ಕ್ರೀಡೆಗೆ ಜಿಡಿಪಿಯ ಒಂದರಷ್ಟು ಅನುದಾನ ಮೀಸಲಿಡಿ- ಸಚಿವ ಡಾ.ನಾರಾಯಣಗೌಡ ಸಲಹೆ
ಗುಜರಾತ್ ಜೂ.24: ಯುವ ಸಬಲೀಕರಣ ಮತ್ತು ಕ್ರೀಡೆಗೆ ದೇಶದ ಜಿಡಿಪಿಯ ಒಂದರಷ್ಟು ಅನುದಾನವನ್ನು ಮೀಸಲಿಡುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಸಲಹೆ ನೀಡಿದ್ದಾರೆ.
ಗುಜರಾತ್ನ ಕೆವಾಡಿಯಾದಲ್ಲಿ ಇಂದು(ಜೂನ್ 24) ಮತ್ತು ನಾಳೆ(ಜೂನ್25) ಎರಡು ದಿನಗಳ ಕಾಲ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರುಗಳ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದು ಸಚಿವ ಡಾ.ನಾರಾಯಣಗೌಡ ಪಾಲ್ಗೊಂಡಿದ್ದಾರೆ. ಈ ಸಮ್ಮೇಳನದಲ್ಲಿ ದೇಶದಲ್ಲಿ ಕ್ರೀಡೆ ಅಭಿವೃದ್ಧಿ ಹಾಗೂ ಕ್ರೀಡಾ ಚಟುವಟಿಕೆಗಳ ಉತ್ತೇಜನ ಸೇರಿದಂತೆ ಹಲವು ವಿಚಾರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಗುತ್ತಿದೆ.
ಸಮ್ಮೇಳನದಲ್ಲಿ ಭಾಗವಹಿಸಿರುವ ಸಚಿವ ಡಾ.ನಾರಾಯಣಗೌಡ ಅವರು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಜೊತೆಗೆ ಯುವ ಸಬಲೀಕರಣ ಮತ್ತು ಕ್ರೀಡೆಗೆ ದೇಶದ ಜಿಡಿಪಿಯ ಒಂದರಷ್ಟು ಅನುದಾನವನ್ನು ಮೀಸಲಿಡುವಂತೆ ಸಚಿವರು ಸಲಹೆ ನೀಡಿದರು.
ರಾಜ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕೈಗೊಂಡಿರುವ ಹಲವು ಯೋಜನೆಗಳ ಬಗ್ಗೆಯೂ ಕ್ರೀಡಾ ಸಚಿವರುಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಕೈಗೊಂಡಿದ್ದ ಕ್ರಮಗಳ ಬಗ್ಗೆ ವಿವರಿಸಿದರು.
ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಯೋಜನೆ
ಅಮೃತ ಕ್ರೀಡಾ ದತ್ತು ಯೋಜನೆ, ಕ್ರೀಡಾ ಅಂಕಣ ಯೋಜನೆ ಸೇತಿದಂತೆ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ರೂಪಿಸಿರುವ ಯೋಜನೆಗಳ ಬಗ್ಗೆ ರಾಷ್ಟ್ರೀಯ ಸಮ್ಮೇಳನದಲ್ಲಿ ಸಚಿವ ಡಾ.ನಾರಾಯಣಗೌಡ ಅವರು ಮಾಹಿತಿ ನೀಡಿದರು.
ಕರ್ನಾಟಕದ ಕ್ರೀಡಾ ಇಲಾಖೆ ಕಾರ್ಯವೈಖರಿಗೆ ಶ್ಲಾಘನೆ
ಇದೇ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ನ್ನು ಬಹಳ ಅದ್ಭುತವಾಗಿ ಆಯೋಜಿಸಿದ್ದರು. ಇದರ ಜೊತೆಗೆ ಕರ್ನಾಟಕ ಸರ್ಕಾರ ಕ್ರೀಡೆಗೆ ಬಹಳ ಮಹತ್ವವನ್ನು ನೀಡಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ಅವರು ರಾಜ್ಯ ಸರ್ಕಾರದ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಎಲ್ಲಾ ರಾಜ್ಯಗಳ ಕ್ರೀಡಾ ಸಚಿವರು ಭಾಗೀ
ಎರಡು ರಾಷ್ಟ್ರೀಯ ಸಮ್ಮೇಳನಕ್ಕೆ ಕೇಂದ್ರ ಸರ್ಕಾರದ ವಾರ್ತಾ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್, ಕೇಂದ್ರ ಕ್ರೀಡಾ ಖಾತೆ ರಾಜ್ಯ ಖಾತೆ ಸಚಿವ ನಿಶಿತ್ ಪ್ರಮಾಣಿಕ್ ಚಾಲನೆ ನೀಡಿದ್ದು, ದೇಶದ ಎಲ್ಲಾ ರಾಜ್ಯಗಳ ಕ್ರೀಡಾ ಸಚಿವರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದೇ ವೇಳೆಯಲ್ಲಿ ಕ್ರೀಡಿಗೆ ಸಿಗಬೇಕಾದ ಸ್ಥಾನಮಾನಗಳು ಮತ್ತು ಪ್ರೋತ್ಸಾಹದ ಬಗ್ಗೆ ಪರಸ್ಪರ ಮಂತ್ರಿಗಳು ಚರ್ಚೆಯನ್ನು ನಡೆಸಿದರು.
ಕರ್ನಾಟಕಕ್ಕೆ ಗುಜರಾತ್ನಲ್ಲಿ ಹೆಮ್ಮೆಯ ಗರಿ
ಕರ್ನಾಟಕ ರಾಜ್ಯ ಇತ್ತೀಚೆಗಷ್ಟೇ ಖೇಲೋ ಇಂಡಿಯಾ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಪೂರೈಸಿದ್ದರು. ಇದರಿಂದಾಗಿ ಕರ್ನಾಟಕದ ಕ್ರೀಡ ಸಚಿವರಾದ ನಾರಾಯಣ ಗೌಡ ಹಲವರಿಗೆ ಚಿರಪರಿಚಿತರಾಗಿದ್ದರು. ಖೇಲೋ ಇಂಡಿಯಾದಂತೆ ಮತ್ತಷ್ಟು ಕ್ರೀಡೆಗಳನ್ನು ಆಯೋಚಿಸುವ ಯೋಚನೆಯಲ್ಲಿರುವ ನಾರಾಯಣ ಗೌಡರು ಕ್ರೀಡಿಗೆ ಕೇಂದ್ರದಿಂದ ಮತ್ತಷ್ಟು ಉತ್ತೇಜನ ಸಿಗುವ ಭರವಸೆಯಲ್ಲಿದ್ದಾರೆ. ಎರಡು ದಿನದ ರಾಷ್ಟ್ರೀಯ ಸಮ್ಮೇಳನಕ್ಕೆ ಗುಜರಾತ್ಗೆ ಕರ್ನಾಟಕದಿಂದ ಸಚಿವ ಡಾ.ನಾರಾಯಣಗೌಡರ ಜೊತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.