ್ತರಪ್ರದೇಶದ ಬರೇಲಿಯ ಲಾಟ ಪ್ರತಿಷ್ಠಾನಕ್ಕೆ ಅಶ್ವತ್ಥ ಎಲೆಯ ಮೂಲಕ ರಚಿಸಿದ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರದ ವಿಡಿಯೋವನ್ನು ಕಳುಹಿಸಲಾಗಿತ್ತು. ಈ ಸೂಕ್ಷ್ಮ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಂಸ್ಥೆ ಎಕ್ಸ್ ಕ್ಯೂಸಿವ್ ವರ್ಲ್ಡ್ ರೆಕಾರ್ಡ್ಗೆ ಮರ್ಣೆ ಅವರ ಹೆಸರನ್ನು ಸೇರ್ಪಡೆಗೊಳಿಸಿತ್ತು.
ಈ ದಾಖಲೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಸಚಿನ್ ತೆಂಡೂಲ್ಕರ್ ಮಹೇಶ್ ಮರ್ಣೆ ಅವರಿಗೆ ಪ್ರಶಂಸಾಪತ್ರವನ್ನು ಕಳುಹಿಸಿದ್ದಾರೆ. " ನನ್ನ ಮೇಲೆ ಪ್ರೀತಿ ಇಟ್ಟು ನೀವು ರಚಿಸಿರುವ ಕಲಾಕೃತಿ ಕಂಡು ನಾನು ಬೆರಗಾಗಿದ್ದೇನೆ. ನೀವು ನನ್ನ ಮೇಲೆ ತೋರಿಸಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಸಂಗ್ರಹದಲ್ಲಿರುವ ಎರಡು ಅಮೂಲ್ಯ ಫೋಟೋಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ನನ್ನ ಎರಡನೇ ಇನ್ನಿಂಗ್ಸ್ ಗೂ ಕೂಡಾ ನೀವು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲ ನನಗೆ ಪ್ರೇರಣೆಯಾಗಿದೆ"ಅಂತಾ ಪತ್ರದಲ್ಲಿ ಹೇಳಿದ್ದಾರೆ.
ಕೃಷಿ, ದೈವಸ್ಥಾನಗಳ ಭೂಮಿ ಮೇಲೆ ಕೈಗಾರಿಕೆಗಳ ಕಣ್ಣು
ಉಡುಗೊರೆಯಾಗಿ 100ನೇ ಸೆಂಚುರಿ ಭಾರಿಸಿರುವ ಕ್ಷಣದ ಅಮೂಲ್ಯ ಭಾವಚಿತ್ರ
ಆರು ತಿಂಗಳ ಹಿಂದೆ ಸಚಿನ್ ಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ಚಿತ್ರಿಸಿ ಪ್ರೇಮ್ ಹಾಕಿ ಫೋಟೋವನ್ನು ಅಂಚೆ ಮೂಲಕ ಕಳುಹಿಸಿದ್ದರು. ಈ ಚಿತ್ರ ನೋಡಿ ಸಂತಸ ಪಟ್ಟಿರುವ ಸಚಿನ್, ತನ್ನ ಹಸ್ತಾಕ್ಷರದೊಂದಿಗೆ ವೃತ್ತಿ ಜೀವನದಲ್ಲಿ 100ನೇ ಸೆಂಚುರಿ ಬಾರಿಸಿರುವ ಕ್ಷಣದ ಅಮೂಲ್ಯ ಭಾವಚಿತ್ರ, ವರ್ಲ್ಡ್ಕಪ್ ಎತ್ತಿರುವ ಚಿತ್ರದ ಜತೆ ಪ್ರಶಂಸಾ ಪತ್ರ ಲಗತ್ತಿಸಿ ಕಳುಹಿಸಿದ್ದಾರೆ.
Recommended Video
ಈ ಅದ್ಭುತವಾದ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್, "ನಾನು ಈ ಚಿತ್ರಕ್ಕೆ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷೆ ಮಾಡಿರಲಿಲ್ಲ. ಕ್ರಿಕೆಟ್ ನ ದಂತಕಥೆ ಸಚಿನ್ ಮನೆಗೆ ಚಿತ್ರ ಕಳುಹಿಸಿದಾಗ ಯಾವ ನಿರೀಕ್ಷೆ ಇರಲಿಲ್ಲ. ಸಚಿನ್ ಅವರು ಉನ್ನತ ಸ್ಥಾನದಲ್ಲಿದ್ದರೂ ಸಾಮಾನ್ಯ ಕಲಾವಿದನಿಗೆ ನೀಡಿದ ಪ್ರತಿಕ್ರಿಯೆಗೆ ಹೃದಯ ತುಂಬಿ ಬಂದಿದೆ" ಅಂತಾ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)